ಕಾರವಾರ: ರಾಕ್ ಗಾರ್ಡನ್ಗೆ ಹೊಂದಿಕೊಂಡಂತ ನಿರ್ಮಿಸಿರುವ ಮೀನುಗಾರರು ದೋಣಿ ಎಳೆಯುತ್ತಿರುವ ರೂಪಕವು ಸಂಪೂರ್ಣ ಹಾಳು ಬಿದ್ದಿದ್ದು, ಸಾರ್ವಜನಿಕ ಸ್ಥಳದಲ್ಲಿ ಮೀನುಗಾರಿಕೆ ಹಾಗೂ ಮೀನುಗಾರರನ್ನು ಅವಹೇಳನ ಮಾಡುವಂತಿದೆ.
ಇದನ್ನು ಕೂಡಲೇ ಸರಿಪಡಿಸದೇ ಇದ್ದರೆ, ಸಂಘಟನೆಯ ಮೂಲಕ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಲಿದೆ ಎಂದು ಇಂಟಿಕ್ ಜಿಲ್ಲಾ ಸರಕಾಂತ ಹಾಗೂ ಘಟಕದ ಅಧ್ಯಕ್ಷ ಹರಿಕಾರಂತ ವಿಠಲ ನಾಯ್ಕ ಜಿಲ್ಲಾಧಿಕಾರಿಗಳಿಗೆ ಉಪಾಧ್ಯಕ್ಷ ಎಚ್ಚಲ ನಾಯ್ಕ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ. ಕಾರವಾರದ ಕಡಲತೀರದಲ್ಲಿ ಗಾರ್ಡನ್ ಅಂಚಿನಲ್ಲಿ ಮೀನುಗಾರಿಕಾ ದೋಣಿ ಹಾಗೂ ದೋಣಿಗಳನ್ನು ಎಳೆಯುತ್ತಿರುವ ಮೀನುಗಾರರ ಸೊಗಸಾದ ಚಿತ್ರಣವನ್ನು ನಿರ್ಮಿಸಲಾಗಿತ್ತು, ಆದರೆ ಅದು ಇಂದಿನ ಪರಿಸ್ಥಿತಿಯಲ್ಲಿ ಮೀನುಗಾರಿಕೆ ದೋಣಿಯ ಅವಶೇಷಗಳನ್ನು ಹುಡುಕುತ್ತಿರುವ ಮೀನುಗಾರರು ಎಂಬಂತೆ ಕಂಡು ಬರುತ್ತಿದ್ದು, ಮೀನುಗಾರರನ್ನು ಅವಮಾನಿಸುವ ಮೀನುಗಾರಿಕೆಯನ್ನು ಅವಹೇಳನ ಮಾಡುವ ಸ್ಥಿತಿಯಲ್ಲಿದೆ.
ಈ ಹಿಂದೆ ಈ ಬಗ್ಗೆ ಗಮನಸೆಳೆದಾಗ, ಸರಿಪಡಿಸಲು ಪ್ರವಾಸೋದ್ಯಮ ಇಲಾಖೆಗೆ ಪತ್ರವನ್ನು ಬರೆದಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಲಾಗಿತ್ತು. ಆದರೆ ಈ ಕಾರ್ಯವು ಇಲ್ಲಿಯವರೆಗೆ ಆಗದೇ ಇರುವುದು ಈಗ ಅಲ್ಲಿರುವ ಈ ಅವಶೇಷಗಳನ್ನು ನೋಡಿದಾಗ ತಿಳಿದುಬರುತ್ತದೆ. ಜಿಲ್ಲಾಧಿಕಾರಿ ಆದೇಶವನ್ನು ಪ್ರವಾಸೋದ್ಯಮ ಇಲಾಖೆಯವರು ಪಾಲಿಸದಿರುವುದು ವಿಷಾದನೀಯ, ಈ ರೀತಿ ಅವಹೇಳನಕಾರಿ ದೃಶ್ಯವನ್ನು ಜನಸಾಮಾನ್ಯರಿಗೆ ನೋಡಲು ಅವಕಾಶ ಮಾಡಿಕೊಟ್ಟ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಇಲ್ಲದೇ ಹೋದಲ್ಲಿ ರಸ್ತೆಯಲ್ಲಿ ನಿಂತು ನಾವು ನಮ್ಮ ಸಂಘಟನೆಗಳೊಂದಿಗೆ ಅವಹೇಳನಕಾರಿ ದೃಶ್ಯದ ವಿರುದ್ಧ ಸಾರ್ವಜನಿಕವಾಗಿ ಪ್ರತಿಭಟನೆ ಮಾಡಬೇಕಾದೀತು ಎಂದು ಮನವಿಯಲ್ಲಿ ತಿಳಿಸಿದ್ದಾರೆ.