
ಶಿರಸಿ: ನಮ್ಮ ಪೂರ್ವಜರು ಸನಾತನ ಧರ್ಮ, ಸಂಸ್ಕಾರ ಉಳಿಯುವ ದೃಷ್ಟಿಯಿಂದ ಸಾಕಷ್ಟು ತ್ಯಾಗ-ಬಲಿದಾನವನ್ನು ಮಾಡಿದ್ದಾರೆ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ತಾಲೂಕಿನ ಕೊಳಗಿಬೀಸ್ ಶ್ರೀ ಮಾರುತಿ ದೇವಾಲಯದಲ್ಲಿ ಭಾನುವಾರ ನಡೆದ ಮಹಾದ್ವಾರ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶ್ರೀ ಕ್ಷೇತ್ರ ಕೊಳಗಿಬೀಸ್ ಗೆ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ದಾನಿಗಳ ಸಹಕಾರ, ಭಕ್ತರ ಕೊಡುಗೆಯಿಂದಾಗಿ ಕ್ಷೇತ್ರದ ಅಭಿವೃದ್ಧಿ ನಡೆಯುತ್ತಿರುವುದು ಸಂತಸದ ವಿಷಯ. ಹಣದ ಸದ್ಬಳಕೆ ಮಾಡುವ ಮನೋಭಾವ ಮುಖ್ಯ. ಆ ವಿಷಯದಲ್ಲಿ ಶ್ರೀನಿವಾಸ ಹೆಬ್ಬಾರ್ ಕೊಡುಗೆ ಅಸಾಮಾನ್ಯವಾದುದು. ದೇವಾಲಯ, ಕೆರೆಗಳ ಅಭಿವೃದ್ಧಿ ಮೂಲಕ ನಾಡಿನ ಜನತೆಯ ಮನೆಮಾತಾಗಿದ್ದಾರೆ.
ಸನಾತನ ಧರ್ಮದಲ್ಲಿ ಆಧ್ಯಾತ್ಮಿಕ ತಳಹದಿ ಮುಖ್ಯವಾದುದು. ನಾವೆಲ್ಲರೂ ದೇವರನ್ನು ಶ್ರದ್ಧೆ-ಭಕ್ತಿಯ ಕೇಂದ್ರಗಳಾಗಿ ಕಂಡುಕೊಂಡಿದ್ದೇವೆ. ದೌರ್ಬಲ್ಯ ದೂರವಾಗಿ ವಿಶಾಲ ಮನೋಭಾವನೆ ರೂಢಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಲು ನಮ್ಮ ಶ್ರದ್ಧಾಕೇಂದ್ರವನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದರು.
ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಮಾರುತಿಯೆಂದರೆ ಭಕ್ತಿ, ಶಕ್ತಿ, ಯುಕ್ತಿಯ ಪ್ರತೀಕವಾಗಿದೆ. ಭಾರತದ ಪ್ರತಿರೂಪವನ್ನು ಮಾರುತಿಯಲ್ಲಿ ಕಾಣಬಹುದಾಗಿದೆ. ಭಕ್ತಿ, ಶಕ್ತಿ, ಯುಕ್ತಿಯ ಕಾರಣಕ್ಕೆ ಭಾರತೀಯರು ಗುರುತಿಸಿಕೊಂಡಿದ್ದಾರೆ. ನಮ್ಮ ಪರಿಸರ, ಶ್ರದ್ಧಾಕೇಂದ್ರಗಳನ್ನು ಜೊತೆಯಲ್ಲಿಟ್ಟುಕೊಂಡು ವಿಕಾಸದತ್ತ ಹೆಜ್ಜೆಯನ್ನಿಡಬೇಕಿದೆ ಎಂದರು.
ಜೀವಜಲ ಕಾರ್ಯಪಡೆ ಮೂಲಕ ರಾಜ್ಯದೆಲ್ಲೆಡೆ ಹೆಬ್ಬಾರರು ಚಿರಪರಿಚಿತರು. ಒಳ್ಳೆಯ ಕೆಲಸಕ್ಕೆ ಅವರ ಕೊಡುಗೆ ಇನ್ನಷ್ಟು ಹೆಚ್ಚಲಿ ಎಂದರು. ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಸ್ಪೀಕರ್ ಕಾಗೇರಿ ಮಾದರಿಯಾಗಿದ್ದಾರೆ. ಜೊತೆಗೆ ಕರ್ನಾಟಕ ವಿಧಾನಸಭೆಯನ್ನೂ ಸಹ ದೇಶದಲ್ಲಿಯೇ ಮಾದರಿ ವಿಧಾನಸಭೆಯನ್ನಾಗಿ ಮಾಡಿದ್ದಾರೆ.
ಮಾಜಿ ಸಚಿವ ಆರ್.ವಿ. ದೇಶಪಾಂಡೆ ಮಾತನಾಡಿ, ಧಾರ್ಮಿಕ ಕೇಂದ್ರಗಳನ್ನು ಸರಕಾರ ಕಟ್ಟಿಸಿಲ್ಲ. ಬದಲಾಗಿ ಭಕ್ತರು ನಿರ್ಮಿಸಿಕೊಂಡಿದ್ದಾರೆ. ಇಂದು ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಅಂಧಶ್ರದ್ಧೆಯಿಂದ ಎಂದಿಗೂ ನಡೆಯಬಾರದು. ದೇವರ, ತಂದೆ-ತಾಯಿಗಳ ಆಶೀರ್ವಾದ ವಿನಾಃ ಸಾಧನೆ ಸಾಧ್ಯವಿಲ್ಲ. ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಯಿಂದ ಮನಃಶಾಂತಿ ದೊರೆಯುತ್ತದೆ. ಸಂಪಾದನೆಯ ಕೆಲವು ಭಾಗ ಸಮಾಜದ ಅಭಿವೃದ್ಧಿಗಾಗಿ ಬಳಕೆಯಾಗಬೇಕು. ಒಳ್ಳೆಯ ಕೆಲಸವನ್ನು ನಾವೆಲ್ಲರೂ ಉತ್ತೇಜಿಸಬೇಕು ಜೊತೆಗೆ ಜಿಲ್ಲೆಯ ಧಾರ್ಮಿಕ ಕೇಂದ್ರಗಳನ್ನು ಪ್ರವಾಸಿ ಕ್ಷೇತ್ರಗಳನ್ಮಾಗಿ ಅಭಿವೃದ್ಧಿ ಪಡಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ಹೆಬ್ಬಾರ್ ಮಾತನಾಡಿ, ಕುಟುಂಬದವರ ಸಹಕಾರದಿಂದ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಲು ಪ್ರೇರಣೆಯಾಗಿದೆ. ದೇವಾಲಯದ ಆಡಳಿತ ಮಂಡಳಿ ಹಾಗು ಎಲ್ಲರ ಸಹಕಾರದಿಂದ ಈ ಕಾರ್ಯ ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ವಿಸ್ತಾರ ಮೀಡಿಯಾ ಪ್ರೈ.ಲಿ. ಎಂ.ಡಿ ಏಚ್.ವಿ.ಧರ್ಮೇಶ್, ಶ್ರೀ ಮಾರುತಿ ದೇವಾಲಯದ ಅಧ್ಯಕ್ಷ ಶ್ರೀಧರ ಹೆಗಡೆ ಇಳ್ಳುಮನೆ ಇದ್ದರು. ಗಿರಿಧರ ಕಬ್ನಳ್ಳಿ ನಿರ್ವಹಿಸಿ ವಂದಿಸಿದರು.