ಸಿದ್ದಾಪುರ: ಜನಜೀವನದ ನಡುವೆ ನೆಮ್ಮದಿಯ ವಾತಾವರಣ ನಿರ್ಮಿಸಲು ಲಯನ್ಸ ಸಂಘಟನೆ ಶ್ರಮಿಸುತ್ತಿದೆ. ಊರು ಸಮೃದ್ಧವಾಗಲು, ಸುಸಂಸ್ಕೃತವಾಗಲು ಸಂಘಟಕರು, ಸಂಘಟನೆಗಳು ಅಗತ್ಯ. ರಾಜಕೀಯ ವ್ಯಕ್ತಿಗಳಿಂದ ಎಲ್ಲವನ್ನೂ ನಿಭಾಯಿಸಲು ಸಾಧ್ಯವಾಗುವುದಿಲ್ಲ. ರಚನಾತ್ಮಕ ದೃಷ್ಟಿಕೋನದ ಜನತೆ ಸಮಾಜದಲ್ಲಿ ಹೆಚ್ಚಾಗಿ ಉತ್ತಮ ಸಂಸ್ಕಾರ ನಿರ್ಮಾಣವಾಗಲಿ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಸ್ಥಳೀಯ ಲಯನ್ಸ ಸಂಸ್ಥೆಯ ಸುವರ್ಣ ಮಹೋತ್ಸವದ ಸಮಾರೋಪದಲ್ಲಿ ಸಾಧಕರನ್ನು ಸನ್ಮಾನಿಸಿ ಅವರು ಶನಿವಾರ ಮಾತನಾಡಿ ಕಳೆದ ಐದು ದಶಕಗಳ ಹಿಂದೆ ಸಿದ್ದಾಪುರದಲ್ಲಿ ಲಯನ್ಸ ಸಂಘಟನೆಯನ್ನು ಹುಟ್ಟುಹಾಕುವ ಮೂಲಕ ದಿ. ಡಾ.ಎಂ.ಪಿ.ಶೆಟ್ಟಿ ಅವರು ಸ್ತುತ್ಯಾರ್ಹ ಕಾರ್ಯ ಮಾಡಿದ್ದಾರೆ. ಅವರ ಹೆಸರಿನಲ್ಲಿ ಸುವರ್ಣಮಹೋತ್ಸವ ಭವನ ನಿರ್ಮಿಸುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಹಾಗೂ ಲಯನ್ಸ ಹಿಂದಿನ ಅಧ್ಯಕ್ಷರುಗಳ ಫೋಟೋಗಳನ್ನು ಅನಾವರಣ ಮಾಡಿ ಮಾತನಾಡಿದ ಖ್ಯಾತ ಚಲನಚಿತ್ರ ನಟ ಡಾ.ಶ್ರೀನಾಥ ಸಿನಿಮಾ ನಟರಾದ ನಾವು ವಿವಿಧ ವ್ಯಕ್ತಿಗಳು ಹಾಗೂ ಸಂಘಟನೆಗಳ ನೆರವಿನಲ್ಲಿ ಬದುಕನ್ನು ರೂಪಿಸಿಕೊಂಡಿರುತ್ತೇವೆ. ನಮಗೆ ಹೆಸರು ತಂದುಕೊಡುವಲ್ಲಿ ಅಭಿಮಾನಿಗಳ ಪಾತ್ರವೇ ಹಿರಿದಾಗಿರುತ್ತದೆ. ವಿಧಾನಸಭಾ ಅಧ್ಯಕ್ಷರಾಗಿ ಶಿಕ್ಷಕರಂತೆ ಪಾಠ ಮಾಡುತ್ತಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರ ವ್ಯಕ್ತಿತ್ವ ತುಂಬಾ ಹಿರಿದಾದುದು ಎಂದು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ಡಾ.ರವಿ ಹೆಗಡೆ ಹೂವಿನಮನೆ, ರಾಘವೇಂದ್ರ ಭಟ್ಟ ಕಲ್ಲಾಳ, ನಾಗರಾಜ ದೋಶೆಟ್ಟಿ, ವೀಣಾ ಶೇಟ್, ಪ್ರಶಾಂತ ಶೇಟ್, ಸತೀಶ ಗೌಡರ್ ಇತರರಿದ್ದರು.
ಸನ್ಮಾನ: ಈ ಸಂದರ್ಭದಲ್ಲಿ ಸಹಕಾರ ರತ್ನ ಪುರಸ್ಕೃತ ಆರ್.ಎಂ.ಹೆಗಡೆ ಬಾಳೇಸರ, ಕುವೆಂಪು ವಿವಿಯ ಉಪಕುಲಪತಿ ಡಾ.ಬಿ.ಪಿ.ವೀರಭದ್ರಪ್ಪ, ಭಾರತೀಯ ಸೇನೆಯ ನಿವೃತ್ತ ಕ್ಯಾಪ್ಟನ್ ರಾಜೇಶ ನಾಯಕ, ಧರ್ಮಶ್ರೀ ಫೌಂಡೇಶನ್ ಅಧ್ಯಕ್ಷ ರಾಮಮೋಹನ ಹೆಗಡೆ, ಹಿರಿಯ ವೈದ್ಯ ಡಾ.ಎಸ್.ಆರ್.ಹೆಗಡೆ ಹಾರ್ಸಿಮನೆ, ಬ್ಲೂಮ ವ್ಯಾಲ್ಯುಕಾರ್ಪೋರೇಷನ್ ಸಹ ಸಂಸ್ಥಾಪಕಿ ಸಂಪೂರ್ಣಾ ಹೆಗಡೆ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಜಿ.ಜಿ.ಹೆಗಡೆ ಬಾಳಗೋಡ ಹಾಗೂ ತಮ್ಮಣ್ಣ ಬೀಗಾರ ಅವರುಗಳಿಗೆ ಸಾಧಕ ಗೌರವ ಸನ್ಮಾನ ನೀಡಲಾಯಿತು.
ಅರ್ಚನಾ, ಲಯನ್ಸ ಅಧ್ಯಕ್ಷೆ ಶ್ಯಾಮಲಾ ಹೆಗಡೆ, ಲ.ಸಿ.ಎಸ್.ಗೌಡರ್ ನಿರ್ವಹಿಸಿದರು.