ಯಲ್ಲಾಪುರ: ಪ್ರಸಿದ್ಧ ಯಕ್ಷಗಾನ ಭಾಗವತ ಅನಂತ ಹೆಗಡೆ ದಂತಳಿಗೆ ಅವರು ರಚಿಸಿದ ಶ್ರೀರಾಮ ದರ್ಶನ ಹಾಗೂ ಪುರುಷಮೃಗ ಯಕ್ಷಗಾನ ಪ್ರಸಂಗಗಳ ಲೋಕಾರ್ಪಣೆ ಕಾರ್ಯಕ್ರಮ ಪಟ್ಟಣದ ನಾಯಕನಕೆರೆ ಶಾರದಂಬಾ ಪಾಠಶಾಲೆಯ ಸಭಾಭವನದಲ್ಲಿ ಮೇ.27 ರಂದು ಮಧ್ಯಾಹ್ನ 3.30 ಕ್ಕೆ ನಡೆಯಲಿದೆ.
ಇಡಗುಂಜಿ ಮೇಳದ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಭಾಗವತ ವಿದ್ವಾನ್ ಗಣಪತಿ ಭಟ್ಟ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಯಕ್ಷಗುರು ಎ.ಪಿ.ಪಾಠಕ ಪ್ರಸಂಗ ಲೋಕಾರ್ಪಣೆಗೊಳಿಸುವರು. ವಿಶ್ವದರ್ಶನ ಪಿಯು ಕಾಲೇಜ್ ಪ್ರಾಂಶುಪಾಲ ಡಾ.ದತ್ತಾತ್ರೇಯ ಗಾಂವ್ಕಾರ ಕೃತಿ ಪರಿಚಯಿಸಲಿದ್ದಾರೆ. ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ದೇವಸ್ಥಾನದ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ, ಯಕ್ಷಗಾನ ಅಕಾಡೆಮಿ ಸದಸ್ಯೆ ನಿರ್ಮಲಾ ಗೋಳಿಕೊಪ್ಪ, ಶಾರದಾಂಬಾ ಪಾಠಶಾಲೆಯ ಅಧ್ಯಕ್ಷ ಉಮೇಶ ಭಾಗ್ವತ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಯಕ್ಷಗಾಯನ ವೈವಿಧ್ಯ ಕಾರ್ಯಕ್ರಮ ನಡೆಯಲಿದ್ದು, ಭಾಗವತರಾಗಿ ವೆಂಕಟರಮಣ ಭಟ್ಟ ಚಂದಗುಳಿ, ವಿಘ್ನೇಶ್ವರ ಹೆಗಡೆ ಕುಂಟೆಮನೆ, ಮದ್ದಲೆವಾದಕರಾಗಿ ನಾಗಪ್ಪ ಕೋಮಾರ, ಚಂಡೆವಾದಕರಾಗಿ ಪ್ರಸನ್ನ ಡಬ್ಗುಳಿ ಭಾಗವಹಿಸಲಿದ್ದಾರೆ. ನಂತರ ಅನಂತ ಹೆಗಡೆ ವಿರಚಿತ ಪುರುಷಮೃಗ ತಾಳಮದ್ದಲೆ ನಡೆಯಲಿದ್ದು, ಹಿಮ್ಮೇಳದಲ್ಲಿ ವಿ.ಗಣಪತಿ ಭಟ್ಟ, ಎ.ಪಿ.ಪಾಠಕ, ನರಸಿಂಹ ಭಟ್ಟ ಹಂಡ್ರಮನೆ, ಪ್ರಮೋದ ಕಬ್ಬಿನಗದ್ದೆ ಭಾಗವಹಿಸುವರು. ಅರ್ಥಧಾರಿಗಳಾಗಿ ವಾಸುದೇವ ರಂಗ ಭಟ್ಟ, ಎಂ.ಎನ್.ಹೆಗಡೆ, ಭಾಸ್ಕರ ಗಾಂವ್ಕಾರ ಬಿದ್ರೆಮನೆ, ವಿದ್ವಾನ್ ವಿನಾಯಕ ಭಟ್ಟ ಶೇಡಿಮನೆ, ಡಾ.ಮಹೇಶ ಭಟ್ಟ ಇಡಗುಂದಿ, ಡಾ.ಶಿವರಾಮ ಭಾಗ್ವತ ಮಣ್ಕುಳಿ ಭಾಗವಹಿಸಲಿದ್ದಾರೆ.
