ಶಿರಸಿ: ಅಡಿಕೆಯನ್ನೊಂದೇ ನಂಬದೇ ಬೆಟ್ಟಗಳಲ್ಲಿ ಹಣ್ಣಿನ ಬೆಳೆಗಳನ್ನೂ ಬೆಳೆಸುವಂತೆ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ರೈತರಿಗೆ ಸಲಹೆ ಮಾಡಿದರು.
ಶನಿವಾರ ಅವರು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ನಡೆದ ನೃಸಿಂಹ ಜಯಂತಿ ಹಾಗೂ ಕೃಷಿ ಪ್ರತಿಷ್ಠಾನದ ಕೃಷಿ ಜಯಂತಿಯಲ್ಲಿ ಆಶೀರ್ವಚನ ನೀಡಿ, ಅಡಿಕೆಗೆ ಸದಾ ತೂಗು ಕತ್ತಿ ಇದೆ. ಕ್ಯಾನ್ಸರ್ ಕಾರಕ ಎಂಬ ಆಪಾದನೆ ಕೂಡ ಇದೆ. ನ್ಯಾಯಾಲಯದಲ್ಲೂ ಅಡಿಕೆ ಕುರಿತು ವಾದ ಇದೆ. ರೈತರು ಈ ಬೆಳೆಯನ್ನು ಮಾತ್ರ ನಂಬಿಕೊಳ್ಳದೇ ಬಹು ಬೆಳೆ ಬೆಳೆಯಬೇಕು ಎಂದು ತಿಳಿಸಿದರು.
ಮಲೆನಾಡಿನ ಕೃಷಿಕರು ಹಣ್ಣಿನ ಕೃಷಿಗೆ ಆದ್ಯತೆ ಕೊಡಬೇಕು. ಕೃಷಿ ಭೂಮಿಗಿಂತ ಕೃಷಿಯೇತರ ಬೆಟ್ಟ ಭೂಮಿಯಲ್ಲಿ ಬೆಳೆಸಿ ಗಳಿಕೆ ಮಾಡಬೇಕು. ಮಲೆನಾಡಿನ ರೈತರು ಸಮೃದ್ಧರಾಗಬೇಕು ಎಂದೂ ಶ್ರೀಗಳು ಆಶಿಸಿದರು.
ಭಕ್ತ ವಾತ್ಸಲ್ಯ ಭಗವಂತ: ಒಬ್ಬ ಹುಡುಗನ ರಕ್ಷಣೆಗೆ ಅವತಾರ ಮಾಡಿದ ಭಗವಂತ. ಭಕ್ತ ವಾತ್ಸಲ್ಯದ ಪರಾಕಾಷ್ಠೆ ಇದು ಎಂದ ಶ್ರೀಗಳು, ಭಗವಂತನ ಸ್ಮರಣೆ ಸದಾ ಮಾಡಬೇಕು ಎಂದೂ ಸೂಚಿಸಿದರು.ದೇವರನ್ನು ದ್ವೇಷಿಸುವ ವ್ಯಕ್ತಿಯ ಮಗನ ರಕ್ಷಣೆಗೆ ಲಕ್ಷ್ಮೀ ನೃಸಿಂಹ ಅವತಾರ ಮಾಡಿದ. ಒಬ್ಬ ಹುಡುಗನ ರಕ್ಷಣೆಗೋಸ್ಕರ ಅದ್ಭುತವಾಗಿ ಭಗವಂತನು ಅವತಾರ ಮಾಡಿದ ದಿನ ಎಂದೂ ವಿವರಿಸಿದರು.
ಭಕ್ತಿಯಲ್ಲಿ ತಾರತಮ್ಯ ಮಾಡಿದಂತೆ ಭಕ್ತ ವಾತ್ಸಲ್ಯದಲ್ಲೂ ಭಗವಂತನ ತಾರತಮ್ಯ ಇರುತ್ತದೆ. ಇದಕ್ಕೆ ಭಕ್ತನ ಭಕ್ತಿಯೂ ಕಾರಣವಾಗುತ್ತದೆ.
