ಶಿರಸಿ:ತಾಲೂಕಿನ ಪ್ರಸಿದ್ಧ ಪವಿತ್ರಕ್ಷೇತ್ರ ಕೊಳಗಿಬೀಸ್ ಮಾರುತಿ ದೇವಸ್ಥಾನದ ಪ್ರವೇಶ ದ್ವಾರಕ್ಕೆ ನಿರ್ಮಾಣ ಮಾಡಲಾದ ನೂತನ ಭವ್ಯಮಹಾದ್ವಾರ ಸಮರ್ಪಣೆ, ಮಹಾರುದ್ರಯಾಗ, ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಮೇ 20,21,22ರಂದು ಕೊಳಗಿಬೀಸ್ನಲ್ಲಿ ನಡೆಯಲಿದೆ.
ಮಹಾ ಪ್ರವೇಶ ದ್ವಾರದ ನಿರ್ಮಾಣ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಕೊಳಗಿಬೀಸ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡ ಸಾಮಾಜಿಕ ನೇತಾರ, ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಹಾಗೂ ಇತರ ಪ್ರಮುಖರು ಮೂರು ದಿನಗಳಲ್ಲಿ 13 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ದೇವಸ್ಥಾನದ ಪ್ರಧಾನ ಅರ್ಚಕ ಕುಮಾರ ಭಟ್ಟ ಮಾತನಾಡಿ, ಮಹಾದ್ವಾರವನ್ನು ಹೇಮಾ ಹೆಬ್ಬಾರ್,ಶ್ರೀನಿವಾಸ ಹೆಬ್ಬಾರ್, ನಿವೇದಿತಾ, ಅಕ್ಷಯ ಹೆಗಡೆ, ಅವನಿ ಜೊತೆಯಾಗಿ ನಿರ್ಮಾಣ ಮಾಡಿದ್ದಾರೆ. ಕೊಳಗಿಬೀಸ್ ದೇವಸ್ಥಾನದಲ್ಲಿ ಮಹಾರುದ್ರಯಾಗವು 20ರ ಬೆಳಗಿನಿಂದಲೇ ಆರಂಭವಾಗಲಿದೆ. ಸಂಜೆ 5ಕ್ಕೆ ನಡೆಯುವ ಪ್ರವೇಶ ಮಹಾದ್ವಾರ ಸಮರ್ಪಣೆಯ ಅಂಗವಾಗಿ ದೇವರ ಸವಾರಿ ಉತ್ಸವ ಮಹಾದ್ವಾರ ಮಂಟಪದಲ್ಲಿ ಕುಳಿತು ಹವನ ಜೊತೆ ಶಿಖರ ಕಳಶ ಸ್ಥಾಪನೆ ನಡೆಯಲಿದೆ. ದೇವರ ಪ್ರವೇಶ ಪೂರ್ಣಕುಂಭ,ದೀಪಾಲಂಕಾರ,ಪಂಚವಾದ್ಯಗಳ ಜೊತೆ ನಡೆಯಲಿದೆ. 21ರಂದು 11 ಕುಂಡದಲ್ಲಿ 121 ಋತ್ವಿಜರಿಂದ ಆಹುತಿ ಸಲ್ಲಿಸುವ ಮಹಾ ರುದ್ರಯಾಗ ನಡೆಯಲಿದೆ.ಇದಕ್ಕೆ ಬೇಕಾದ ಕುಂಡಗಳು ಸಿದ್ದವಾಗುತ್ತಿವೆ.ಈ ಮೂರು ದಿನಗಳ ವ್ಯವಸ್ಥೆ ನಿರ್ವಹಣೆಯಲ್ಲಿ ನಾಲ್ಕು ನೂರಕ್ಕೂ ಅಧಿಕ ಕಾರ್ಯಕರ್ತರು ಜೊತೆಯಾಗಲಿದ್ದಾರೆ ಎಂದರು.
ಅಂತೆಯೇ ಇಳಿಹೊತ್ತಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದು 21ರ ಸಂಜೆ 6ಕ್ಕೆ ಭಕ್ತಿಭಾವ ಲಹರಿ ಕಾರ್ಯಕ್ರಮವು ಸಾದ್ವಿನಿ ಕೊಪ್ಪ, ಶ್ರಾವಣಿ ಕೊಪ್ಪ ತಂಡದಿಂದ ನಡೆಯಲಿದೆ. ರಾತ್ರಿ 8ರಿಂದ ಗಣಪತಿ ಹೆಗಡೆ ತೋಟಿಮನೆ, ಸುಬ್ರಹ್ಮಣ್ಯ ಚಿಟ್ಟಾಣಿ, ಸರ್ವೆಶ್ವರ ಮೂರೂರು ಸಂಗಡಿಗರಿಂದ ಲಂಕಾದಹನ ನಡೆಯಲಿದೆ ಎಂದರು.
