ಕಾರವಾರ: ಪ್ರತಿನಿತ್ಯ ಪತ್ರಿಕೋದ್ಯಮದ ಕೆಲಸದ ನಿರ್ವಹಣೆಯಲ್ಲಿ ನಿರತರಾಗಿರುತ್ತಿದ್ದ ಪತ್ರಕರ್ತರು ಇಂಥ ಕ್ರೀಡಾ ಚಟುವಟಿಕೆಗಳಿಂದ ಕೊಂಚ ವಿರಮಿಸಲು ಸಾಧ್ಯವಾಗುತ್ತದೆ. ಕ್ರೀಡೆಯೂ ಸಹ ಮನಷ್ಯನ ಒಂದು ಅವಿಭಾಜ್ಯ ಅಂಗ. ಪ್ರತಿಯೊಬ್ಬರೂ ಕ್ರೀಡಾಸ್ಫೂರ್ತಿಯಿಂದ ಆಡಿ ನಿಮ್ಮಲ್ಲಿಯ ಪ್ರತಿಭೆಯನ್ನೂ ಸಹ ಹೊರಹಾಕಿ, ಜೊತೆಗೆ ನೀವು ಹೇಗೆ ಬೇರೆಯವರ ಪ್ರತಿಭೆಯನ್ನೂ ತೋರಿಸಿ, ಕೆಲವರ ನ್ಯೂನ್ಯತೆಗಳನ್ನು ಬರವಣಿಗೆಯ ಮೂಲಕ ಸುಧಾರಣೆ ತರುತ್ತಿರುವ ಹಾಗೆ ನೀವು ಕೂಡ ಈ ಕ್ರಿಕೆಟ್ ಆಟದಲ್ಲಿ ಯಶಸ್ವಿಯಾಗಿ ಹೊರ ಹೊಮ್ಮುವಂತಾಗಲಿ ಎಂದು ನಗರಸಭಾ ಅಧ್ಯಕ್ಷ ಡಾ.ನಿತೀನ ಪಿಕಳೆ ಆಶಿಸಿದರು.
ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿಯ ಆಯೋಜನೆಯಲ್ಲಿ ನಗರದ ಮಾಲಾದೇವಿ ಮೈದಾನದಲ್ಲಿ ‘ಮೀಡಿಯಾ ಕಪ್- 2022′ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ಗೆ ನಗರಸಭಾ ಅಧ್ಯಕ್ಷ ಡಾ.ನಿತೀನ್ ಪಿಕಳೆ ಹಾಗೂ ನೇತ್ರಾಣಿ ಅಡ್ವೇಂಚರ್ಸ್ ಮಾಲೀಕ ಗಣೇಶ ಹರಿಕಂತ್ರ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ನೇತ್ರಾಣಿ ಅಡ್ವೆಂಚರ್ಸ್ ಮಾಲಿಕ ಗಣೇಶ ಹರಿಕಂತ್ರ ಪಂದ್ಯಾವಳಿಗೆ ಶುಭಕೋರಿದರು. ಉದ್ಘಾಟಕರಾಗಿ ಆಗಮಿಸಿದ್ದ ಡಾ.ನಿತಿನ ಪಿಕಳೆ ಹಾಗೂ ಗಣೇಶ ಹರಿಕಂತ್ರ ಪರಸ್ಪರ ಒಬ್ಬರಿಗೊಬ್ಬರು ಬೌಲಿಂಗ್, ಬ್ಯಾಟಿಂಗ್ ಮಾಡಿ ಗಮನ ಸೆಳೆದರು.
ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿ ಅಧ್ಯಕ್ಷ ಟಿ.ಬಿ.ಹರಿಕಾಂತ ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾರ್ಯದರ್ಶಿ ದೀಪಕ ಶೆಟ್ಟಿ, ಖಜಾಂಚಿ ಸುಭಾಷ್ ದೂಪದಹೊಂಡ, ಹಿರಿಯ ಪತ್ರಕರ್ತರಾದ ವಸಂತ ಭಟ್, ದೀಪಕಕುಮಾರ ಶೆಣೈ, ನಾಗರಾಜ ಹರಪನಳ್ಳಿ, ನಗರಸಭೆ ಮಾಜಿ ಸದಸ್ಯ ರತ್ನಾಕರ್ ನಾಯ್ಕ, ನಿರ್ಣಾಯಕರಾಗಿ ಆಗಮಿಸಿದ್ದ ದೀಪಕ ಬಿಣಗೇಕರ್, ಅಮಿತ ಕಾಮತ ಇದ್ದರು.
ಮೊದಲ ದಿನ ಕುಮಟಾ, ಕಾರವಾರ ‘ಎ’ ತಂಡಕ್ಕೆ ಗೆಲುವು: ಮೊದಲ ಪಂದ್ಯದಲ್ಲಿ ಕಾರವಾರ ‘ಬಿ’ ಹಾಗೂ ಕುಮಟಾ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಮಟಾ ತಂಡ ಜಯಗಳಿಸಿ ಮುಂದಿನ ಪಂದ್ಯಕ್ಕೆ ಅರ್ಹತೆ ಗಳಿಸಿತು. ಕಾರವಾರ ‘ಎ’ ಹಾಗೂ ಅಂಕೋಲಾ ತಂಡಗಳ ನಡುವೆ ಮೊದಲ ಹಣಾಹಣಿ ನಡೆಯಬೇಕಿತ್ತಾದರೂ ಅಂಕೋಲಾ ತಂಡ ಗೈರಾಗಿದ್ದರಿಂದ ಕಾರವಾರ ‘ಎ’ ಜಯ ಎಂದು ಘೋಷಣೆ ಮಾಡಲಾಯಿತು. ಮಧ್ಯಾಹ್ನ ಜೊಯಿಡಾ- ದಾಂಡೇಲಿ ಮತ್ತು ಯಲ್ಲಾಪುರ ನಡುವೆ ನಡೆಯಬೇಕಿದ್ದ ಪಂದ್ಯದಲ್ಲೂ ಯಲ್ಲಾಪುರ ತಂಡ ಗೈರಾಗಿದ್ದ ಕಾರಣ ಜೊಯಿಡಾ- ದಾಂಡೇಲಿ ತಂಡ ಜಯವೆಂದು ಘೋಷಿಸಲಾಯಿತು. ನಂತರ ಕಾರವಾರ ‘ಎ’ ಮತ್ತು ಜೊಯಿಡಾ- ದಾಂಡೇಲಿ ನಡುವೆ ನಡೆದ ಸೆಮಿಫೈನಲ್ನಲ್ಲಿ ಕಾರವಾರ ‘ಬಿ’ ತಂಡ ಜಯಗಳಿಸಿತು.
ಇಂದು ಫೈನಲ್ ಪಂದ್ಯಾಟ: ಇಂದು ಸಂಜೆ 4ಕ್ಕೆ ಬಹುಮಾನ ವಿತರಣಾ ಸಮಾರಂಭ ನಡೆಯಲಿದ್ದು, ಕುಮಟಾ ಶಾಸಕ ದಿನಕರ ಶೆಟ್ಟಿ ಬಹುಮಾನ ವಿತರಕರಾಗಿ ಪಾಲ್ಗೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸತೀಶ್ ಸೈಲ್, ಉತ್ತರಕನ್ನಡ ಜಿಲ್ಲಾ ಮೀನುಮಾರಾಟಗಾರರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ, ಉದ್ಯಮಿ ಗೋಪಾಲ ನಾಯಕ ಅಡ್ಲೂರು ಹಾಗೂ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.