ಕಾರವಾರ: ಗ್ರಾಮೀಣ ಜನರ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಹಲವು ಮಹತ್ವದ ಯೋಜನೆಗಳನ್ನ ಜಾರಿಗೆ ತಂದಿವೆ. ಅಂತಹ ಯೋಜನೆಗಳ ಪೈಕಿ ನರೇಗಾ, ಸ್ವಚ್ಛ ಭಾರತ್ ಮಿಷನ್, ಜೆಜೆಎಂ ಅತ್ಯಂತ ಪ್ರಮುಖವಾಗಿವೆ. ಈ ಮಹತ್ವಾಕಾಂಕ್ಷಿ ಯೋಜನೆಗಳಡಿ ಜಿಲ್ಲೆಯಲ್ಲಿ ಈಗಾಗಲೇ ಕೆರೆ, ಗ್ರಂಥಾಲಯ, ಸಮಗ್ರ ಶಾಲಾ ಅಭಿವೃದ್ಧಿ, ಹೊಸ ಕೆರೆ, ಅಂಗನವಾಡಿ, ಬಚ್ಚಲು ಗುಂಡಿ, ಕಸ ವಿಲೇವಾರಿ ಘಟಕ ನಿರ್ಮಾಣದಂತ ಸಾಕಷ್ಟು ಕಾಮಗಾರಿಗಳನ್ನ ಕೈಗೆತ್ತಿಕೊಂಡು ಪ್ರಗತಿ ಸಾಧಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ನ ಆಡಳಿತಾಧಿಕಾರಿಗಳಾದ ಪಿ.ಹೇಮಲತಾ ಹೇಳಿದರು.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ್ನ ಆಡಳಿತಾಧಿಕಾರಿಗಳಾದ ಪಿ.ಹೇಮಲತಾ ಅವರು ಶುಕ್ರವಾರ ತಾಲೂಕಿನ ಸುಂಕೇರಿ, ಚಿತ್ತಾಕುಲ, ಹಣಕೋಣ ಹಾಗೂ ಶಿರವಾಡ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ನರೇಗಾ, ಎಸ್ಬಿಎಂ ಯೋಜನೆ ಹಾಗೂ ಕೋಟಿ ಅನುದಾನ ಸೇರಿದಂತೆ ವಿವಿಧ ಯೋಜನೆಯಡಿ ಕೈಗೊಳ್ಳಲಾದ ಪಂಜರು ಮೀನು, ಸಿಗಡಿ ಕೃಷಿ ಘಟಕ, ಬೀಮಕೋಲ್ ಕೆರೆ ಬಂಡ್ ಅಭಿವೃದ್ಧಿ, ಅಂಗನವಾಡಿ, ಗ್ರಂಥಾಲಯ, ಕಸ ವಿಲೇವಾರಿ, ಚಿಕ್ಕಿ ಘಟಕ ಹಾಗೂ ನಗರದ ದೇವರಾಜ್ ಅರಸ್ ಭವನದಲ್ಲಿನ ಸಿವಿಲ್ ಸರ್ವಿಸ್ ಕೋಚಿಂಗ್ ಮತ್ತು ರೀಡಿಂಗ್ ಸೆಂಟರ್ ಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಳೆಗಾಲ ಸಮಿಪಿಸುತ್ತಿರುವ ಕಾರಣ ಪ್ರಸ್ತುತ ಕೈಗೊಂಡಿರುವ ಕಾಮಗಾರಿಗಳ ಜೊತೆಗೆ ಬೇರೆ ಬೇರೆ ಅಭಿವೃದ್ಧಿ ಕಾಮಗಾರಿಗಳನ್ನ ತೆಗೆದುಕೊಳ್ಳಬೇಕು. ಸರಕಾರದ ಜನಪರ ಯೋಜನೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ., ಆಡಳಿತ ವಿಭಾಗದ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಅಭಿವೃದ್ಧಿ ವಿಭಾಗದ ಕಾರ್ಯದರ್ಶಿ ಡಿ.ಎಂ. ಜಕ್ಕಪ್ಪಗೋಳ್, ಡಿಅರ್ಡಿಓ ಶಾಖೆಯ ಯೋಜನಾ ನಿರ್ದೇಶಕರಾದ ಕರೀಂ ಅಸಾದಿ, ಕಾರವಾರ ತಾಲೂಕು ಪಂಚಾಯತ್ನ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಾಲಪ್ಪನವರ ಆನಂದಕುಮಾರ, ನರೇಗಾದ ಸಹಾಯಕ ನಿರ್ದೇಶಕ ರಾಜೇಶ್ ನಾಯ್ಕ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಬಸಪ್ಪ ತೇಗನಾಳ, ಸಂದೀಪ್ ಕೊಟಾರ್ಕರ್, ಎಪಿಒ ಸುರೇಶ್ ನಾಯ್ಕ್, ಎಡಿಪಿಸಿ ನಾಗರಾಜ್ ನಾಯ್ಕ್, ಡಿಐಇಸಿ ಸಚಿನ್ ಬಂಟ್, ಟಿಐಇಸಿ ಫಕ್ಕೀರಪ್ಪ ತಮ್ಮಣ್ಣನವರ, ಟಿಸಿ ಸೂರಜ್ ಗುನಗಿ, ಟಿಎಇ ಚಂದ್ರು ಗೌಡ, ಅರ್ಜುನ್ ನಾಯ್ಕ್ ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿ ಇದ್ದರು.