ಮೇ 22ರಂದು ಸಂಜೆ 5ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ವಿಸ್ತಾರ ಮೀಡಿಯಾದ ಎಚ್.ವಿ.ಧರ್ಮೇಶ, ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೇಮನೆ ಭಾಗವಹಿಸಲಿದ್ದು, ಐದು ಸಾವಿರ ಜನರು ಕುಳಿತು ವೀಕ್ಷಿಸಬಹುದಾದ ಸಿದ್ಧತೆ ಮಾಡಿದ್ದೇವೆ. ಬೆಳಗಿನಿಂದ ಪ್ರಸಾದ ಸೇವೆ ನಿರಂತರ ಇರಲಿದೆ ಎಂದರು.
ಹಳೆ ಬೇರು ಹೊಸ ಚಿಗುರು ಗಾನ ವೈವಿಧ್ಯದಲ್ಲಿ ಭಾಗವತರಾಘವೇಂದ್ರ ಜನ್ಸಾಲೆ, ಗಾಯಕ ವಿನಾಯಕ ಮುತ್ಮುರ್ಡು, ತಬಲಾ ವಾದಕ ಲಕ್ಷ್ಮೀಶ ರಾವ್ ಕಲ್ಗುಂಡಿಕೊಪ್ಪ, ಮದ್ದಲೆವಾದಕ ಶಂಕರ ಭಾಗವತ, ವಾಯಲಿನ ವಾದಕ ಶಂಕರ ಕಬಾಡಿ, ಕೊಳಲುವಾದಕ ಸಮರ್ಥ ತಂಗಾರಮನೆ, ಚಂಡೆವಾದಕ ಗಣೇಶ ಗಾಂವಕರ, ಹಾರ್ಮೋನಿಯಂ ವಾದಕ ಅಜಯ ವರ್ಗಾಸರ ಭಾಗವಹಿಸುವರು ಎಂದರು.
ರಾತ್ರಿ 8ಕ್ಕೆ ಉದಪಾ 2 ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಕೊಳಲುವಾದಕ ಅಮಿತ್ ನಾಡಿಗ ಸಂಯೋಜನೆಯಲ್ಲಿ ಸಿದ್ದಾರ್ಥ ಬೆಳ್ಮಣ್ಣು, ಅನೂರು ವಿನೋದ ಶ್ಯಾಮ, ಕಾರ್ತಿಕ ಮಣಿ, ರೂಪಕ ಕಲ್ಲೂರಕರ, ಸುನಾದ ಅನೂರ ಭಾಗವಹಿಸುವರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ವರ್ಣವಲ್ಲೀ ಸಂಸ್ಥಾನದ ಕರೂರು ಸೀಮಾ ಅಧ್ಯಕ್ಷ ಉಮಾಪತಿ ಭಟ್ಟ, ದೇವಸ್ಥಾನದ ಅಧ್ಯಕ್ಷ ಶ್ರೀಧರ ಹೆಗಡೆ ಇಳ್ಳುಮನೆ, ಉಪಾಧ್ಯಕ್ಷ ನರಸಿಂಹ ಹೆಬ್ಬಲಸು, ಶ್ರೀಧರ ಭಟ್ಟ ಕೊಳಗಿಬೀಸ್, ಗಿರಿಧರ ಕಬ್ನಳ್ಳಿ ಇತರರು ಇದ್ದರು.
ಭಗವಾನ್ ಶ್ರೀಧರರ, ಶ್ರೀ ಸಹಜಾನಂದ ಅವಧೂತರ ಮೂರ್ತಿ ದ್ವಾರದ ಮೇಲ್ಭಾಗದಲ್ಲಿ ಕೂರಿಸಲಾಗಿದೆ. 200 ಅಡಿ ಉದ್ದ 18 ಅಡಿ ಎತ್ತರ ಮುಖ್ಯ ದ್ವಾರ ಇದಾಗಿದ್ದು ಪ್ರವೇಶದ್ವಾರದ ಆಕರ್ಷಕ ಗೋಪುರ 30 ಅಡಿ ಎತ್ತರ ಇದೆ. ಇಷ್ಟದ ದೇವರಿಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ಪುಣ್ಯ.– ಶ್ರೀನಿವಾಸ ಹೆಬ್ಬಾರ, ಅಧ್ಯಕ್ಷರು ಜೀವಜಲ ಕಾರ್ಯಪಡೆ, ಶಿರಸಿ