ಭಟ್ಕಳ; ಮೊಗೇರ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ಮತ್ತು ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ ಲಕ್ಷ್ಮೀ ಸರಸ್ವತಿ ಮೊಗೇರ ವಿದ್ಯಾವರ್ಧಕ ಸಂಘದಿಂದ ಉಪವಿಭಾಗಾಧಿಕಾರಿ ಮೂಲಕ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ರವಾನಿಸಿದರು.
ಸರಕಾರಿ ಆದೇಶ ಹಾಗೂ ಮೊಗೇರ ಸಮಾಜಕ್ಕೆ ಸಿಗಬೇಕಾದ ಸೌಲಭ್ಯದ ಕುರಿತು ಮಾರ್ಚ್ 23ರಂದು ಜಿಲ್ಲಾಧಿಕಾರಿಗಳ ಮುಖಾಂತರ ಮನವಿಸಲ್ಲಿಸಿ ಧರಣಿ ಸತ್ಯಾಗ್ರಹವನ್ನು ಭಟ್ಕಳ ತಹಶೀಲ್ದಾರ ಕಚೇರಿಯ ಎದುರು ಪ್ರಾರಂಭಿಸಲಾಗಿತ್ತು. ಧರಣಿ ಸತ್ಯಾಗ್ರಹ ಸ್ಥಳಕ್ಕೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಹ ಭೇಟಿಕೊಟ್ಟು, ಈ ಸಂಕಷ್ಟಕ್ಕೆ ಪರಿಹಾರವನ್ನು ಸರಕಾರಿ ಹಂತದಲ್ಲಿ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಏಪ್ರಿಲ್ 29ರಂದು ಬೆಂಗಳೂರಿನಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಭಟ್ಕಳ ಶಾಸಕರೊಂದಿಗೆ ತಮ್ಮ ಇಲಾಖೆಯ ಅಧಿಕಾರಿಗಳ ಉನ್ನತ ಮಟ್ಟದ ಸಭೆಯನ್ನು ಕರೆಯಲಾಗಿತ್ತು.
ಸಭೆಯಲ್ಲಿ ನಮ್ಮ ಸಮಾಜದ ಪ್ರಮುಖರನ್ನು ಆಹ್ವಾನಿಸಿ ನಮ್ಮ ಸಮಾಜದ ಕುಂದುಕೊರತೆಗಳನ್ನು ಆಲಿಸಿ ಪರಿಹಾರಕ್ಕಾಗಿ ದೀರ್ಘ ಚರ್ಚೆಯನ್ನು ಮಾಡಿ ನಮ್ಮಸಮಾಜಕ್ಕೆ ಆಗುತ್ತಿರುವ ತೊಂದರೆಗಳನ್ನು ಎರಡು ವಾರಗಳಲ್ಲಿ ಪರಿಹರಿಸುವುದಾಗಿ ಭರವಸೆಯನ್ನು ನೀಡಿದ್ದರು. ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಚರ್ಚೆಗಾಗಿ ಸಭೆಯನ್ನು ಮತ್ತೊಮ್ಮೆ ನಡೆಸಿ ನಮ್ಮ ಸಮಾಜಕ್ಕೆ ಸಮಾಜದ ಪ್ರತಿನಿಧಿಗಳಿಗೆ ತಿಳಿಸುವುದಾಗಿ ತಿಳಿಸಿದ್ದರು.ನಾವು ಎರಡು ವಾರಗಳಿಂದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ಮಾತಿಗೆ ಮನ್ನಣೆ ನೀಡಿ ಶಾಂತ ರೀತಿಯಲ್ಲಿ ಧರಣಿಯನ್ನು ನಡೆಸುತ್ತಾ ಬಂದಿದ್ದೇವೆ. ಆದರೆ ಯಾರಿಂದಲೂ ಯಾವುದೇ ರೀತಿಯ ಮಾಹಿತಿ ಬಾರದಿರುವುದು ತುಂಬಾ ವಿಷಾದನೀಯ ಎಂದು ತಿಳಿಸಿದ್ದಾರೆ.
ಈಗಾಗಲೇ ಧರಣಿ ಸತ್ಯಾಗ್ರಹ 55 ದಿನಗಳನ್ನು ಪೂರೈಸಿದ್ದು, ಜನರು ತಾಳ್ಮೆಯನ್ನು ಕಳೆದುಕೊಳ್ಳುತ್ತಿದ್ದಾರೆ. ತೀವ್ರ ಸ್ವರೂಪದ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ. ಈ ಕೂಡಲೇ ಸಭೆಯನ್ನು ಕರೆದು ನಮ್ಮ ಬೇಡಿಕೆಗಳನ್ನು ಮನ್ನಿಸಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಲು ಸೂಕ್ತ ಕ್ರಮವನ್ನು ಕೈಗೊಳ್ಳಲು ಒತ್ತಾಯಿಸಲಾಗಿದೆ. ಒಂದು ವೇಳೆ ಬೇಡಿಕೆ ಈಡೇರದಿದ್ದಲ್ಲಿ ಮೇ 25ರ ನಂತರ ಮೊಗೇರ ಸಮಾಜದ ಶಾಲಾ ವಿದ್ಯಾರ್ಥಿಗಳು ಸಾಮೂಹಿಕವಾಗಿ ಶಾಲೆಗಳಿಗೆ ಗೈರು ಹಾಜರಾಗುವದರ ಮೂಲಕ ತಮ್ಮಸೌಲಭ್ಯಕ್ಕಾಗಿ ಪ್ರತಿಭಟನೆ ಮಾಡಲಿದ್ದಾರೆ.
ತೀವ್ರ ಸ್ವರೂಪದ ರಾಸ್ತಾ ರೋಖೋ ಚಳುವಳಿ ಪ್ರಾರಂಭಿಸಲಾಗುವುದು. ಜೈಲ್ ಬರೋ ಚಳುವಳಿಯನ್ನು ಜೂನ್ ಮೊದಲ ವಾರದಲ್ಲಿ ಆಯೋಜಿಸಿ ಸಮಾಜದ ಜನರು ಜೈಲು ಸೇರಲಿದ್ದೇವೆ. ರೈಲ್ ರೋಬೊ ಚಳುವಳಿಯನ್ನು ನಡೆಸಲಾಗುವುದು.ಧರಣಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಲಿದ್ದೇವೆ. ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಮುತ್ತಿಗೆ ಹಾಕಲಿದ್ದೇವೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ. ಮನವಿಯನ್ನು ಉಪವಿಭಾಗಾಧಿಕಾರಿ ಮಮತಾದೇವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮೊಗೇರ ಸಮಾಜದ ಅಧ್ಯಕ್ಷ ಅಣ್ಣಪ್ಪ ಮೊಗೇರ ಸೇರಿ ಮೊಗೇರ, ಸಮಾಜದ ಹಿರಿಯ ಮುಖಂಡರು ಸಮಾಜದ ಜನರು ಇದ್ದರು.