ಭಟ್ಕಳ: ಬ್ಯಾಂಕಿಗೆ ಬಂದ ಗ್ರಾಹಕರಿಗೆ ಉತ್ತಮ ನಗುಮುಖದ ಸೇವೆ ನೀಡಿದಾಗ ಮಾತ್ರ ಗ್ರಾಹಕರ ಮನ ಗೆಲ್ಲಲು ಸಾಧ್ಯವಾಗುತ್ತದೆ ಎಂದು ಶಾಸಕ ಸುನೀಲ್ ನಾಯ್ಕ ಹೇಳಿದರು.
ಅವರು ಪಿ.ಎಲ್ಡಿ ಬ್ಯಾಂಕಿನಲ್ಲಿ 37 ವರ್ಷಗಳ ಕಾಲ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ವಾಸು ನಾಯ್ಕ ಅವರಿಗೆ ಬ್ಯಾಂಕಿನ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಿ ಬೀಳ್ಕೊಡುಗೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ನಮ್ಮ ಬ್ಯಾಂಕಿನಲ್ಲಿ ಸದಾ ನಗುಮುಖದಿಂದ ಎಲ್ಲರ ಪ್ರತಿ ವಿಶ್ವಾಸಕ್ಕೆ ಅರ್ಹರಾಗಿ ಸೇವೆ ಸಲ್ಲಿಸಿ ವಾಸು ನಾಯ್ಕರವರು ನಿವೃತ್ತಿ ಹೊಂದಿದ್ದಾರೆ. ಅವರು ಭಟ್ಕಳದ ಪಿ.ಎಲ್.ಡಿ ಬ್ಯಾಂಕನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಕಾರಣೀಭೂತರಾಗಿದ್ದಾರೆ. ಹಲವಾರು ಕೃಷಿಕರಿಗೆ, ಬಡವರಿಗೆ ಕಷ್ಟದ ಕಾಲದಲ್ಲಿ ಹಾಗೂ ಮದುವೆ ಸಂದರ್ಭದಲ್ಲಿ ಒಂದೇ ದಿನ ಗ್ರಾಹಕರಿಗೆ ಸಾಲವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಅವರ ಪ್ರಾಮಾಣಿಕ ಕಾರ್ಯವನ್ನು ಬ್ಯಾಂಕಿನ ಇತರ ಸಿಬ್ಬಂದಿಗಳೂ ಮೈಗೂಡಿಸಿಕೊಳ್ಳಬೇಕು ಎಂದರು.
ಗ್ರಾಹಕರ ಪರವಾಗಿ ಹಿರಿಯ ಸಹಕಾರಿ ಸಂಘದ ಧುರೀಣ ಹಾಗೂ ಜಾಲಿ ಬ್ಯಾಂಕಿನ ಮಾಜಿ ಅಧ್ಯಕ್ಷ ಡಿ.ಬಿ.ನಾಯ್ಕ ಮಾತನಾಡಿ, ಭಟ್ಕಳ ಪಿ.ಎಲ್.ಡಿ. ಬ್ಯಾಂಕು ಇಡಿ ರಾಜ್ಯದಲ್ಲಿಯೇ ಅತ್ತುತ್ತಮ ಬ್ಯಾಂಕ್ ಎಂಬ ಪ್ರಶಸ್ತಿ ಪಡೆಯಲು ವಾಸು ನಾಯ್ಕರವರ ಪ್ರಾಮಾಣಿಕ ಕರ್ತವ್ಯವೇ ಸಾಕ್ಷಿಯಾಗಿದೆ. ಈ ಹಿಂದಿನ ಪ್ರಧಾನ ವ್ಯವಸ್ತಾಪಕರಾಗಿದ್ದ ದಿವಂಗತ ತಿಮ್ಮಪ್ಪ ನಾಯ್ಕ ರವರ ಹಾದಿಯಲ್ಲಿಯೇ ಭಟ್ಕಳ ಪಿಎಲ್ಡಿ ಬ್ಯಾಂಕ್ ಉತ್ತಮ ಅಬಿವೃದ್ಧಿ ಸಾಧಿಸಲು ವಾಸು ನಾಯ್ಕರವರ ಕೊಡುಗೆ ಅಪಾರ. ಅವರ ನಗುಮುಖದ ಸೇವೆಯಿಂದ ಅಪಾರ ಗ್ರಾಹಕರನ್ನು ಸೆಳೆದು ಬ್ಯಾಂಕಿನ ಅಬಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿದಿದ್ದಾರೆ. ಅವರ ನಿವೃತ್ತಿ ಜೀವನ ಸುಖಕರವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ನಿರ್ದೇಶಕರ ಪರವಾಗಿ ಬ್ಯಾಂಕಿನ ಉಪಾಧ್ಯಕ್ಷೆ ಗಾಯತ್ರಿ ವಿಜಯಕುಮಾರ, ನಿರ್ದೇಶಕರಾದ ಸುರೇಶ ನಾಯ್ಕ, ಸಂತೋಷ ನಾಯ್ಕ ಮಾತನಾಡಿದರು. ಗ್ರಾಹಕರ ಪರವಾಗಿ ಸಿ.ಜಿ.ಗೌಡ, ಜಿ.ಪಿ.ಮಿರಾಸಿ, ಸಿಎಸ್.ಪಾಟೀಲ್, ಶಾಂತಾರಾಮ ನಾಯ್ಕ ಹಾಗೂ ಎಂ.ಆರ್.ನಾಯ್ಕ ಮಾತನಾಡಿದರು. ಬ್ಯಾಂಕಿನ ಸಿಬ್ಬಂದಿಗಳ ಪರವಾಗಿ ಸತೀಶ ನಾಯ್ಕ, ನಾಗೇಶ ನಾಯ್ಕ ಮಾತನಾಡಿದರು.
