ಅಂಕೋಲಾ: ಉತ್ತರ ಕನ್ನಡದ ಕರಾವಳಿ ಭಾಗದಲ್ಲಿ ನೂರಾರು ಬಗೆಯ ಸಮೃದ್ಧ ಮಾವಿನ ಫಸಲನ್ನು ಹೊಂದಿರುವ ಹಾಗೂ ವಿಶ್ವ ಖ್ಯಾತಿಯ ಈಶಾಡ ಮಾವಿನ ತವರೂರಾದ ಅಂಕೋಲೆಯಲ್ಲಿ ಬೆಳೆಗಾರರ ಸಮಿತಿಯ ಆಶ್ರಯದಲ್ಲಿ ಮೇ. 21 ಹಾಗೂ 22ರಂದು ಜೈಹಿಂದ್ ಹೈಸ್ಕೂಲ್ ಆವಾರದಲ್ಲಿ ಬೃಹತ್ ಮಾವು ಮೇಳವನ್ನು ಆಯೋಜಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಬೆಳೆಗಾರರ ಸಮಿತಿಯ ಅಧ್ಯಕ್ಷ ನಾಗರಾಜ ನಾಯಕ ಈ ಕುರಿತು ಮಾಹಿತಿ ನೀಡಿ, ಮಾವು ಮೇಳವು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಲಿದೆ. ಮಾವು ಬೆಳೆಗಾರರು ಯಾವುದೇ ದಲ್ಲಾಳಿಗಳ ಭಾಗವಹಿಸುವಿಕೆ ಇಲ್ಲದೆ ತಮ್ಮ ಫಸಲನ್ನು ನೇರವಾಗಿ ಮೇಳದಲ್ಲಿ ತಂದು ಮಾರಾಟ ಮಾಡಬಹುದು. ಮಾವು ಮೇಳವು ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವುದರಿಂದ ಈಶಾಡು, ಆಪೂಸು, ಚಾಲ್ತಿ ಉಂತಾದ ನೂರಾರು ವೈವಿಧ್ಯಮಯ ಜಾತಿಯ ಮಾವಿನ ಹಣ್ಣುಗಳನ್ನು ಒಂದೇ ಕಡೆ ಪ್ರದರ್ಶನ ಮತ್ತು ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಮಾವಿನ ಹಣ್ಣುಗಳನ್ನμÉ್ಟೀ ಅಲ್ಲದೆ ಮಾವಿನ ವಿವಿಧ ಬಗೆಯ ಉತ್ಪನ್ನಗಳು, ಮಾವಿನ ಕಾಯಿಯ ಉತ್ಪನ್ನಗಳು, ಅಪ್ಪೆಮಿಡಿ ಉಪ್ಪಿನಕಾಯಿ, ಹಣ್ಣಿನ ಜೂಸ್ ಪಲ್ಸ್, ಮಾವಿನ ಹುಳಿ, ಹಾಗೂ ಅನೇಕ ಜಾತಿಯ ಮಾವಿನ ಗಿಡಗಳೂ ಈ ಮೇಳದಲ್ಲಿ ಲಭ್ಯವಿರುತ್ತದೆ. ಮಾವು ಮೇಳವು ಎರಡು ದಿನ ನಡೆಯುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಭಾಗವಹಿಸಲು ಸಾಧ್ಯವಾಗುತ್ತದೆ ಜಿಲ್ಲೆಯ ವಿವಿಧ ಕಡೆಯಿಂದ ಗ್ರಾಹಕರು ಆಗಮಿಸುವ ನಿರೀಕ್ಷೆಯಿದೆ ಎಂದರು.
ವಿಶೇಷವಾಗಿ ಅಂಕೋಲದ ಬೆಳೆಗಾರರಿಗೆ ಮೊದಲ ಆದ್ಯತೆ ನೀಡಲಾಗುವದು. ಮೇ 14ರಂದು ಬೆಳೆಗಾರರು ಖುದ್ದಾಗಿ ಬಂದು ರಾಮಚಂದ್ರ ಹೆಗಡೆ, ವನದುರ್ಗ ನರ್ಸರಿ, ಅವಿನಾಶ ಆಸ್ಪತ್ರೆ ಎದುರು, ಜಿಸಿ ಕಾಲೇಜು ರಸ್ತೆ, ಅಂಕೋಲಾ (ಮೊ.ಸಂ: 94813 55422) ಇವರಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು. ಮೊದಲು ಬಂದ 70 ಬೆಳೆಗಾರರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಪ್ರವೇಶ ಶುಲ್ಕ ಒಂದು ರೂಪಾಯಿ ಮಾತ್ರ ಇರುತ್ತದೆ. ಮಾವು ಬೆಳೆಗಾರರು, ಮಾರಾಟಗಾರರು ಹಾಗೂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮಾವು ಮೇಳವನ್ನು ಯಶಸ್ವಿಗೊಳಿಸಬೇಕೆಂದು ಅವರು ಕೋರಿದರು.
ಸಮಿತಿಯ ಗೌರವಾಧ್ಯಕ್ಷ ಭಾಸ್ಕರ ನಾರ್ವೇಕರ ಮಾತನಾಡಿ, ಅಂಕೋಲೆಯ ಪ್ರಸಿದ್ಧ ಬೆಳೆಯಾದ ಮಾವಿನ ಹಣ್ಣು ಮತ್ತು ಇತರ ಉತ್ಪನ್ನಗಳಿಗೆ ಒಳ್ಳೆಯ ಮಾರುಕಟ್ಟೆಯನ್ನು ಒದಗಿಸುವ ದೃಷ್ಟಿಯಿಂದ ಪ್ರಥಮ ಬಾರಿಗೆ ಮಾವು ಮೇಳವನ್ನು ಆಯೋಜಿಸಲಾಗಿದೆ. ಮೇಳದಲ್ಲಿ ಆಯ್ದ ಬೆಳೆಗಾರರಿಗೆ, ಮಾರಾಟಗಾರರಿಗೆ ಮತ್ತು ಮಾವಿನ ಉದ್ಯಮದವರಿಗೆ ಸನ್ಮಾನಿಸಲಾಗುವದು. ಈ ಮೇಳವು ಪಕ್ಷಾತೀತ ಸಂಘಟನೆಯಾಗಿದ್ದು, ವಿಧಾನಸಭಾ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಆದಿಯಾಗಿ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಮಚಂದ್ರ ಹೆಗಡೆ, ಉಮೇಶ ನಾಯ್ಕ, ಬಿಂದೇಶ ನಾಯಕ, ರಾಜೇಶ್ವರಿ ಕೇಣಿಕರ, ಶಂಕರ ಗೌಡ ಅಡ್ಲೂರು, ಸುಲಕ್ಷಾ ಭೋವಿ ಇನ್ನಿತರರು ಇದ್ದರು.