ಕಾರವಾರ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಸಂವಿಧಾನತ್ಮಕವಾಗಿ ಮೀಸಲಾತಿ ಪ್ರಮಾಣವನ್ನ ಜನಸಂಖ್ಯೆಗನುಗುಣವಾಗಿ ಹೆಚ್ಚಳ ಮಾಡುವಂತೆ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೊರಾಟ ಸಮಿತಿ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರು ಮೀಸಲಾತಿ ಪ್ರಮಾಣ ಪತ್ರ ಹೆಚ್ಚಿಸುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ ಕುಳಿತು ನೂರು ದಿನಗಳು ಪೂರೈಸಿದ ಹಿನ್ನಲೆಯಲ್ಲಿ ರಾಜ್ಯದ 30 ಜಿಲ್ಲಾ ಕೇಂದ್ರ ಹಾಗೂ ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಸಂಘಟನೆ ಪರವಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಪರಿಶಿಷ್ಟ ಪಂಗಡ ನೌಕರರ ಸಂಘದ ಮುಖಂಡ ಗಣೇಶ ಬಿಷ್ಠಣ್ಣನವರ್ ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಹೇಳಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ದೀಪಕ್ ಕುಡಾಳಕರ್, ಪರಿಶಿಷ್ಟ ಜಾತಿಗೆ ಶೇಕಡಾ 15 ರಷ್ಟು ಮೀಸಲಾತಿ ಸೌಲಭ್ಯವಿದ್ದು, ಪರಿಶಿಷ್ಟ ಪಂಗಡಗಳಿಗೆ ಶೇಕಡಾ 3 ರಷ್ಟು ಮೀಸಲಾತಿಯಿದೆ. ಈ ಹಿಂದೆ ಜನಸಂಖ್ಯೆಗಣುಗುಣವಾಗಿ ಮೀಸಲಾತಿ ನಿಗದಿ ಮಾಡಲಾಗಿತ್ತು. ಆದರೆ ಸದ್ಯ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಜನಸಂಖ್ಯೆ ಪ್ರಮಾಣ ಸಹ ಹೆಚ್ಚಳವಾಗಿದ್ದು ಮೀಸಲಾತಿ ಪ್ರಮಾಣವನ್ನ ಮಾತ್ರ ಸರ್ಕಾರ ಹೆಚ್ಚಳ ಮಾಡಿಲ್ಲ. ಈ ನಿಟ್ಟಿನಲ್ಲಿ ಪ್ರಸನ್ನಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್ರವರ ಏಕ ಸದಸ್ಯ ಆಯೋಗದ ವರದಿ ಪ್ರಕಾರ ಸಂವಿಧಾನತ್ಮಕವಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೈಕ್ಷಣಿಕ ಸಂಸ್ಥೆಗಳ ಪ್ರವೇಶ ಮತ್ತು ರಾಜ್ಯ ಸರ್ಜಾರದ ಸೇವೆಗಳಲ್ಲಿರುವ ಮೀಸಲಾತಿ ಪ್ರಮಾಣವನ್ನು ಪರಿಶಿಷ್ಟ ಜಾತಿಯವರಿಗೆ ಶೇಕಡಾ 15 ರಿಂದ 17ಕ್ಕೆ, ಪರಿಶಿಷ್ಟ ಪಂಗಡದವರಿಗೆ ಶೇಕಡಾ 3 ರಿಂದ 7.5ಕ್ಕೆ ಏರಿಸುವಂತೆ ಸರ್ಕಾರ ಆದೇಶ ಮಾಡಬೇಕು ಎಂದು ಒತ್ತಾಯ ಮಾಡಲಾಗಿದೆ ಎಂದರು.
ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಲಿಷಾ ಎಲಕಪಾಟಿ ಮಾತನಾಡಿ, ಹಿಂದಿನಿಂದಲೂ ದಲಿತರನ್ನ ಎಲ್ಲಿ ಇಡಬೇಕು ಅಲ್ಲೇ ಇಟ್ಟಿದ್ದಾರೆ. ಸ್ವಾತಂತ್ರ್ಯ ಬಂದ ನಂತರ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನ್ಯಾಯ ಕೊಡಿಸಿದರು. ಆದರೆ ನಂತರ ಬಂದ ಸರ್ಕಾರಗಳು ದಲಿತರಿಗೆ ನ್ಯಾಯ ಕೊಡಿಸುವ ಕಾರ್ಯ ಮಾಡಿಲ್ಲ. ನೂರು ದಿನಗಳಿಂದ ಹೋರಾಟ ಮಾಡಿದರು ಸರ್ಕಾರ ಸ್ಪಂದಿಸದಿರುವುದು ನಿಜಕ್ಕೂ ದುರಂತವಾಗಿದೆ ಎಂದರು.
ಮತಾಂತರ ಕಾಯ್ದೆ ಜಾರಿಗೆ ತಂದಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನಾಂಗದವರು ಮತಾಂತರ ಆಗಬಾರದು ಎಂದು ಕಾಯ್ದೆ ಜಾರಿಗೆ ತಂದಿದ್ದಾರೆ. ನಮಗೆ ಮೂಲಭೂತ ಸೌಕರ್ಯ ಕೊಟ್ಟು, ಸರಿಯಾಗಿ ಮೀಸಲಾತಿ ನೀಡಿದರೆ ಮತಾಂತರ ಆಗಲು ಯಾರು ಮುಂದಾಗುತ್ತಾರೆ. ಸಮಾಜದಲ್ಲಿ ದಲಿತರ ಮೇಲೆ ದಬ್ಬಾಳಿಕೆ ನಿಂತರೆ, ಸರಿಯಾಗಿ ಮೀಸಲಾತಿ ಸಿಗುವಂತಾದರೆ ಮತಾಂತರ ಆಗುವುದು ಸಹ ನಿಲ್ಲುತ್ತದೆ ಎಂದಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ನಗರಸಭಾ ಸದಸ್ಯ ಹನುಮಂತಪ್ಪ ತಳವಾರ್, ಸಂಘಟನೆಯ ಅಜಯ್ ಶಿಗ್ಲಿ, ರವಿ, ಹನುಮಂತ, ನಾಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.