ಬ್ರಹ್ಮನ ಬಳಿ ವರ ಪಡೆಯುವಾಗ ಹಿರಣ್ಯಕಶಪು ಸಾವು ಬರಲು ಎಷ್ಟೊಂದು ನಿರ್ಬಂಧ ಹಾಕಿದ್ದ.ಎಷ್ಟೊಂದು ನಿರ್ಬಂಧಿಸಿದದ್ದರೂ ಅಷ್ಟೊಂದು ನಿರ್ಬಂಧವನ್ನೂ ದಾಟಿ ಭಗವಂತ ಅವತರಿಸಿದ್ದು ವಿಶೇಷ. ಎಲ್ಲ ದಾಟಿ ಭಗವಂತ ಹುಡುಗನ ರಕ್ಷಣೆಗಾಗಿ ಎದ್ದು ಬಂದ ಭಗವಂತ ಎಂದು ವಿವರಿಸಿದ ಶ್ರೀಗಳು, ಪ್ರಹ್ಲಾದನ ಅನನ್ಯ ಭಕ್ತಿ ಕಾರಣ. ಸಂಕಟ ಬಂದಾಗ ವೆಂಕಟರಮಣ ತಪ್ಪಲ್ಲ. ಆದರೆ ಅದು ಸಾಲೋದಿಲ್ಲ. ದೇವರ ಅನುಗ್ರಹಕ್ಕೆ ನಿರಂತರ ಸ್ಮರಣೆ ಮಾಡಬೇಕು ಎಂದೂ ಹೇಳಿದರು.
ಟಿಎಸ್ಎಸ್ ನಿರ್ದೇಶಕ ಶಶಾಂಕ ಶಾಂತಾರಾಮ ಹೆಗಡೆ ಶೀಗೇಹಳ್ಳಿ ಮಾತನಾಡಿ, ಕೃಷಿಕರನ್ನು ಗುರುತಿಸುವದು ಕಡಿಮೆ. ಅಂಥ ಕಾರ್ಯ ಮಠದಿಂದ ಆಗುತ್ತಿದೆ. ಇದು ಬಹು ದೊಡ್ಡ ಕಾರ್ಯ ಎಂದ ಅವರು, ಬಹು ಬೆಳೆ ಬೆಳೆಯಬೇಕು ಎಂದು ಶ್ರೀಗಳೂ ಹೇಳಿದಾರೆ. ಕೃಷಿ ಜಯಂತಿಗೆ ನಾವೂ ನೆನಪು ಮಾಡಿಕೊಳ್ಳಬೇಕು ಎಂದರು.
ಅಡಿಕೆಗೆ ಇದ್ದ ಜಿಎಸ್ಟಿ 1: 5ರಿಂದ 18 ಶೇ. ಜಿಎಸ್ಟಿ ಪ್ರಸ್ತಾಪ ಇದ್ದು, ಸಿಎಂ ಭೇಟಿ ಮಾಡಿ ಮನವಿಕೊಡಲು ಮುಂದಾಗಿದ್ದೇವೆ. ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ ಎಂಬುದಕ್ಕೂ ನ್ಯಾಯಾಲಯಕ್ಕೆ ಕಾರ್ಯಪಡೆ ಜೊತೆ ಸೇರಿ ಅಡಿಕೆ ಮಹಾ ಮಂಡಳಿ ನೀಡಬೇಕು ಎಂದರು.
ಮಠದ ವ್ಯವಸ್ಥಾಪಕ ಆಸ್.ಎನ್.ಗಾಂವಕರ್ ಫಲ ಸಮರ್ಪಿಸಿದರು.
