ಕಾರವಾರ: ತಾಲ್ಲೂಕಿನ ಸದಾಶಿವಗಡದಲ್ಲಿ ವೃದ್ಧಾಶ್ರಮದ ಹೆಸರಿನಲ್ಲಿ ದಾವಣಗೆರೆ ಮೂಲದ ಸಂಸ್ಥೆಯವರು ನೆಲ್ಸನ್ ರೋಡ್ರಿಗಸ್ ಅವರ ಮನೆಯನ್ನು ಅತಿಕ್ರಮಣ ಮಾಡಿದ್ದು, ಅವರಿಗೆ ಹಿಂಸೆ ನೀಡುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಡಾ. ಗಜೇಂದ್ರ ನಾಯ್ಕ ಆರೋಪಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಡ್ರಿಗಸ್ ಅವರಿಗೆ ಕೈಗಾದಿಂದ ತಮಿಳುನಾಡಿಗೆ ವರ್ಗಾವಣೆ ಆಗಿತ್ತು. ಲಾಕ್ಡೌನ್ ಕಾರಣದಿಂದ ಸದಾಶಿವಗಡಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಈ ವೇಳೆ ಮನೆಯ ಬೀಗಮುರಿದು ಒಳಹೊಕ್ಕಿ ಕಾನೂನು ಬಾಹಿರವಾಗಿ ವೃದ್ಧಾಶ್ರಮ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಮನೆ ಮಾಲೀಕ ನೆಲ್ಸನ್ ರೋಡ್ರಿಗಸ್ ಮಾತನಾಡಿ, ತಮ್ಮ ಮನೆಯನ್ನು ವ್ಯಸನಮುಕ್ತ ಕೇಂದ್ರಕ್ಕೆ ಮಾಡಲು ಕೇಳಿದರು. ಒಪ್ಪಂದ ಆಗದ ಕಾರಣ ನೀಡಿರಲಿಲ್ಲ. ತಾವು ತಮಿಳುನಾಡಿಗೆ ವರ್ಗಾವಣೆಯಾದಾಗ ತಿಳಿಸಿದೇ ಮನೆಯ ಬೀಗ ಮುರಿದು ಆಶ್ರಮ ನಡೆಸುತ್ತಿದ್ದಾರೆ. ಈ ಬಗ್ಗೆ ಅಕ್ಕಪಕ್ಕದವರು ತಮಗೆ ಮಾಹಿತಿ ನೀಡಿದರು. ಯಾವ ಒಪ್ಪಂದವನ್ನೂ ಮಾಡಿಕೊಳ್ಳದೇ ಪ್ರವೇಶ ಮಾಡಿದ್ದಾರೆ. 16 ತಿಂಗಳಿನಿಂದ ಬಾಡಿಗೆ ಹಣವನ್ನೂ ಕೂಡಾ ನೀಡುತ್ತಿಲ್ಲ. ಪೊಲೀಸರಿಗೆ ದೂರು ನೀಡಿದಾಗ ಮೇ 15ರೊಳಗೆ ಮನೆ ಖಾಲಿ ಮಾಡುತ್ತೇವೆ ಎಂದಿದ್ದರು. ಇದುವರೆಗೂ ತೆರವು ಮಾಡಿಲ್ಲ ಎಂದರು.
ಸಾಮಾಜಿಕ ಕಾರ್ಯಕರ್ತೆ ಸುಭದ್ರಾ ರಾಣೆ ಮಾತನಾಡಿ, ಅನಾಥಾಶ್ರಮಕ್ಕೆ ಬೇಕಾದ ಸೌಲಭ್ಯವನ್ನು ತಾವು ಒದಗಿಸಿದ್ದು, ಅವರಿಗೆ ಸೇವೆ ಮಾಡುವ ಉದ್ದೇಶ ಇದ್ದಂತೆ ಇಲ್ಲ. ಹಣ ಮಾಡುವ ಉದ್ದೇಶ ಇದ್ದಂತಿದೆ. ಅಲ್ಲಿ ಅವ್ಯವಸ್ಥೆಯ ಆಗರವಾಗಿದೆ. ಸ್ವಲ್ಪವೂ ಶುಚಿಯಾಗಿಲ್ಲ. ಸುತ್ತಮುತ್ತಲಿನ ವಾತಾವಣ ಗಬ್ಬು ನಾರುತ್ತಿದೆ ಎಂದು ಆರೋಪಿಸಿದರು.