ಲಾಕ್ ಡೌನ್ ಸದುಪಯೋಗ:ಕರೊನಾ ಮಹಾಮಾರಿ ವ್ಯಾಪಿಸಿ, ಲಾಕ್ ಡೌನ್ ಆದ ನಂತರ ಕಲಾ ಪ್ರದರ್ಶನಗಳು ಸ್ಥಗಿತಗೊಂಡಿದ್ದವು. 2020 ಹಾಗೂ 2021 ರ ಲಾಕ್ ಡೌನ್ ಸಂದರ್ಭವನ್ನು ಸದುಪಯೋಗಪಡಿಸಿಕೊಂಡು ಈ ಎರಡು ಪ್ರಸಂಗಗಳನ್ನು ಅನಂತ ಹೆಗಡೆ ರಚಿಸಿದ್ದಾರೆ. ರಾಮಾಯಣದಲ್ಲಿ ರಾಮ ರಾವಣನೊಂದಿಗೆ ಯುದ್ಧ ಮಾಡುವಾಗ ವಿಶ್ವರೂಪ ದರ್ಶನ ಮಾಡಿಸುತ್ತಾನೆ. ಆ ಸನ್ನಿವೇಶವನ್ನು ಶ್ರೀರಾಮ ದರ್ಶನ ಪ್ರಸಂಗದ ಮೂಲಕ ಕಟ್ಟಿಕೊಟ್ಟಿದ್ದಾರೆ. ಈಗಾಗಲೇ ಕೆಲವೆಡೆ ಯಕ್ಷ ಗಾನ-ಕುಂಚ ಕಾರ್ಯಕ್ರಮದಲ್ಲಿ ಶ್ರೀರಾಮ ದರ್ಶನ ಪ್ರಸಂಗದ ಪದ್ಯಗಳು ಪ್ರಸ್ತುತಗೊಂಡಿವೆ. ಮಹಾಭಾರತದ ಸಭಾಪರ್ವದಲ್ಲಿ ಪಾಂಡವರ ರಾಜಸೂಯ ಯಾಗದ ಸಂದರ್ಭದಲ್ಲಿ ಪುರುಷಮೃಗವನ್ನು ಹುಡುಕುತ್ತ ಭೀಮ ಸಾಗುವ ಕಥಾಹಂದರವನ್ನು ಪುರುಷಮೃಗ ಪ್ರಸಂಗ ಹೊಂದಿದೆ.
ಅನಂತ ಹೆಗಡೆ ದಂತಳಿಗೆ ಅವರು ಕಳೆದ ಎರಡು ದಶಕಗಳಿಂದ ಯಕ್ಷಗಾನ ಭಾಗವತರಾಗಿ, ಯಕ್ಷಗುರುವಾಗಿ ಕಲಾ ಸೇವೆ ಮಾಡುತ್ತಿದ್ದಾರೆ. ಇಡಗುಂಜಿ ಮೇಳದ ಭಾಗವತರಾಗಿರುವ ಇವರು, ಯಕ್ಷಗಾನದ ಸಾಂಪ್ರದಾಯಿಕ ಶೈಲಿಯ ಭಾಗವತಿಕೆಯಲ್ಲಿ ಪ್ರಸಿದ್ಧಿ ಹೊಂದಿದ್ದಾರೆ. ಇವರ ಕಲಾ ಸೇವೆಗೆ ಬಿಸ್ಮಿಲ್ಲಾ ಖಾನ್ ರಾಷ್ಟ್ರೀಯ ಯುವ ಪುರಸ್ಕಾರ ಲಭಿಸಿದೆ.