ಸಿದ್ದಾಪುರ: ತಾಲೂಕಿನ ಬಿದ್ರಕಾನ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ ಹಾಗೂ ಪಿಎಸಿಸಿ,ಎಂಎಸ್ಸಿ ಕಟ್ಟಡಗಳ ಉದ್ಘಾಟನೆಯನ್ನು ಭಾನುವಾರ ಕೆಡಿಸಿಸಿ ಬ್ಯಾಂಕ ಅಧ್ಯಕ್ಷ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ನೇರವೇರಿಸಿದರು.
ನಂತರ ಮಾತನಾಡಿದ ಅವರು ರಾಜ್ಯದಲ್ಲಿಯೇ ಉತ್ತರ ಕನ್ನಡ ಜಿಲ್ಲೆ ಸಹಕಾರಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವುದಲ್ಲದೇ ಸಹಕಾರಿ ಕ್ಷೇತ್ರದ ಹೆಬ್ಬಾಗಿಲು ಎಂದೇ ಪ್ರಸಿದ್ಧಿಯಾಗಿದೆ. ರಾಜ್ಯದಲ್ಲಿ 8-9 ಜಿಲ್ಲೆಯಲ್ಲಿ ಮಾತ್ರ ಸಹಕಾರಿ ಕ್ಷೇತ್ರ ಜೀವಂತವಾಗಿದೆ ಎಂದು ಹೇಳಿದರು.
ಕೃಷಿಕರು, ಕೃಷಿ ಕಾರ್ಮಿಕರು ಹಾಗೂ ಠೇವಣಿದಾರರ ವಿಶ್ವಾಸವನ್ನು ಕೆಡಿಸಿಸಿ ಬ್ಯಾಂಕ್ ಹೊಂದಿದೆ. ಲಕ್ಷಾಂತರ ಕೃಷಿಕರ, ರೈತರ, ವಿಶ್ವಾಸವನ್ನು ಪಡೆಯುವುದರೊಂದಿಗೆ ಪ್ರಾಥಮಿಕ ಸಹಕಾರಿ ಸಂಘಗಳ ಮೂಲಕವೂ ಕೆಡಿಸಿಸಿ ಬ್ಯಾಂಕ್ ಹೆಚ್ಚು ಅಭಿವೃದ್ಧಿ ಹೊಂದಿದೆ. ಕೆಡಿಸಿಸಿ ಬ್ಯಾಂಕ್ ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ಎಲ್ಲ ರೈತರ, ಕೃಷಿಕರ, ಕೃಷಿ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸುತ್ತಿದೆ. 760ಕೋಟಿ ರೂಗಳಷ್ಟು ಬೆಳೆಸಾಲ ನೀಡಿ 755ಕೋಟಿ ಬೆಳೆಸಾಲವನ್ನು ವಸೂಲಮಾಡಿದೆ.
ಬಿದ್ರಕಾನ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ಉತ್ತಮವಾಗಿ ಕಾರ್ಯನಿರ್ವಹಿಸುತ್ತ ಸದಸ್ಯರನ್ನು ವಿಶ್ವಾಸ ಪಡೆಯುವುದರೊಂದಿಗೆ ಅವರ ಸಮಸ್ಯೆಗೆ ಸ್ಪಂದಿಸುತ್ತಿರುವುದರಿಂದ ಎತ್ತರಕ್ಕೆ ಬೆಳೆದಿದೆ ಎಂದು ಹೇಳಿದರು.
ಸಹಕಾರಿ ರತ್ನ ಪುರಸ್ಕೃತ ಆರ್.ಎಂ.ಹೆಗಡೆ ಬಾಳೇಸರ ಅವರು ಸಹಕಾರಿ ಕ್ಷೇತ್ರದಲ್ಲಿ ಹೆಚ್ಚು ಜ್ಞಾನವನ್ನು ಪಡೆದುಕೊಂಡಿದ್ದುಇಂಥವರು ಸಹಕಾರಿ ಕ್ಷೇತ್ರಕ್ಕೆ ಬರಬೇಕೆಂದರು.
ಸಭಾಭವನ ಉದ್ಘಾಟಿಸಿ ಮಾತನಾಡಿದ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಸಹಕಾರಿ ಕ್ಷೇತ್ರ ಜನರ ಸೇವೆ ಮಾಡುವುದಕ್ಕೆ ಉತ್ತಮವಾದ ಕ್ಷೇತ್ರವಾಗಿದೆ. ಸರ್ಕಾರ ಮಾಡಬಹುದಾದ ಕೆಲಸವನ್ನು ಸಹಕಾರಿ ಕ್ಷೇತ್ರ ಮಾಡುತ್ತಿದೆ. ಸಹಕಾರಿ ಕ್ಷೇತ್ರದಲ್ಲಿ ಪ್ರಾಮಾಣಿಕತೆ, ಬದ್ದತೆ,ನಿಷ್ಠೆ ಇರುವ ಯುವಕರು ಬರಬೇಕು. ಸಹಕಾರಿ ಕ್ಷೇತ್ರದಲ್ಲಿ ಯುವಕರ ಕೊರತೆ ಇದೆ. ಯುವಕರು ಸಹಕಾರಿ ತತ್ವವನ್ನು ಒಪ್ಪಿ ಪ್ರಾಮಾಣಿಕತೆಯಿಂದ ಬರಬೇಕು ಎಂದು ಹೇಳಿದರು.
ಸಂಘದ ಅಧ್ಯಕ್ಷ ಪರಮೇಶ್ವರ ಸುಬ್ರಾಯ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಕೆಡಿಸಿಸಿ ಬ್ಯಾಂಕ ವ್ಯವಸ್ಥಾಪಕ ಆರ್.ಜಿ.ಭಾಗವತ್, ನಿರ್ದೇಶಕ ರಾಘವೇಂದ್ರ ಶಾಸ್ತ್ರಿ ಬಿಳಗಿ, ಸಂಘದ ಮುಖ್ಯಕಾರ್ಯನಿರ್ವಾಹಕ ಪ್ರಸನ್ನ ಹೆಗಡೆ ಶೀಬಳಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಹಕಾರಿ ರತ್ನ ಪುರಸ್ಕೃತ ಆರ್.ಎಂ.ಹೆಗಡೆ ಬಾಳೇಸರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಲಕ್ಷ್ಮೀಶ ಹೆಗಡೆ ಗೋಳಿಕೈ ಸ್ವಾಗತಿಸಿದರು ವೇಣು ಹೆಗಡೆ ಹೆಮಟೆಮನೆ, ಸುಬ್ರಹ್ಮಣ್ಯ ಭಟ್ಟ ನಿರ್ವಹಿಸಿದರು. ಪ್ರಕಾಶ ಹೆಗಡೆ ವಂದಿಸಿದರು.