ಶಿರಸಿ: ತಾಲೂಕಿನ ಕ್ಷೇತ್ರ ಸ್ವಾದಿ ಜೈನ್ ಮಠದ ಮುಂಭಾಗದಲ್ಲಿರುವ ಶ್ರೀ ನಂದಿಕೇಶ್ವರ ದೇವರ ನೂತನ ದೇವಾಲಯವನ್ನು ಮಳಲಗಾಂವ್ ಗ್ರಾಮದ ನಂದಿಕೇಶ್ವರ ಮಠದ ಕುಟುಂಬದವರು ದಾನಿಗಳ ಸಹಯೋಗದೊಂದಿಗೆ ನೂತನ ದೇವಾಲಯವನ್ನು ನಿರ್ಮಿಸಲಾಗಿದೆ. ಈ ದೇವಾಲಯದಲ್ಲಿ ಮೇ 16ರಂದು ಪುನರ್ ಪ್ರತಿಷ್ಠಾಪನೆ ಮಾಡಲಾಗುವ ನೂತನ ನಂದಿ ಹಾಗೂ ಈಶ್ವರನ ವಿಗ್ರಹವನ್ನು ನೀರಿನಲ್ಲಿ 41 ದಿನಗಳ ಕಾಲ ಇಡಲಾಗಿದೆ.
ವಿಗ್ರಹದ ಮರು ಪ್ರತಿಷ್ಠಾಪನೆ ಹಾಗೂ ಕಳಸಾರೋಹಣದ ಹಿನ್ನಲೆಯಲ್ಲಿ ಮಳಲಗಾಂವ್ ಗ್ರಾಮಮದಲ್ಲಿ ನೂತನ ನಂದಿಕೇಶ್ವರ ವಿಗ್ರಹದ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಗೆ ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿದರು. ಸಾಗರದ ಮಹಿಳೆಯರ ಡೊಳ್ಳು ಕುಣಿತ ಹಾಗೂ ಮಂಗಲವಾದ್ಯ ಮೆರವಣಿಗೆಗೆ ಮೆರಗು ನೀಡಿತು. ಮೆರವಣಿಗೆಯು ಮಳಲಗಾಂವದಿಂದ ಆರಂಭಗೊಂಡು ಬಿಸಿಲಕೊಪ್ಪ ಎಕ್ಕಂಬಿ ಮೂಲಕ ಶಿರಸಿಯ ಯಲ್ಲಾಪುರ ನಾಕಾಕ್ಕೆ ಆಗಮಿಸಿತು. ಇಲ್ಲಿಂದ ಮೆರವಣಿಗೆಯು ವಾಹನದ ಮುಖಾಂತರ ಸೋಂದಾಕ್ಕೆ ತೆರಳಿತು.
ಮೂರು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಡಾ.ವಿರೇಂದ್ರ ಹೆಗ್ಗಡೆ, ಸೋಂದಾ ಸ್ವರ್ಣವಲ್ಲಿ ಮಠದ ಶ್ರೀಗಂಗಾಧರೆಂದ್ರ ಸರಸ್ವತಿ ಸ್ವಾಮಿಗಳು, ಸ್ವಾದಿ ಜೈನಮಠದ ಸ್ವಸ್ತಿಶ್ರೀ ಬಟ್ಟಾಕಲಂಕ ಬಟ್ಟಾರಕ ಸ್ವಾಮೀಜಿ ಧರ್ಮ ಸಭೆಯಲ್ಲಿ ಪಾಲ್ಗೊಳ್ಳುವರು. ಸಚಿವ ಶಿವರಾಮ್ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸುವರು