ಶಿರಸಿ: ಯಕ್ಷಗಾನ ಬಾಲ ಕಲಾವಿದೆ, ವಿಶ್ವಶಾಂತಿ ಸರಣಿ ಯಕ್ಷನೃತ್ಯ ರೂಪಕಗಳನ್ನು ಪ್ರಸ್ತುತಗೊಳಿಸುವ ಶಿರಸಿಯ ತುಳಸಿ ಹೆಗಡೆ ಇವಳಿಗೆ ಮಹಾರಾಷ್ಟ್ರದ ನ್ಯಾಶನಲ್ ಅಕಾಡೆಮಿ ಫಾರ್ ಆರ್ಟ ಎಜ್ಯುಕೆಶನ್ ನೀಡುವ ಇಂಡಿಯನ್ ಸ್ಟಾರ್ ಐಕಾನ್ ಕಿಡ್ ಅಚೀವರ್ಸ ಅವಾರ್ಡ ಲಭಿಸಿದೆ.
ಭಾರತದ ವಿವಿಧಡೆಯ ಮಕ್ಕಳ ಸಾಂಸ್ಕೃತಿಕ ಹಾಗೂ ಕ್ರೀಡಾ ಸಾಧನೆ ಪರಿಗಣಿಸಿ ನೀಡಲಾಗುವ ಪ್ರಶಸ್ತಿ ಇದಾಗಿದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ನ್ಯಾಶನಲ್ ಅಕಾಡೆಮಿ ಫಾರ್ ಆರ್ಟ ಎಜ್ಯುಕೆಶನ್ ಜೊತೆಗೆ ನವಭಾರತ ರಾಷ್ಟ್ರೀಯ ಜ್ಞಾನಪೀಠ ಸಂಸ್ಥೆ, ಸುರಭೀ ಆಲ್ ಇಂಡಿಯಾ ಚೈಲ್ಡ ಆರ್ಟ ಎಕ್ಸಿಬಿಶನ್ ಸೊಸೈಟಿ, ನ್ಯಾಶನಲ್ ಇಕನಾಮಿಕ್ಸ ಗ್ರೋಥ್ ಟೈಮ್ಸ ಕೂಡ ಸಹಕಾರ ನೀಡಿವೆ.
ತುಳಸಿ ಹೆಗಡೆ ತನ್ನ ೩ವರೆ ವರ್ಷಕ್ಕೇ ಯಕ್ಷಗಾನ ವೇಷ ಮಾಡಿದ ಬಾಲೆಯಾಗಿದ್ದು, ಕಳೆದ ಏಳು ವರ್ಷಗಳಿಂದ ಏಳು ವಿಶ್ವಶಾಂತಿ ಸರಣಿ ಯಕ್ಷನೃತ್ಯ ರೂಪಕ ಪ್ರಸ್ತುತಗೊಳಿಸುತ್ತ ನಾಡು ಹೊರ ನಾಡುಗಳಲ್ಲಿ ವಿಶ್ವಶಾಂತಿ ಸಂದೇಶವನ್ನು ಯಕ್ಷನೃತ್ಯ ಮೂಲಕ ಸಾರುತ್ತಿದ್ದಾಳೆ ಎಂದು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ತುಳಸಿಯ ವಿಶ್ವಶಾಂತಿ ಸರಣಿ ರೂಪಕಗಳ ಪ್ರಸ್ತುತಿ ಕುರಿತು ಇಂಟರನ್ಯಾಶನಲ್ ಬುಕ್ ಆಪ್ ರೆಕಾರ್ಡನಲ್ಲೂ ದಾಖಲಾಗಿದೆ ಎಂಬುದು ಉಲ್ಲೇಖನೀಯ.