
ಶಿರಸಿ: ಪ್ರಾನ್ಸನಲ್ಲಿ ನಡೆದ 19ವರ್ಷದೊಳಗಿನ ಅಂತರಾಷ್ಟ್ರೀಯ ಮಕ್ಕಳ ಕ್ರೀಡಾಕೂಟದ ಬ್ಯಾಡ್ಮಿಂಟನ್ ಸಿಂಗಲ್ಸ್ನಲ್ಲಿ ಚಿನ್ನದ ಪದಕ ಪಡೆದ ಇಲ್ಲಿನ ಕುವರಿ ಪ್ರೇರಣಾ ಶೇಟ್ ಸೋಮವಾರ ತವರಿಗೆ ಆಗಮಿಸುತ್ತಲೇ ಅದ್ಧೂರಿಯಾಗಿ ಬರಮಾಡಿಕೊಂಡು ನಾಗರೀಕ ಸನ್ಮಾನ ನೀಡಲಾಯಿತು. ಈ ಮೂಲಕ ಭವಿಷ್ಯದಲ್ಲಿ ಇನ್ನಷ್ಟು ಉನ್ನತ ಸಾಧನೆಗೆ ಪ್ರೋತ್ಸಾಹಿಸಲಾಯಿತು.
ನಗರದ ನೀಲೇಕಣಿ ವೃತ್ತದಲ್ಲಿ ಲಯನ್ಸ್ ಶಿಕ್ಷಣ ಸಂಸ್ಥೆ, ಲಯನ್ಸ್ ಕ್ಲಬ್ ಹಾಗೂ ಸಂಘಸಂಸ್ಥೆಗಳವರು, ಸಾರ್ವಜನಿಕರು ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ತೆರೆದ ವಾಹನದಲ್ಲಿ ವಾದ್ಯಮೇಳದೊಂದಿಗೆ ಮೆರವಣಿಗೆಯಲ್ಲಿ ಲಯನ್ಸ್ ಶಿಕ್ಷಣ ಸಂಸ್ಥೆ ಸಭಾಭವನಕ್ಕೆ ಕರೆತರಲಾಯಿತು.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿ, ನಾಡು ಹೆಮ್ಮೆ ಪಡುವ ಸಾಧನೆಯನ್ನು ಪ್ರೇರಣಾ ಶೇಟ್ ಮಾಡಿದ್ದಾಳೆ. ಆದರೆ ಈ ಸಾಧನೆಗಷ್ಟೇ ತೃಪ್ತಿಪಟ್ಟುಕೊಳ್ಳದೇ ಓಲಂಪಿಕ್ಸ್ನಂತಹ ಕ್ರೀಡಾಕೂಟದಲ್ಲಿ ಸಾಧಿಸುವ ಛಲದ ಗುರಿಯನ್ನು ಹೊಂದಬೇಕು ಎಂದರು.
ವಿದೇಶದ ವಾತಾವರಣದಲ್ಲಿ ಆತ್ಮವಿಶ್ವಾಸ ಕುಗ್ಗದೇ ಸಾಧನೆ ಮಾಡುವುದು ಸುಲಭವಲ್ಲ. ಕಲೆ,ಕೌಶಲ್ಯವನ್ನು ಸಿದ್ಧಿಪಡಿಸುವ ತರಬೇತುದಾರರ ಮಾರ್ಗದರ್ಶನ, ಪಾಲಕರ ಪ್ರೋತ್ಸಾಹ ಹಾಗೂ ಶಿಕ್ಷಕರು ಸಹ ಕ್ರೀಡೆಯಲ್ಲಿ ಭಾಗವಹಿಸುವುದಕ್ಕೆ ಹುರಿದುಂಬಿಸಿರುವುದು ಕಾರಣವಾಗಿದೆ ಎಂದರು.
