ದಾಂಡೇಲಿ: ನಗರದ ಹಳೆದಾಂಡೇಲಿಯಲ್ಲಿ ಯುಜಿಡಿ ಕಾಮಗಾರಿ ವಿಳಂಭವಾಗಿ ಸಾಗುತ್ತಿರುವುದರಿಂದ ಸಾರ್ವಜನಿಕರಿಗೆ, ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸ್ಥಳೀಯರಿಗೆ ತೀವ್ರ ತೊಂದರೆಯಾಗುತ್ತಿರುವ ಹಿನ್ನಲೆಯಲ್ಲಿ ನಗರ ಸಭೆಯ ಪೌರಾಯುಕ್ತರಾದ ಆರ್.ಎಸ್ ಪವಾರ್ ಅವರು ನಗರ ಸಭೆಯ ಸಹಾಯಕ ಅಭಿಯಂತರ ವಿ.ಎಸ್.ಕುಲಕರ್ಣಿಯವರ ಜೊತೆ ಹಳೆದಾಂಡೇಲಿಯಲ್ಲಿ ಯುಜಿಡಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ನಗರ ಸಭಾ ಸದಸ್ಯೆ ಸಪೂರ ಯರಗಟ್ಟಿ ಹಾಗೂ ಸ್ಥಳೀಯರು ಮತ್ತು ಸಾರ್ವಜನಿಕರು ಯುಜಿಡಿ ಕಾಮಗಾರಿಯಿಂದ ಜನಜೀವನಕ್ಕೆ ಆಗುತ್ತಿರುವ ತೊಂದರೆ ಮತ್ತು ತ್ಯಾಜ್ಯ ನೀರು ಹೋಗುವ ದೊಡ್ಡ ಪೈಪನ್ನು ತುಂಡರಿಸಿ, ಸಣ್ಣ ಪೈಪ್ ಆಳವಡಿಸಿರುವುದನ್ನು ವಿರೀಧಿಸಿ ತಮ್ಮ ನೋವನ್ನು ಪೌರಾಯುಕ್ತರಾದ ಆರ್.ಎಸ್ ಪವಾರ್ ಅವರಲ್ಲಿ ಹಂಚಿಕೊಂಡರು.
ಪೌರಾಯುಕ್ತ ಆರ್.ಎಸ್.ಪವಾರ್ ಅವರು ಕಾಮಗಾರಿಯನ್ನು ಪರಿಶೀಲಿಸಿ, ಅಲ್ಲಿಯ ಅವ್ಯವಸ್ಥೆಯಿಂದ ಕೆಂಡಾಮಂಡಲರಾಗಿ ಸ್ಥಳದಿಂದಲೇ ಯುಜಿಡಿ ಗುತ್ತಿಗೆ ಸಂಸ್ಥೆಯ ಅಧಿಕಾರಿಗೆ ಮೊಬೈಲ್ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕೂಡಲೆ ಇಲ್ಲಿಯ ಸಮಸ್ಯೆ ಬಗೆಹರಿಯದಿದ್ದಲ್ಲಿ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು ಕಾಮಗಾರಿ ಸ್ಥಗಿತಗೊಳಿಸುವ ಎಚ್ಚರಿಕೆಯನ್ನು ನೀಡಿದರು.