
ಕುಮಟಾ: ಸ್ವಾಯತ್ತ ವಿಶ್ವವಿದ್ಯಾಲಯ ಮತ್ತು ಭಾರತದ ಸಂಸತ್ತಿನ ಕಾಯ್ದೆಯ ಮೂಲಕ ಮಹತ್ವದ ಸಂಸ್ಥೆಯೆಂದು ಘೋಷಿಸಲ್ಪಟ್ಟ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ನಿರ್ದೇಶನದಲ್ಲಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯು ಜು 14 ರಂದು ನಡೆಸಿದ ರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ಇಲ್ಲಿನ ಡಾ. ಸುಮಂತ ಜಯದೇವ ಬಳಗಂಡಿ ಪ್ರಥಮ ಸ್ಥಾನ ಪಡೆದು ಡಿ.ಎಮ್ ಅಧ್ಯಯನಕ್ಕೆ ಆಯ್ಕೆಯಾಗಿದ್ದಾರೆ.
ಅಂತರಾಷ್ಟ್ರೀಯ ಮಾನ್ಯತೆ ಪಡೆದ ಪ್ರತಿಷ್ಠಿತ ನಿಮ್ಹಾನ್ಸ್ ಸಂಸ್ಥೆಯಲ್ಲಿ ಮೂರು ವರ್ಷಗಳ ಅವಧಿಯ ನ್ಯೂರೋಲೋಜಿ ಸೂಪರ್ ಸ್ಪೆಶಲೈಸೇಶನ್ ಅಧ್ಯಯನಕ್ಕೆ ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆದ ಐವರು ವೈದ್ಯರುಗಳಿಗೆ ಮಾತ್ರ ಈ ಬಾರಿ ಅವಕಾಶವಿದ್ದು, ಈ ಐದು ಸ್ಥಾನಗಳಿಗಾಗಿ ವಿವಿಧ ರಾಜ್ಯಗಳ ಸಾವಿರಾರು ವೈದ್ಯರುಗಳು ಹಾಜರಾಗಿ ಪರೀಕ್ಷೆ ಎದುರಿಸಿದ್ದರು.
ಪ್ರಥಮ ಯತ್ನದಲ್ಲೇ ಪ್ರಥಮ ಸ್ಥಾನ ಪಡೆದು ಆಯ್ಕೆಯಾದ ಡಾ.ಸುಮಂತ ಬಳಗಂಡಿ ಅವರು ಕಿಮ್ಸ್ ಹುಬ್ಬಳ್ಳಿಯಲ್ಲಿ ಎಮ್ಬಿಬಿಎಸ್ ಮತ್ತು ಎಮ್ಡಿ ಅಭ್ಯಸಿಸಿ ಪದವಿ ಪಡೆದಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಬೋರ್ಡ್ ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಎಮ್ಡಿಗೆ ತತ್ಸಮಾನವಾಗಿರುವ ಡಿಎನ್ಬಿ ಪದವಿ ಪ್ರಮಾಣಪತ್ರವನ್ನೂ ಇತ್ತೀಚೆಗಷ್ಟೇ ಪಡೆದಿರುತ್ತಾರೆ.
ಪ್ರಸ್ತುತ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಾ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಫಿಸಿಶಿಯನ್ ಆಗಿ ಸೇವೆ ಸಲ್ಲಿಸುತ್ತಿರುವ ಇವರು, ಮೂಲತಃ ಶಿರಸಿ ತಾಲೂಕು ಮುಂಡಿಗೇಸರದವರಾಗಿದ್ದು, ಹಾಲಿ ಕುಮಟಾದಲ್ಲಿ ನೆಲೆಸಿರುವ ಸ್ವಾತಿ ಮತ್ತು ಜಯದೇವ ಬಳಗಂಡಿಯವರ ಸುಪುತ್ರರಾಗಿದ್ದಾರೆ. ಡಾ.ಸುಮಂತ ಬಳಗಂಡಿಯವರ ಸಾಧನೆಗೆ ಅವರ ಕುಟುಂಬಸ್ಥರು, ಸ್ನೇಹಿತರು, ಹಿತೈಷಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.