ಅಂಕೋಲಾ: ತಾಲೂಕಿನ ಬೆಳಂಬರದ ತಾಳೇಬೈಲಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಹುಲಿ ದೇವರ ದೇವಸ್ಥಾನವನ್ನು ಲೋಕಾರ್ಪಣೆಗೊಳಿಸಲಾಯಿತು.
ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕಿ ರೂಪಾಲಿ ನಾಯ್ಕ್ ಮಾತನಾಡಿ, ನೂತನವಾಗಿ ನಿರ್ಮಾಣಗೊಂಡ ದೇವಾಲಯದಲ್ಲಿ ನಿತ್ಯ ಪೂಜಾ ಕಾರ್ಯಕ್ರಮಗಳು ನಡೆಯಬೇಕು. ಊರಿನ ಎಲ್ಲ ನಾಗರಿಕರು ದೇವರ ಪೂಜೆಯಲ್ಲಿ ಪಾಲ್ಗೊಳ್ಳಬೇಕು. ನಿತ್ಯ ದೇವರ ಆರಾಧನೆ ಮತ್ತು ನಾಮ ಸ್ಮರಣೆ ಮಾಡುವುದರಿಂದ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ಸಿಗುತ್ತದೆ ಎಂದರು.
ಕಷ್ಟ ಬಂದಾಗಲೆ ದೇವರನ್ನು ನೆನೆಯುವುದಕ್ಕಿಂತ ನಿತ್ಯ ಆರಾಧನೆ ಮಾಡುತ್ತ ನಮ್ಮ ಕಷ್ಟಗಳನ್ನು ಹೇಳಿಕೊಂಡಾಗ ನಮ್ಮ ಬೇಡಿಕೆಗಳನ್ನು ಈಡೇರಿಸಿ ಫಲವನ್ನು ನೀಡುತ್ತದೆ. ಅದರಂತೆ ಮನೆಯ ಹಿರಿಯರ ಆಶೀರ್ವಾದವನ್ನು ಪಡೆಯಬೇಕು. ಅವರನ್ನೂ ಕೂಡ ಗೌರವದಿಂದ ಕಾಣಬೇಕು. ಬದುಕಿದಷ್ಟು ದಿನ ಎಲ್ಲರನ್ನೂ ಒಳ್ಳೆಯ ರೀತಿ ಕಂಡು ಒಳಿತನ್ನು ಮಾಡೋಣ.
ದೇವಸ್ಥಾನದಲ್ಲಿ ಕಾಲಕಾಲಕ್ಕೆ ವಿಶೇಷ ಕಾರ್ಯಕ್ರಮ, ಪೂಜೆಗಳನ್ನು ಹಮ್ಮಿಕೊಳ್ಳಬೇಕು. ಜನರಿಗೆ ಅವುಗಳ ಮಾಹಿತಿಯನ್ನು ತಲುಪಿಸಬೇಕು. ದೈವಿ ಕಾರ್ಯ ನಿರಂತರವಾಗಿ ನಡೆಯುತ್ತಿರಬೇಕು. ಯಾವುದೇ ರೀತಿಯ ರಾಜಕೀಯ ಮಾಡಬಾರದು. ಎಲ್ಲರೂ ಒಟ್ಟಾಗಿ ದೇವಸ್ಥಾನದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದರು. ನಂತರ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸೇವೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ದೇವಸ್ಥಾನ ಸಮಿತಿ ಅಧ್ಯಕ್ಷರು, ಊರ ಗೌಡರು, ಎಂಜೀನಿಯರ್, ಊರ ನಾಗರೀಕರು, ಭಾರತೀಯ ಜನತಾ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.