ಶಿರಸಿ: ಕೇಂದ್ರ ಕನ್ನಡ ಸಾಹಿತ್ಯ ಬಳಗ ಹಾಗೂ ವಾಸ್ತವ ವಾರ್ತೆ ಓದುಗರ ಬಳಗದ ಸಂಯುಕ್ತಾಶ್ರಯದಲ್ಲಿ ನೆಮ್ಮದಿ ಆವರಣದ ಕಣಜ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪುಸ್ತಕ ಪರಿಚಯ/ ಅವಲೋಕನ, ಸಾಧಕರಿಗೆ ಅಭಿನಂದನೆ ಮತ್ತು ಕವಿಗೋಷ್ಠಿ ಕಾರ್ಯಕ್ರಮವನ್ನು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ತಾಲೂಕು ಘಟಕದ ಗೌರವಾಧ್ಯಕ್ಷ ಗಣಪತಿ ಭಟ್ಟ ವರ್ಗಾಸರ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ ಕವನ ಎಂಬ ಶಿರೋನಾಮೆಯಲ್ಲಿ ಬರುವ ಬರಹವೆಲ್ಲವೂ ಕಾವ್ಯವಾಗಲಾರದು. ಬರೆದ ಕವನ ನವ್ಯವಾದರೂ ಹಾಡಲು ಬರಬೇಕು. ಬರೆದ ಕವಿಯೇ ಹಾಡುತಿದ್ದರೆ ಅದು ಕೇಳುಗನ ಮನಸಿಗೆ ಹತ್ತಿರವಾಗುತ್ತದೆ ಎಂದು ಹೇಳಿದರು.
ವಾಸ್ತವ ವಾರ್ತೆಯ ಅಧ್ಯಕ್ಷ ಜಗದೀಶ ಭಂಡಾರಿ ಮಾತನಾಡಿ, ಪುಸ್ತಕದ ಓದು ಜ್ಞಾನವೃದ್ಧಿಗೆ ಸಹಾಯಕ. ಬರಹದ ವಿಮರ್ಶೆ ಅಥವಾ ಅವಲೋಕನ ಸಾಹಿತ್ಯ ಮೌಲ್ಯವರ್ಧನೆಗೆ ಕಾರಣವಾಗುವುದರಿಂದ ಬರಹಗಾರರು ಋಣಾತ್ಮಕ ಅಭಿಪ್ರಾಯ ವ್ಯಕ್ತವಾದಲ್ಲಿ ಮುಕ್ತಮನದಿಂದ ಸ್ವೀಕರಿಸಿ ಉತ್ತಮ ಸಾಹಿತ್ಯ ರಚನೆಯತ್ತ ತೊಡಗಿಸಿಕೊಳ್ಳಬೇಕು. ಇಂಥ ಕಾರ್ಯಕ್ರಮಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಸಾಹಿತಿ ಮಹೇಶಕುಮಾರ ಹನಕೆರೆಯವರು ಕೃಷ್ಣ ಪದಕಿಯವರ ‘ತೆರೆದಿದೆ ಮನ’ ಕವನ ಸಂಕಲನದ ಅವಲೋಕನ ಮಾಡುತ್ತಾ, ಬಹುತೇಕ ಕವನಗಳು ಆಧ್ಯಾತ್ಮಿಕ ಸ್ಪರ್ಶದಿಂದ ಕೂಡಿವೆ. ಆತ್ಮವಿಮರ್ಶೆಗೊಳಪಡಿಸುವಂತಿವೆ. ಜನಪದೀಯ ಶೈಲಿಯ ಬರಹ ಕಷ್ಟಕರವಾದರೂ ಪದಕಿಯವರು ಕೆಲ ಕವನಗಳನ್ನು ಅತೀ ಸುಂದರವಾಗಿ ರಚಿಸಿದ್ದಾರೆ. ಎಲ್ಲಾ ಕವನಗಳು ಅತ್ಯಂತ ಶ್ರೇಷ್ಠ ಮಟ್ಟದ ಪದ ರಚನೆಯನ್ನು ಹೊಂದಿರುವುದರಿಂದಲೇ ಈ ಕೃತಿಗೆ ಅತ್ಯುತ್ತಮ ಕವನ ಸಂಕಲನ ಪ್ರಶಸ್ತಿ ಲಭ್ಯವಾಗಿದೆ ಎಂದರು.
ಕಾವ್ಯಶ್ರೀ ಪ್ರಶಸ್ತಿ ವಿಜೇತ ಕೃಷ್ಣ ಪದಕಿ, ಸಾವಿತ್ರಿ ಶಾಸ್ತ್ರಿ ಮತ್ತು ಕಸ್ತೂರಿ ಕೌಸ್ತುಭ ಪ್ರಶಸ್ತಿ ವಿಜೇತ ಮಹೇಶಕುಮಾರ ಹನಕೆರೆ ಹಾಗೂ ಪರಮ್ ಕಾಳೇಬೈಲ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸಾವಿತ್ರಿ ಶಾಸ್ತ್ರಿ, ಮಂಗಳಗೌರಿ, ಎಸ್ ಎಮ್ ಹೆಗಡೆ, ಯಶಸ್ವಿನಿ ಶ್ರೀಧರಮೂರ್ತಿ, ಜಲಜಾಕ್ಷಿ ಶೆಟ್ಟಿ, ಲಲಿತಾ ಭಟ್, ಮಂಜುಳಾ ಅಮರನಾಥ, ಉಮೇಶ ದೈವಜ್ಞ, ರಮೇಶ ಹೆಗಡೆ ಕೆರೆಕೋಣ, ಶೋಭಾ ಭಟ್, ವಿಮಲಾ ಭಾಗ್ವತ, ಪಿ.ಎನ್, ಜೋಗಳೆಕರ, ಭವ್ಯ ಹಳೆಯೂರು, ಮಹೇಶಕುಮಾರ ಸೇರಿದಂತೆ ಹದಿನೈದಕ್ಕೂ ಹೆಚ್ಚು ಕವಿಗಳು ಕವನ ವಾಚಿಸಿದರು. ಕೃಷ್ಣ ಪದಕಿಯವರು ಸ್ವಾಗತಿಸಿದರು. ಕಥೆಗಾರ ಡಿ.ಎಸ್ ನಾಯ್ಕ ಪ್ರಸ್ತಾವಿಸಿ, ಎಸ್.ಎಮ್.ಹೆಗಡೆ ಹಾಗೂ ಜಲಜಾಕ್ಷಿ ಶೆಟ್ಟಿ ಪ್ರಾರ್ಥನೆ ಮಾಡಿದರು. ರಾಜು ಉಗ್ರಾಣಕರ ಸಂಪೂರ್ಣ ಕಾರ್ಯಕ್ರಮವನ್ನು ಸುಂದರವಾಗಿ ನಿರೂಪಿಸಿದರು. ಕವಿತಾ ವಾಚನಗೈದವರಿಗೆ ಪ್ರಮಾಣಪತ್ರ ಮತ್ತು ಪುಸ್ತಕ ಬಹುಮಾನ ನೀಡಿ ಗೌರವಿಸಲಾಯಿತು.