ಯಲ್ಲಾಪುರ: ತಾಲೂಕಿನ ಉಚಗೇರಿ ಮತ್ತು ಚಿಪಗೇರಿ ಮಧ್ಯದ ಭಾಗದಲ್ಲಿ ರಾಜಸ್ಥಾನ ನೋಂದಣಿ ಸಂಖ್ಯೆಯಿರುವ ಮಹಿಂದ್ರಾ ಜೀಪ್ನಲ್ಲಿ ಬಂದ ಜನರನ್ನು ಊರಿನ ಗ್ರಾಮಸ್ಥರು ಸಂಶಯಪಟ್ಟು ಮರಳಿ ಕಳಿಸಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಜೀಪ್ನಲ್ಲಿ ಮಧ್ಯಾಹ್ನ ಆಗಮಿಸಿದ್ದ ಐದು ಜನರ ತಂಡ ಸುಮಾರು 50ಕ್ಕೂ ಹೆಚ್ಚು ಸ್ಕೂಲ್ ಬ್ಯಾಗ್ಗಳನ್ನು ತಂದಿದ್ದರು ಎನ್ನಲಾಗಿದೆ. ಇತ್ತೀಚೆಗೆ ಮತಾಂತರಗೊಂಡ ಸ್ಥಳೀಯ ವ್ಯಕ್ತಿಯೊಬ್ಬನ ಮನೆಯಲ್ಲಿ ವನಕೆಮನೆ, ಹುಲ್ಲೋರಮನೆ, ಮಜ್ಜಿಗೆ ಹಳ್ಳ ಹಾಗೂ ಪ್ಲಾಟ್ ಈ ಗ್ರಾಮದ ಪರಿಶಿಷ್ಟ ಪಂಗಡದ 35ಕ್ಕೂ ಹೆಚ್ಚು ಸಿದ್ದಿ ಮಕ್ಕಳನ್ನು ಸೇರಿಸಲಾಗಿತ್ತು. ಈ ಮಕ್ಕಳಿಗೆ ಸ್ಕೂಲ್ ಬ್ಯಾಗ್ ನೀಡಲು ರಾಜಸ್ಥಾನ್ ನೋಂದಣಿ ಇರುವ ಮಹಿಂದ್ರ ಬೊಲೆರೋ ವಾಹನದಲ್ಲಿ ಐದು ಜನ ಗ್ರಾಮಕ್ಕೆ ಆಗಮಿಸಿದ್ದರು. ಇವರನ್ನು ರಸ್ತೆ ಮಧ್ಯದಲ್ಲಿ ತಡೆದ ಗ್ರಾಮಸ್ಥರು, ತಾವು ಯಾವ ಸಂಘ- ಸಂಸ್ಥೆಗೆ ಸೇರಿದವರು ಮತ್ತು ಇಲ್ಲಿ ಏಕೆ ಬಂದಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸಮರ್ಪಕವಾಗಿ ಉತ್ತರ ನೀಡದೆ ಕೆಲ ವರ್ಷದ ಹಿಂದೆ ಮತಾಂತರಗೊಂಡ ವ್ಯಕ್ತಿಯ ಹೆಸರನ್ನು ಹೇಳಿ, ಆತ ಮಕ್ಕಳನ್ನು ಸೇರಿಸಿದ್ದಾನೆ. ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಿಸಲು ಹೊರಟಿದ್ದೇವೆ ಎಂದು ಹೇಳಿದ್ದಾರೆ.
ಈ ಭಾಗದಲ್ಲಿ ಕೆಲವು ವರ್ಷಗಳಿಂದ ಪರಿಶಿಷ್ಟ ಪಂಗಡದ ಜನರನ್ನು ಆಮಿಷವೊಡ್ಡಿ ಮತಾಂತರ ಮಾಡುತ್ತಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಸ್ವಯಂ ಸಿದ್ದಿ ಪ್ರಮುಖರು ಇದನ್ನು ವಿರೋಧಿಸಿ ತಡೆದಿದ್ದರು. ಹೀಗಾಗಿ ಮತ ಪರಿವರ್ತನೆಯಾದ ವ್ಯಕ್ತಿಯ ಮನೆಗೆ ತೆರಳುತ್ತಿರುವ ಜನರ ಬಗ್ಗೆ ಗ್ರಾಮಸ್ತರಿಗೆ ಸಂಶಯ ಇನ್ನಷ್ಟು ಗಟ್ಟಿಯಾಗಿ ಅವರನ್ನು ಮರಳಿ ಹೋಗುವಂತೆ ಸೂಚಿಸಲಾಗಿದ್ದು, ವಾಹನವನ್ನು ಹಿಂದೆ ತೆಗೆದುಕೊಂಡ ಅಪರಿಚಿತರು ಯಾವುದೇ ವಾದ ನಡೆಸದೆ ಮರಳಿ ತೆರಳಿದ್ದಾರೆ.
ಈ ಭಾಗದಲ್ಲಿ ಆಮಿಷ ಒಡ್ಡಿ ಮತಾಂತರಕ್ಕೆ ಯತ್ನ ಮಾಡಲಾಗುತ್ತಿದೆ. ಇದರಿಂದಾಗಿ ಸ್ಥಳೀಯರಲ್ಲಿ ಸಾಮರಸ್ಯ ಸೌಹಾರ್ದತೆಯ ಹಾಳಾಗಲಿದೆ. ಮತಾಂತರ ಮಾಡುವವರನ್ನು ಮತ್ತು ಅದಕ್ಕೆ ಪ್ರಚೋದನೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಪ್ರಮುಖರಾದ ಸುರೇಶ ಸಿದ್ದಿ, ರಘುನಾಥ ಎಸ್, ಗಣಪತಿ ಜೆ, ಸೋಮನಾಥ ಉಚಗೇರಿ ಮುಂತಾದವರು ಜಿಲ್ಲೆಯ ಮತ್ತು ತಾಲೂಕಿನ ಹಿರಿಯ ಅಧಿಕಾರಿಗಳ ಮನವಿ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.