ಕುಮಟಾ; ತಾಲೂಕಿನ ಐಗಳಕೂರ್ವೆ ಸೇತುವೆಯು ಅಪೂರ್ಣವಾಗಿದ್ದು, ಇದಕ್ಕೆ ಶಾಸಕರ ನಿರ್ಲಕ್ಷವೇ ಕಾರಣವೆಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಆರೋಪಿಸಿದ್ದಾರೆ ಐಗಳಕೂರ್ವೆ ಗ್ರಾಮಸ್ಥರ ಪ್ರತಿಭಟನೆಯಲ್ಲಿ ಭಾಗವಹಿಸಿದ ಅವರು, ಐಗಳಕೂರ್ವೆ ನಡುಗಡ್ಡೆಯಾಗಿದ್ದು, ಇಲ್ಲಿಯ ಜನತ ದಶಕ ದಶಕಗಳಿಂದಲೂ ದೋಣಿಯ ಮೇಲೆ ಓಡಾಟ ನಡೆಸಿದ್ದರು. ಈ ಬಗ್ಗೆ ಹಿಂದಿನ ಸರಕಾರ ಐಗಳಕೂರ್ವ ಸೇತುವೆ ನಿರ್ಮಿಸಲು 22 ಕೋಟಿ ರು, ಅನುದಾನವನ್ನು ನೀಡಿತ್ತು. ಇದರಿಂದ ಈ 4 ವರ್ಷಗಳಿಂದ ಕಾಮಗಾರಿ ನಡೆದು ಶೇ.90ರಷ್ಟು ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಕಳೆದ ಒಂದು ವರ್ಷದಿಂದ ಕಾಮಗಾರಿ ಸ್ಥಗಿತಗೊಂಡಿರಲು ಕಾರಣವೇನೆಂದು ಅವರು ಪ್ರಶ್ನಿಸಿದರು.
ಇಷ್ಟೊಂದು ದೊಡ್ಡ ಮೊತ್ತದ ಕಾಮಗಾರಿಯನ್ನು ತರಲು ಈಗಿನ ಶಾಸಕರಿಗೆ ಸಾಧ್ಯವಿಲ್ಲ. ಆದರೆ ಹಿಂದಿನ ಶಾಸಕರು ತಂದಿರುವ ಅನುದಾನದ ಕೆಲಸವನ್ನಾದರೂ ಮಾಡಿಸಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದ ಅವರು ಕಾಮಗಾರಿಗೆ ಈಗಿನ ಸರಕಾರ 40% ಪಡೆಯುವ ವಿಷಯ ಜಗಜ್ಜಾಹೀರಾಗಿದೆ. ಆದರೆ ಈ ಕೆಲಸದಲ್ಲಿ ಶಾಸಕರಿಗೆ ಕಮೀಷನ್ ದೊರೆಯದೇ ಇರುವುದು ಕಾಮಗಾರಿ ತಡೆಗೆ ಕಾರಣವೇ ಎಂದು ಪ್ರಶ್ನಿಸಿದ್ದಾರೆ.