ಶಿಕ್ಷಣ ಸಂಸ್ಥೆಗಳು ಅಂಕ ಗಳಿಸುವುದಕ್ಕೆ ನೀಡುವ ಪ್ರಾಮುಖ್ಯತೆಯನ್ನು ಕ್ರೀಡಾ, ಸಾಂಸ್ಕøತಿಕ ಚಟುವಟಿಕೆಗೂ ನೀಡಬೇಕು. ತಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು ಎಂದರು. ಪ್ರಮುಖರಾದ ರವಿ ಹೆಗಡೆ ಹೂವಿನಮನೆ ಮಾತನಾಡಿ, ಪ್ರತಿಭೆಗಳಿಗೆ ಸಮಯಕ್ಕೆ ಸರಿಯಾದ ಪ್ರೇರಣೆ ದೊರೆತರೆ ಸಾಧನೆ ಸುಲಭವಾಗುತ್ತದೆ ಎಂದರು.
ಪ್ರೇರಣಾ ತಂದೆ ನಂದಕುಮಾರ ಶೇಟ್ ಮಾತನಾಡಿ, ಕಲಿಕೆಯ ಜತೆಯಲ್ಲಿ ಬ್ಯಾಡ್ಮಿಂಟನ್ನಲ್ಲೂ ಶಿಸ್ತು, ಶ್ರಮದಿಂದ ತೊಡಗಿಕೊಂಡ ಫಲವಾಗಿ ಮಗಳು ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.
ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್.ವಿ.ಜಿ ಭಟ್ಟ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಡಿವೈಎಸ್ಪಿ ರವಿ ಡಿ.ನಾಯ್ಕ, ಪ್ರಮುಖರಾದ ಪ್ರೊ.ರವಿ ನಾಯ್ಕ, ಉದಯ ಸ್ವಾದಿ, ಎಂ.ಎಸ್.ಹೆಗಡೆ, ಕೋಚ್ ಗುರುರಾಜ ಹೆಗಡೆ, ಮನೀಶ, ಪ್ರೇರಣಾ ತಾಯಿ ಸ್ವಾತಿ ಶೇಟ್ ಮುಂತಾದವರು ಪಾಲ್ಗೊಂಡರು. ಮುಖ್ಯಾಧ್ಯಾಪಕ ಶಶಾಂಕ ಹೆಗಡೆ ಸ್ವಾಗತಿಸಿದರು. ವಿ.ಎಂ.ಭಟ್ಟ ನಿರೂಪಿಸಿದರು. ವಿನಯ ಹೆಗಡೆ ಬಸವನಕಟ್ಟೆ ವಂದಿಸಿದರು.
2 ಲಕ್ಷ ಬಹುಮಾನ ಘೋಷಣೆ:
ಪ್ರಾನ್ಸನಲ್ಲಿ ಚೀನಾದ ಕ್ರೀಡಾಳುವನ್ನು ಸೋಲಿಸಿ ಬಂಗಾರ ಪದಕ ಗಿಟ್ಟಿಸಿದ ಪ್ರೇರಣಾಳಿಗೆ ರಾಜ್ಯ ಸರಕಾರದಿಂದ 2ಲಕ್ಷ ರೂ.ನೀಡಲಾಗುತ್ತದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಘೋಷಿಸಿದರು. ಈ ಬಗ್ಗೆ ಸಂಬಂಧಿಸಿದ ಸಚಿವರು, ಅಧಿಕಾರಿಗಳೊಂದಿಗೆ ಮಾತನಾಡಿರುವುದಾಗಿ ತಿಳಿಸಿದರು. ಇನ್ನು ಪ್ರೇರಣಾಳ ಕಲಿಕೆಗೆ ಸ್ಕಾಲರ್ಶಿಪ್ ನೀಡಲಾಗುವುದು. ಹಾಗೇ ಕೇಂದ್ರ ಸರಕಾರದ ಅಮೃತ ಕ್ರೀಡಾ ದತ್ತು ಯೋಜನೆಯಡಿ ರಾಜ್ಯದ 75ಮಂದಿ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಓಲಂಪಿಕ್ಸ್ಗೆ ತರಬೇತುಗೊಳಿಸಲಾಗುತ್ತದೆ. ಅದರಲ್ಲೂ ಪ್ರೇರಣಾ ಅವಳನ್ನು ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.