ಶಿರಸಿ: ಸಾಮಾಜಿಕ ಸೇವೆಗೆ ನಿಧಿ ಸಂಗ್ರಹ ಉದ್ದೇಶದಿಂದ ರೋಟರಿ ಕ್ಲಬ್ ವತಿಯಿಂದ ಮೇ.15ರಂದು ಕಾರವಾರದಲ್ಲಿ ನಡೆದ 5 ಕಿ.ಮೀ.ಮುಕ್ತ ವಾಕಥಾನ್ ಸ್ಪರ್ಧೆಯಲ್ಲಿ ಶಿರಸಿ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ.
ಜೊತಗೆ ಬೆಂಗಳೂರಿನಲ್ಲಿ ನಡೆದ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ವರ್ಲ್ಡ್ 10ಕೆ ಮ್ಯಾರಥಾನ್ ಸ್ಪರ್ಧೆಯಲ್ಲಿ ಶಿರಸಿಯ ಪ್ರಶಾಂತ ಓಣಿಕೇರಿ ಹಾಗೂ ಮದನ್ ಭಟ್ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ.
ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಮಕ್ಕಳ ಅಭಿನಂದನಾ ಕಾರ್ಯಕ್ರಮದಲ್ಲಿ ಶಿರಸಿಯ ಶಾಸಕರ ಮಾದರಿ ಶಾಲೆಯ ಅಶೋಕ್ ಭಜಂತ್ರಿ ಮಾತನಾಡಿ,ಕೊರೋನಾ ಕಾರಣದಿಂದ ಎರಡು ವರ್ಷಗಳ ಕಾಲ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿತ್ತು. ಈಗ ಮತ್ತೆ ಪ್ರಾರಂಭವಾಗಿದ್ದು ಮಕ್ಕಳನ್ನು ಪುನಃ ಕ್ರೀಡಾಂಗಣದತ್ತ ಕರೆತರಬೇಕಿದೆ.ಈಗಿನ ಮಕ್ಕಳು ಮೊಬೈಲ್ ಮೋಹಕ್ಕೆ ಬಿದ್ದಿದ್ದು ದೈಹಿಕ ಚಟುವಟಿಕೆಗಳಿಲ್ಲದೇ ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಳ್ಳಲು ಅಸಮರ್ಥರಾಗಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಶಿರಸಿಯಿಂದ ಇನ್ನೂ ಹೆಚ್ಚಿನ ಮಕ್ಕಳು ತರಬೇತಿ ಪಡೆದು ರಾಜ್ಯ,ದೇಶ,ವಿದೇಶ ಮಟ್ಟದಲ್ಲಿ ವಿಜೇತರಾಗಿ ಕೀರ್ತಿ ಪಡೆಯಲಿ ಎಂದು ಆಶಿಸಿದರು.
ಅಂತರಾಷ್ಟ್ರೀಯ ಕ್ರೀಡಾಪಟು ಪ್ರಭಾಕರ ಜವಳೇಕರ್ ಮಾತನಾಡಿ, ಕನಸು ದೊಡ್ಡದಾಗಿ ಕಾಣುತ್ತಾ ಅದಕ್ಕೆ ತಕ್ಕನಾದ ಪರಿಶ್ರಮ ಪಡಬೇಕು. ಆಗ ಮಾತ್ರ ಯಶಸ್ಸು ಸಾಧ್ಯ.ಕ್ರೀಡೆಯಲ್ಲಿ ಒಂದೊಂದೇ ಮೆಟ್ಟಿಲನೇರುತ್ತಾ ಅಂತರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳು ಮಿಂಚುವಂತಾಗಲಿ. ಹುಟ್ಟೂರಿನ ಕೀರ್ತಿಯನ್ನು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಹಾರೈಸಿದರು.
ಮಕ್ಕಳಿಂದ ಮೊಬೈಲ್ ದೂರವಿರಿಸಿ ದಿನದ ಎರಡು ತಾಸು ಕ್ರೀಡಾಂಗಣಕ್ಕೆ ಮಕ್ಕಳನ್ನು ಕಳಿಸಿ.ದೈಹಿಕವಾಗಿ, ಮಾನಸಿಕವಾಗಿ ಅವರು ಸದೃಢರಾಗುತ್ತಾರೆ. ಮಕ್ಕಳ ಜೀವನ ಬರೀ ಓದಿಗಷ್ಟೇ ಅಲ್ಲದೇ ಅವರಿಷ್ಟದ ಇತರ ಪಠ್ಯೆತರ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ ಎಂದು ತರಬೇತುದಾರ ಅಣ್ಣಪ್ಪ ನಾಯ್ಕ್ ಪಾಲಕರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಇನ್ನಿತರ ಗಣ್ಯರು, ಕ್ರೀಡಾ ಇಲಾಖಾ ಅಧಿಕಾರಿಗಳು ಮಕ್ಕಳಿಗೆ ಅಭಿನಂದನೆಯನ್ನು ಸಲ್ಲಿಸಿದರು. .