ಎಂ.ಸಿ.ಹೆಗಡೆ, ಮಾತೃ ಮಂಡಳಿ ಅಧ್ಯಕ್ಷೆ ಗೀತಾ ಶೀಗೆಮನೆ, ಆರ್.ಎನ್. ಹೆಗಡೆ ಉಳ್ಳಿಕೊಪ್ಪ ಸ್ವಾಗತಿಸಿದರು. ಸುರೇಶ ಹಕ್ಕಿಮನೆ ನಿರ್ವಹಿಸಿದರು. ಎನ್.ಬಿ.ಮತ್ತೀಹಳ್ಳಿ ವಂದಿಸಿದರು.
ಮುಂಜಾನೆ ವಿವಿಧ ಕೃಷಿ ಗೋಷ್ಠಿಗಳು ನಡೆದವು. ಕಾಲೇಜು ವಿದ್ಯಾರ್ಥಿ, ಮಾಧ್ಯಮಿಕ ಶಾಲಾ ರಸ ಪ್ರಶ್ನೆ ವಿಜೇತರಿಗೆ ಬಹುಮಾನ ನೀಡಲಾಯಿತು. ಹೂ ಮಾಲೆ ಕಟ್ಟುವ, ಹೂಬತ್ತಿ ಹೊಸೆಯುವ ಸ್ಪರ್ಧೆ ನಡೆಯಿತು. ವಿವಿಧ ಮಳಿಗೆಗಳ ಪ್ರದರ್ಶನ ಗಮನ ಸೆಳೆಯಿತು.
ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನ ನೀಡುವ ಕೃಷಿ ಕಂಠೀರವ ಪ್ರಶಸ್ತಿಯನ್ನು ಸುಬ್ರಾಯ ಗಣಪತಿ ಹೆಗಡೆ ಬಾಳೆಕೊಪ್ಪ, ಸ್ವಾವಲಂಬಿ ಕೃಷಿ ಮಹಿಳೆ ಪ್ರಶಸ್ತಿಗೆ ನೇತ್ರಾವತಿ ಹೆಗಡೆ ಕೆಂಚಗದ್ದೆ, ಉತ್ತಮ ಅವಿಭಕ್ತ ಕೃಷಿ ಕುಟುಂಬ ಪ್ರಶಸ್ತಿ ಯಲ್ಲಾಪುರ ಚವತ್ತಿಯ ಶಾಂತಾರಾಮ ಸುಬ್ರಾಯ ಹೆಗಡೆ ಬಾಳೇಹದ್ದ ಕುಟುಂಬಕ್ಕೆ, ಸಾಧಕ ಕೃಷಿ ಕುಶಲಕರ್ಮಿ ಪ್ರಶಸ್ತಿಗೆ ಸಿದ್ದಾಪುರ ತಾಲೂಕಿನ ಅಡಕಳ್ಳಿ ಪ್ರಶಸ್ತಿ ಮಾಬ್ಲು ಬಂಗಾರ್ಯ ಗೌಡ ಮನೇನಳ್ಳಿ,ಉತ್ತಮ ಬೆಟ್ಟ ನಿರ್ವಹಣಾ ಪ್ರಶಸ್ತಿಗೆ ಗುರುನಾಥ ಹೆಗಡೆ, (ಗಲಗದಮನೆ) ಬೊಮ್ಮನಳ್ಳಿ ಅವರಿಗೆ ಶ್ರೀಗಳು ನೀಡಿ ಗೌರವಿಸಿದರು.
ನೃಸಿಂಹ ಜಯಂತಿ ಎಂದರೆ ಭಗವಂತ ನೃಸಿಂಹ ಅವತಾರ ಮಾಡಿದ ದಿನವಿದು. ಹುಡುಗನ ರಕ್ಷಣೆಗೆ ಭಗವಂತ ಅವತರಿಸಿದ ಕ್ಷಣ.
-ಸ್ವರ್ಣವಲ್ಲೀ ಶ್ರೀ