ಶಿರಸಿ: ತೀಟೆ ಮಾಡುವವರು ಇವರೇ, ಹಿಜಾಬ್, ಹಲಾಲ್ ಹಿಂದಿನಿಂದಲೂ ಇದೆ. ಈಗ ಯಾಕೆ ಇಶ್ಯೂ ಮಾಡಲು ಹೋಗಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮಂಗಳೂರಿನ ಮಳಲಿ ಮಸೀದಿ ವಿಚಾರಕ್ಕೆ ಸಂಬಂಧಿಸಿದಂತೆ ಶಿರಸಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಸೀದಿಯಲ್ಲಿ ಅಜಾನ್ ಕೂಗಿದರೆ ತಪ್ಪೇನು? ದೇವಸ್ಥಾನದಲ್ಲಿ ನೀವು ಪ್ರಾರ್ಥನೆ ಮಾಡಿಕೊಳ್ಳಿ, ಸಂವಿಧಾನದಲ್ಲಿ ಅವರಿಗೆ ಹಕ್ಕು ಕೊಟ್ಟಿದೆ. ಮುತಾಲಿಕ್ರವರನ್ನು ಹಿಡಿದು ಒಳಗೆ ಹಾಕಬೇಕು. ಮನುಷ್ಯರಾಗಿ ಬದುಕುವವರಿಗೆ ಹುಳಿ ಹಿಂಡಲು ಯಾಕೆ ಹೋಗುತ್ತೀರಿ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಬಂಡವಾಳ ಹರಿದುಬರಲು ಕಾನೂನು ಸುವ್ಯವಸ್ಥೆ ಚೆನ್ನಾಗಿರಬೇಕು. ಧಾರ್ಮಿಕ ವಿಚಾರಗಳನ್ನು ಇಟ್ಟುಕೊಂಡು ಸಮಾಜದಲ್ಲಿ ಸಾಮರಸ್ಯ ಹಾಳುಮಾಡಿದ್ದಾರೆ. ರಾಜ್ಯದಲ್ಲಿ ಲಾ ಎಂಡ್ ಆರ್ಡರ್ ಇಲ್ಲದಿದ್ದರೆ ಯಾರು ಬಂಡವಾಳ ಹಾಕಲು ಬರುವುದಿಲ್ಲ ಎಂದರು.
ಇನ್ನು ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೋಗ್ತಾರಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಕರ್ನಾಟಕಕ್ಕೆ ಸೀಮಿತವಾಗಿ ಇರುತ್ತೇನೆ. ದೇಶದ ರಾಜಕೀಯಕ್ಕೆ ಹೋಗುವುದಿಲ್ಲ. ರಾಷ್ಟ್ರಮಟ್ಟದ ರಾಜಕೀಯಕ್ಕೆ ಕೈಹಾಕಲು ಹೋಗುವುದಿಲ್ಲ. ಕರ್ನಾಟಕದ ರಾಜಕಾರಣದಲ್ಲೇ ಇರುತ್ತೇನೆ. ಇಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ರಾಜ್ಯಸಭೆ ಹಾಗೂ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿದ್ದರಾಮಯ್ಯ, ಜೆಡಿಎಸ್ ಜೊತೆ ಯಾವ ರಾಜಕೀಯ ಸಂಬಂಧವನ್ನೂ ಮಾಡಿಕೊಳ್ಳಲ್ಲ. ಜೆಡಿಎಸ್ ಜೊತೆ ಚುನಾವಣೆ ಸಂಬಂಧವೂ ಇಲ್ಲ, ಬೇರೆ ಸಂಬಂಧವೂ ಇಲ್ಲ ಎಂದರು.
ಮುಖ್ಯಮಂತ್ರಿ ಆಗೋದು ಎಂದರೆ ಬಲತ್ಕಾರವಾಗಿ ಹೇಳುವುದಲ್ಲ. ದಲಿತರೂ ಆಗಬೇಕು, ಬೇರೆಯವರೂ ಆಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಆಗಬೇಕು ಎಂದರು. ಇನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೇಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, 50% ಐವತ್ತು ವರ್ಷದ ಒಳಗೆ ಇರುವವರಿಗೆ (ಯುವಕರಿಗೆ) ಮುಂದಿನ ವಿಧಾನಸಭೆಯಲ್ಲಿ ಟಿಕೇಟ್ ಕೊಡಬೇಕು ಎಂದು ತೀರ್ಮಾನ ಮಾಡಿದ್ದೀವಿ. ಯಂಗ್ಸ್ಟರ್ಸ್, ಯೂತ್ಸ್, ಎಲ್ಡರ್ಸ್ ಇರಬೇಕು ಎಂಬ ಉದ್ದೇಶವಿದೆ ಎಂದರು.
ಮೋದಿ ಸರ್ಕಾರಕ್ಕೆ ಎಂಟು ವರ್ಷ ತುಂಬಿದೆ. ನರೇಂದ್ರ ಮೋದಿಯವರು ರೈತರಿಗೆ ಏನು ಭರವಸೆ ಕೊಟ್ಟಿದ್ದರೋ ಅದ ಒಂದೂ ಭರವಸೆಯನ್ನು ಈಡೇರಿಸಿಲ್ಲ. ಯಾವ ಭರವಸೆಯನ್ನೂ ಈಡೇರಿಸಿಲ್ಲ ಎಂದರು.