ಕಾರವಾರ : ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ನಗರದ ಸಾರ್ವಜನಿಕ ಪ್ರದೇಶದಲ್ಲಿ ಬಿಸಾಡಲಾದ ಬಿಡಿ, ಸಿಗರೇಟು ತುಂಡುಗಳು ಹಾಗೂ ತಂಬಾಕು ಪೊಟ್ಟಣಗಳ ಸಂಗ್ರಹ ಅಭಿಯಾನ ಶನಿವಾರ ನಡೆಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಪಹರೆ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಮುಂಜಾನೆ ಕಾರವಾರ ಬಸ್ ಸ್ಟ್ಯಾಂಡ್ ನಿಂದ ಸ್ವಚ್ಚತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ರಸ್ತೆ, ಅಂಗಡಿ ಬದಿ, ಬೀಸಾಡಲಾಗಿದ್ದ ತಂಬಾಕು ಉತ್ಪನ್ನಗಳ ಪೊಟ್ಟಣಗಳನ್ನು ಹಾಗೂ ಬೀಡಿ, ಸಿಗರೇಟು ತುಂಡುಗಳನ್ನು, ಗುಟಕ ಪ್ಯಾಕೀಟ್ ಗಳನ್ನು ಸಂಗ್ರಹಿಸಲಾಯಿತು.
ತಂಬಾಕು ಪರಿಸರಕ್ಕೆ ಮಾರಕ, ಸ್ವಚ್ಛ ಹಸಿರು ಕಾರವಾರ ಘೋಷ ವಾಕ್ಯದೊಂದಿಗೆ ಅಧಿಕಾರಿಗಳು ಸಂಘ ಸಂಸ್ಥೆಯ ಪದಾಧಿಕಾರಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಮೇ. 31 ರಂದು ವಿಶ್ವ ತಂಬಾಕು ದಿನಾಚರಣೆ ಆಚರಿಸಲಾಗುತ್ತಿದೆ. ಈ ಕಾರಣದಿಂದ ನಿತ್ಯವೂ ಸಾರ್ವಜನಿಕ ಪ್ರದೇಶದಲ್ಲಿ ಈ ರೀತಿ ತಂಬಾಕು ಉತ್ಪನ್ನಗಳ ತ್ಯಾಜ್ಯವನ್ನು ಸಂಗ್ರಹಿಸಿ ಎಷ್ಟು ಪ್ರಮಾಣದಲ್ಲಿ ಸಂಗ್ರಹಿಸಲಾಗಿದೆ ಎಂಬುದನ್ನು ದಾಖಲಿಸಲಾಗುತ್ತಿದೆ. ಅಲ್ಲದೆ ಬೀಡಿ, ಸಿಗರೇಟ್ಗಳ ತುಂಡುಗಳು ಮತ್ತು ತಂಬಾಕು ಪೊಟ್ಟಣಗಳು ಭೂಮಿ ಹಾಗೂ ನೀರಿನಲ್ಲಿ ಸೇರಿ ಪರಿಸರ ಹಾನಿ ಉಂಟಾಗುವುದರ ಜೊತೆಗೆ, ಪ್ರಾಣಿಗಳು, ಪಕ್ಷಿಗಳು ಹಾಗೂ ಜಲಚರಗಳ ಮೇಲೆ ಕೆಟ್ಟ ಪರಿಣಾಮ ಬೀರುವುದರಿಂದ ತೊಂದರೆಗೆ ಒಳಗಾಗುತ್ತವೆ. ಇದನ್ನು ತಡೆಯಲು ಜಾಗೃತಿ ಕಾರ್ಯಕ್ರಮದ ಜನರಲ್ಲಿ ಕೂಡ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ತಿಳಿಸಿದರು.
ಸ್ವಚ್ಛತಾ ಕಾರ್ಯದಲ್ಲಿ ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ. ಅರ್ಚನಾ ನಾಯಕ, ತಂಬಾಕು ನಿಯಂತ್ರಣ ಕೋಶದ ಪ್ರೇಮಕುಮಾರ ನಾಯ್ಕ, ಗೋರೇಸಾಬ ನದಾಫ, ಗಿರೀಶ, ಸಂತೋಷ, ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ.ಹೇಮಗಿರಿ ಮತ್ತು ತಂಡ, ಪಹರೆ ವೇದಿಕೆಯ ಸದಸ್ಯರು ಭಾಗವಹಿಸಿದ್ದರು.