ಶಿರಸಿ: ಬೆಂಗಳೂರಿನ ಆದರ್ಶ ಸುಗಮಸಂಗೀತ ಅಕಾಡೆಮಿ ವಿವಿಧ ಜಿಲ್ಲೆಗಳಲ್ಲಿ ಕನ್ನಡೋತ್ಸವ ಕಾರ್ಯಕ್ರಮದಡಿಯಲ್ಲಿ ಆಯೋಜಿಸಿರುವ ಸರಣಿ ಕಾರ್ಯಕ್ರಮ ನಗರದ ಅರುಣೋದಯ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಯಶಸ್ವಿಯಾಗಿ ನೆರವೇರಿತು.
ಖ್ಯಾತ ವೈದ್ಯ ಡಾ.ಸಿ ಎ ಕಿಶೋರ್ ಅವರು ಕಾರ್ಯಕ್ರಮ ಉದ್ಘಾಟಿಸಿ, ಆದರ್ಶ ಸುಗಮ ಸಂಗೀತ ಅಕಾಡೆಮಿ ವಿವಿಧ ಜಿಲ್ಲೆಯಲ್ಲಿ ಇಂಥ ತಾರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ಮಳೆಗಾಲದಲ್ಲಿ ಶೀತ ನೆಗಡಿ ಮುಂತಾದ ಕಾಯಿಲೆಗಳಿಗೆ ಮನೆ ಮದ್ದಿನಲ್ಲಿಯೇ ಹೇಗೆ ಪರಿಹಾರ ಕಂಡುಕೊಳ್ಳುವುದು ಎಂಬುದನ್ನು ಕುರಿತು ಉಪನ್ಯಾಸ ನೀಡಿದರು.
ಅಕಾಡೆಮಿ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ, ಪ್ರೊ.ಕೆ ಎಸ್ ನಿಸಾರ್ ಅಹಮದ್ ಅವರ ಕನ್ನಡವೆಂದರೆ ಬರಿ ನುಡಿಯಲ್ಲ ಗೀತೆಯನ್ನು ಹೇಳಿಕೊಡುತ್ತಲೇ ಸ್ವರ ಪಾಠ, ಧ್ವನಿ ಸಂಸ್ಕರಣೆಯನ್ನೂ ಪರಿಚಯಿಸಿದರು. ಪುರಂದರದಾಸರ ರಚನೆ ತಾರಕ್ಕ ಬಿಂದಿಗೆ, ಏನುಧನ್ಯಳೋ ಲಕುಮಿ ಗೀತೆಗಳನ್ನು ಶುದ್ಧ ಶಾಸ್ತ್ರೀಯ ಸಂಗೀತದ ಧಾಟಿಯನ್ನೂ ಹಾಡಿ ತೋರಿಸಿ ಸ್ವರಪ್ರಸ್ತಾರ ಮಾಡಿ ತೋರಿಸಿ ಗಮನ ಸೆಳೆದರು. ಸುಗಮ ಸಂಗೀತ ಶೈಲಿಯಲ್ಲೂ ಹಾಡಿಸಿ ಮನನ ಮಾಡಿದರು.
ಪ್ರಸಿದ್ಧ ಹಾರ್ಮೊನಿಯಂ ವಾದಕ ವಿದ್ವಾನ್ ಪ್ರಕಾಶ್ ಹೆಗಡೆ, ತಬಲಾ ವಾದಕ ಸಂಕೇತ್, ವಿಜಯೇಂದ್ರ ಅಜ್ಜಿಬಳ ಸಹಕರಿಸಿದರು.
ಎಲೆಗಳು ನೂರಾರು ಭಾವದ ಎಳೆಗಳು ನೂರಾರು,ಕನ್ನಡವೇ ಸತ್ಯ ಕನ್ನಡವೇ ನಿತ್ಯ, ತುಂಬುತಿಂಗಳಿನ ಮಲ್ಲಿಗೆ ಹಂಬಿನ ಮುಂತಾದ ಗೀತೆಗಳ, ಹಾಗೂ ವಿವಿಧ ಶಾಸ್ತ್ರೀಯ ಸಂಯೋಜನೆಗಳ ಸ್ವರ ಪ್ರಸ್ತಾರಗಳು ಶಿಬಿರಾರ್ಥಿಗಳ ಮನಗೆಲ್ಲುವಲ್ಲಿ ಸಫಲವಾಯಿತು.
ಶಿಬಿರದ ಸಂಚಾಲಕ ಶಿರಸಿ ರತ್ನಾಕರ್ ಸ್ವಾಗತಿಸಿದರು. ಶಿಬಿರಾರ್ಥಿಗಳಿಗೆ ಪ್ರಶಂಸಾ ಪತ್ರ ನೀಡಲಾಯಿತು. ಅರುಣೋದಯ ತರಬೇತಿ ಕೇಂದ್ರದ ಮುಖ್ಯಸ್ಥ ಸತೀಶ ನಾಯ್ಕ, ಸುಭಾಸ್ ಮಂಡೂರು, ದಿವ್ಯಾ ಶೇಟ್, ಜ್ಯೋತಿ ಮುಂತಾದವರು ಉಪಸ್ಥಿತರಿದ್ದರು.