ಈ ಕಾಮಗಾರಿಯನ್ನು ಯಾವುದೋ ದುರುದ್ದೇಶದಿಂದಲೇ ನಿಲ್ಲಿಸಲಾಗಿದೆ. ಯಾಕೆಂದರೆ ಇಷ್ಟು ದಿನ ನಾನಾ ಕಾರಣಗಳನ್ನು ಹೇಳುವ ಅಧಿಕಾರಿಗಳು ಇಂದು ಸೇತುವೆಯ ಮುಂದಿನ ಸಂಪರ್ಕ ರಸ್ತೆಯ ಸಮಸ್ಯೆಯನ್ನು ಮುಂದಿಟ್ಟಿದ್ದಾರೆ. 22 ಕೋಟಿ ಮೊತ್ತದ ಬೃಹತ್ ಸೇತುವೆಯನ್ನು ನಿರ್ಮಿಸುವಾಗ ಸೇತುವೆಯ ಎರಡೂ ಬದಿಯ ರಸ್ತೆಯ ಬಗ್ಗೆಯೂ ಕೂಡ ಗಮನ ಹರಿಸಬೇಕಿತ್ತಲ್ಲವೇ? ಹಾಗಿದ್ದರೆ ಖಾಸಗಿ ಜಾಗವನ್ನು ರಸ್ತೆಗಾಗಿ ಪಡೆಯಲಾಗದಿದ್ದರೆ ಇಷ್ಟೊಂದು ದೊಡ್ಡ ಮೊತ್ತವು ನೀರಿನಲ್ಲಿ ಹೋಮ ಮಾಡಿದಂತಲ್ಲವೇ ಎಂದು ಪ್ರಶ್ನಿಸಿದ್ದಾರೆ,
ಮಾಜಿ ಜಿ.ಪಂ.ಸದಸ್ಯಪ್ರದೀಪ ನಾಯಕ ದೇವರಭಾವಿ ಮಾತನಾಡಿ, ಈ ಹಿಂದೆ ಇಲ್ಲಿಯ ಜನರು ದೋಣಿಯ ಮೇಲೆ ಓಡಾಟ ನಡೆಸಿದ್ದರು. ಆದರೆ ಇಂದು ಸೇತುವೆ ನಿರ್ಮಾಣವಾಗಿದೆ. ಇದರಿಂದ ಜನರು ಇಲ್ಲಿ ದೋಣಿಯ ಮೇಲೂ ಓಡಾಡುವಂತಿಲ್ಲ. ಇತ್ತ ಸೇತುವೆಯ ಮೇಲೂ ಓಡಾಡುವಂತಿಲ್ಲ.ಯಾಕೆಂದರೆ ಸೇತುವೆಗೆ ಸಂಪರ್ಕ ರಸ್ತೆಗಳಿಲ್ಲ, ರಸ್ತೆಗಾಗಿ ಭೂ ಸ್ವಾಧೀನ ಪಡಿಸಿಕೊಳ್ಳುವುದು ಸರಕಾರಕ್ಕೆ ದೊಡ್ಡ ಕೆಲಸವಲ್ಲ. ತಕ್ಷಣ ಈ ಕಾಮಗಾರಿಯನ್ನು ಮುಂದುವರೆಸಬೇಕು, ಇಲ್ಲವಾದಲ್ಲಿ ಗ್ರಾಮಸ್ಥರ ಹೋರಾಟ ಮುಂದುವರೆಯಲಿದೆ ಎಂದರು ಸ್ಥಳಕ್ಕೆ ಆಗಮಿಸಿದ ರೆವನ್ನೂ ಅಧಿಕಾರಿಗಳು ಮಾತನಾಡಿ, ಶೀಘ್ರವೇ ಇಲ್ಲಿಯ ಸಂಪರ್ಕ ರಸ್ತೆಗಾಗಿ ಇರುವ ಜಾಗದ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿ, ಕಾಮಗಾರಿಗೆ ಅನುಕೂಲ ಒದಗಿಸಲಾಗುವುದು. ಅಲ್ಲದೇ ಸಧ್ಯದಲ್ಲಿಯೇ ಜನರ ಓಡಾಟಕ್ಕೆ ಅನುಕೂಲವಾಗುವಂತೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಕೃಷ್ಣಾನಂದ ವರ್ಣೇಕರ್ ಕೋಡ್ಕಣಿ ಗ್ರಾ, ಪಂ. ಅಧ್ಯಕ್ಷ ರಾಜೇಶ ಪಟಗಾರ, ಮೋಹನ ಪಟಗಾರ, ಊರ ಗ್ರಾಮಸ್ಥರು ಹಾಗೂ ಇತರರು ಹಾಜರಿದ್ದರು.