ವೇದಿಕೆಯಲ್ಲಿ ವಾಸು ನಾಯ್ಕರವರಿಗೆ ಬ್ಯಾಂಕಿನ ಪರವಾಗಿ ಫಲಪುಷ್ಪ ನೀಡಿ ಹಾರ ಹಾಕಿ ಗೌರವಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ವಿವಿಧ ಸಂಘ- ಸಂಸ್ಥೆಗಳ ಪರವಾಗಿ ನಿವೃತ್ತರಾದ ವಾಸು ನಾಯ್ಕ ಅವರನ್ನು ಗೌರವಿಸಲಾಯಿತು. ನಿವೃತ್ತರಾದ ವಾಸು ನಾಯ್ಕ ಗೌರವ ಸ್ವೀಕರಿಸಿ ಮಾತನಾಡಿ, ನನ್ನ ಅವಧಿಯಲ್ಲಿಯೇ ಬ್ಯಾಂಕು ಇಷ್ಟು ದೊಡ್ಡಮಟ್ಟದಲ್ಲಿ ಅಭಿವೃದ್ಧಿ ಹೊಂದಿದೆ ಎಂದು ಹೇಳುವುದು ಸರಿಯಲ್ಲ. ಈ ಹಿಂದಿನ ಪ್ರಧಾನ ವ್ಯವಸ್ಥಾಪಕ ದಿವಂಗತ ಟಿ.ಎನ್.ನಾಯ್ಕ ಹಾಗೂ ಅಂದಿನ- ಇಂದಿನ ಆಡಳಿತ ಮಂಡಳಿಯ ಸಹಕಾರದಿಂದ ಗ್ರಾಹಕರ ವಿಶ್ವಾಸ ಪಡೆದು ಪಿಎಲ್ಡಿ ಬ್ಯಾಂಕು ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಇದಕ್ಕೆ ನನ್ನ ಸಿಬ್ಬಂದಿ ವರ್ಗದವರ ಪರಿಶ್ರಮವೂ ಅಡಗಿದೆ, ನಾನು ನನ್ನ ವಯಕ್ತಿಕವಾಗಿ ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳಲಿಲ್ಲ. ಬ್ಯಾಂಕಿನ ಹಾಗೂ ಷೇರುದಾರರ ಹಿತ ಕಾಪಾಡಲು ಕೆಲವೊಂದು ಸಲ ನಿಷ್ಠುರವಾಗಿ ಮಾತನಾಡಿದ್ದೇನೆ. ನನ್ನಿಂದ ಯಾರ ಮನಸ್ಸಿಗೂ ನೋವು ಉಂಟಾದಲ್ಲಿ ನಾವು ಕ್ಷಮೆ ಕೇಳುತ್ತೇನೆ ಎಂದರಲ್ಲದೇ ನನ್ನ ನಿವೃತ್ತಿ ಜೀವನದ ನಂತರವೂ ಬ್ಯಾಂಕಿನ ಅಬಿವೃದ್ದಿಗೆ ನನ್ನ ಸಲಹೆ ಸಹಕಾರ ಯಾವುತ್ತೂ ಇದೆ ಎಂದರು.
ಪ್ರಾರಂಭದಲ್ಲಿ ಮುಖ್ಯ ಸಹಾಯಕ ವ್ಯವಸ್ಥಾಪಕಿ ಜಯಶ್ರೀ ನಾಯ್ಕ ಎಲ್ಲರನ್ನು ಸ್ವಾಗತಿಸಿದರು. ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ರಾಮಾ ಬಿಲ್ಲವ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಪರಮೇಶ್ವರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಬ್ಯಾಂಕಿನ ವ್ಯವಸ್ಥಾಪಕ ದಿನೇಶ ನಾಯ್ಕ ವಂದಿಸಿದರು. ವೇದಿಕೆಯಲ್ಲಿ ಬ್ಯಾಂಕಿನ ನಿರ್ದೇಶಕರಾದ ಈರಪ್ಪ ಗರ್ಡಿಕರ, ಮೋಹನ ನಾಯ್ಕ, ಸುರೇಶ ನಾಯ್ಕ, ಹರೀಶ ನಾಯ್ಕ, ಮಂಜಪ್ಪ ನಾಯ್ಕ, ಈರಪ್ಪ ಗರ್ಡಿಕರ, ನವಿನೀತ ನಾಯ್ಕ, ಈಶ್ವರ ನಾಯ್ಕ, ಕಮಲಾ ನಾಯ್ಕ ಮತ್ತಿತರರು ಇದ್ದರು.