ಶಿರಸಿ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಜೂನ್ 4, ಶನಿವಾರ ಮಧ್ಯಾಹ್ನ 3.30 ಕ್ಕೆ ಶಿರಸಿಯ ರಾಘವೇಂದ್ರ ಕಲ್ಯಾಣ ಮಂಟಪ ಸಭಾಂಗಣದಲ್ಲಿ ‘ರಾಜ್ಯಮಟ್ಟದ ಅರಣ್ಯ ಭೂಮಿ ಹಕ್ಕು- ಸುಪ್ರಿಂ ಕೋರ್ಟ ವಿಚಾರಣೆ’- ಚಿಂತನ ಕೂಟ ಸಂಘಟಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ಅವರು ಇಂದು ಶಿರಸಿಯ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ರಾಜ್ಯ ಮಟ್ಟದ ಚಿಂತನ ಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸುತ್ತಾ, ಸದ್ರಿ ಕಾರ್ಯಕ್ರಮಕ್ಕೆ ವಿಶೇಷ ಆಮಂತ್ರಿತರಾಗಿ ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನದಾಸ ಅವರು ಆಗಮಿಸಲಿದ್ದಾರೆ ಎಂದು ಹೇಳಿದರು.
ಅರಣ್ಯ ಹಕ್ಕು ಕಾಯಿದೆಯಲ್ಲಿ ತಿರಸ್ಕಾರವಾದ ಅರಣ್ಯ ಅತೀಕ್ರಮಣದಾರರನ್ನ ಒಕ್ಕಲೆಬ್ಬಿಸಿ, ಅರಣ್ಯೀಕರಣ ಮಾಡಬೇಕೆಂಬ 8 ಪರಿಸರ ಸಂಘಟನೆ ಸುಫ್ರೀಂ ಕೋರ್ಟಿನಲ್ಲಿ ದಾಖಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದು ಇದೆ. ಈ ಅರ್ಜಿಯಲ್ಲಿ ರಾಜ್ಯ ಸರಕಾರ ಈಗಾಗಲೇ ತಿರಸ್ಕಾರವಾದ ಅತೀಕ್ರಮಣದಾರರನ್ನ ಒಕ್ಕಲೆಬ್ಬಿಸುವುದಾಗಿ ಸುಪ್ರೀಂ ಕೋರ್ಟಿನಲ್ಲಿ ಪ್ರಮಾಣ ಪತ್ರ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಹೋರಾಟಗಾರರ ವೇದಿಕೆಯು ಅರಣ್ಯವಾಸಿಗಳ ಪರವಾಗಿ ವಾದಮಂಡಿಸಲು ಅರ್ಜಿ ಸಲ್ಲಿಸಿದ್ದು, ಅರ್ಜಿಯು ಅರಣ್ಯವಾಸಿಗಳ ಪರವಾಗಿ ಸ್ವೀಕಾರವಾಗಿದ್ದು, ಕಾನೂನು ಹೋರಾಟದಲ್ಲಿನ ದಾಖಲಾರ್ಹ ಅಂಶ ಎಂದು ಅವರು ಹೇಳಿದರು.
ವೇದಿಕೆಯ ಕಾರ್ಯಾಲಯದಲ್ಲಿ ಖಾದರ್ ಬಚಗಾಂವ, ಉದಯ ನಾಯ್ಕ, ನಾರಾಯಣ ಸುಬ್ಬ ಪೂಜಾರಿ, ಬಂಗಾರಿ ಸುಬ್ರಾಯ ಆಚಾರಿ, ಉಪಸ್ಥಿತರಿದ್ದರು.
ಜುಲೈನಲ್ಲಿ ಅಂತಿಮ ತೀರ್ಮಾನ:
ಅರಣ್ಯವಾಸಿಗಳ ಭೂಮಿ ಹ್ಕಕಿಗೆ ಸಂಬಂಧಿಸಿ ಸುಫ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಅಂತಿಮ ವಿಚಾರಣೆ ಜುಲೈನಲ್ಲಿ ಜರುಗುತ್ತಿದ್ದು, ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಅಂತಿಮ ತೀರ್ಮಾನ ಹೊರಹೊಮ್ಮಲಿರುವುದರಿಂದ ರಾಜ್ಯಮಟ್ಟದ ಕಾನೂನು ತಜ್ಞರಿಂದ ಚಿಂತನ ಕೂಟ ಜರುಗಿಸುತ್ತಿದ್ದೇವೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.