ಜೊಯಿಡಾ:ಮಕ್ಕಳಿಗೆ ನಾವು ಎಷ್ಟು ಪ್ರತಿಭಾಪೂರ್ಣವಾಗಿ ಬೋಧಿಸುತ್ತೇವೆಯೋ ಅಷ್ಟೇ ಪ್ರತಿಭಾವಂತರಾಗಿ ಮಕ್ಕಳು ಹೊರಹೊಮ್ಮುತ್ತಾರೆ .ಈ ದಿಶೆಯಲ್ಲಿ ನಮ್ಮ ಶಿಕ್ಷಕರ ಪ್ರಯತ್ನಕ್ಕೆ ನಾನು ಅಭಿನಂದಿಸುತ್ತೇನೆ. ಮುಂದಿನ ದಿನದಲ್ಲಿ ವಿಧ್ಯಾರ್ಥಿ ಅರವಿಂದನಂತೆ ಉಳಿದ ನಮ್ಮ ಶಾಲಾ ಮಕ್ಕಳು ಕೂಡಾ ನೂರಕ್ಕೆ ನೂರು ಅಂಕ ಪಡೆದು ಶಾಲೆಗೆ ಕೀರ್ತಿ ತರಲು ಪ್ರಮಾಣ ಮಾಡಬೇಕೆಂದು ಪ್ರೌಢಶಾಲಾ ಮುಖ್ಯೋಪಾಧ್ಯಾಯಕಿ ಲೀಲಾ ನಾಯಕ ಹೇಳಿದರು.
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದ ಕುಂಬಾರವಾಡಾದ ವಿದ್ಯಾರ್ಥಿ ಅರವಿಂದ ಗಾವಡಾರವರಿಗೆ ಶಾಲೆಯಲ್ಲಿ ಶಿಕ್ಷಕರ ಸಮ್ಮುಖದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಸುಭಾಷ ಗಾವಡಾ ಮಾತನಾಡಿ, ಹಳ್ಳಿಗಳ ನಮ್ಮ ಬುಡಕಟ್ಟುಗಳ ವಿದ್ಯಾರ್ಥಿಗಳಿಗೆ ಪಾಲಕರ ಮಾರ್ಗದರ್ಶನ ತುಂಬಾ ವಿರಳ. ಶಿಕ್ಷಕರೇ ಇವರಿಗೆ ಮಾರ್ಗದರ್ಶಕರು. ಹಳ್ಳಿಯ ವಿದ್ಯಾರ್ಥಿ ಅರವಿಂದ ಗಾವಡಾ ಇಂದು ಉತ್ತಮ ಅಂಕ ಗಳಿಸಿ ಶಾಲೆಗೆ,ಸಮೂದಾಯಕ್ಕೆ ಮತ್ತು ಪಾಲಕರಿಗೆ ಕೀರ್ತಿ ತಂದಿದ್ದಾರೆ. ಇದಕ್ಕೆ ಕಾರಣರಾದ ಆತನ ಶಿಕ್ಷಕ ವೃಂದಕ್ಕೆ ಚಿರಋಣಿ ಮಾಡಿದ್ದೇವೆ ಎಂದರು.
ಕಸಾಪ ಅಧ್ಯಕ್ಷ ಪಾಂಡುರಂಗ ಪಟಗಾರ ಮಾತನಾಡಿ, ತಾಲೂಕಿನಲ್ಲಿ ಹಳ್ಳಿಯ ವಿದ್ಯಾರ್ಥಿ ಗಳು ಶಿಕ್ಷಣಕ್ಕಾಗಿ ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾಮೀಣ ಮಕ್ಕಳಲ್ಲಿ ಪ್ರತಿಭೆ ಇದೆ. ಆದರೆ ಮಾರ್ಗದರ್ಶನ ಕೋರಿತೆಯಿಂದ ಅನೇಕ ಪ್ರತಿಮೆಗಳು ಮರೆ ಮಾಚಿ ಉಳಿಯುತ್ತಿದೆ. ಇಂದು ಕುಂಬಾರವಾಡಾ ಶಾಲೆಯಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ಹಳ್ಳಿಯ ವಿದ್ಯಾರ್ಥಿ ಅರವಿಂದ ಉತ್ತಮ ಅಂಕ ಗಳಿಸಿ ಪ್ರತಿಭೆ ತೋರಿರುವುದು ಶ್ಲಾಘನಿಯ. ಶಿಕ್ಷಕರ ಪ್ರಯತ್ನ ಅಭಿನಂದನೀಯ ಎಂದರು. ಮುಂದಿನ ದಿನದಲ್ಲಿ ಈ ಶಾಲೆ, ಗುರುತುಗಳು ಹಾಗೂ ನಮ್ಮ ತಾಲೂಕಿಗೆ ಕೀರ್ತಿ ತರುವಂತೆ ಉತ್ತಮ ಫಲಿತಾಂಶ ನೀಡುವಂತಾಗಬೇಕು ಎಂದರು.
ಕಸಾಪ ಕಾರ್ಯದರ್ಶಿ ಭಾಸ್ಕರ ಗಾಂವ್ಕರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಶಿಕ್ಷಕರರಾದ ಸುಜಾತಾ ಶೆಟ್ಟಿ, ಸಾಹಿತ್ಯ ಪರಿಷತ್ತಿನ ಗಜಾನನ ಮಿರಾಶಿ, ಪ್ರದೀಪ ವೇಳಿಪ, ಶ್ಯಾಮ ಗಾವಡಾ ಮುಂತಾದವರು ಉಪಸ್ಥಿತರಿದ್ದರು.