ಶಿರಸಿ; ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನೌಕರರ ಕಲ್ಯಾಣ ಸಂಘದಿಂದ ತಾಲೂಕಿನ ದೇವನಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಲ್ಯಾಣ ಸಂಘದ ಸದಸ್ಯರಾದ ಕೇಶವ ನಾಯ್ಕ ಅವರು ಅಪಘಾತದಿಂದ ದುರ್ಮರಣ ಹೊಂದಿದ ಕಾರಣ ಅವರ ಪತ್ನಿಯಾದ ಸಾವಿತ್ರಿ ಕೇಶವ ನಾಯ್ಕ ಇವರಿಗೆ ರೂ. 25,000/- ಗಳ ಮೊತ್ತದ ಚೆಕ್ನ್ನು ನೀಡಲಾಯಿತು.
ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಅಧ್ಯಕ್ಷರಾದ ಶಂಕರಪ್ಪ ವೀರಪ್ಪ ಮುಗದ್ ಹಾಗೂ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ಉಪಸ್ಥಿತರಿದ್ದು ಚೆಕ್ನ್ನು ವಿತರಿಸಿದರು. ದೇವನಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ವಿಶ್ವನಾಥ ದಿವೇಕರ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕಲ್ಯಾಣ ಸಂಘದ ಅಧ್ಯಕ್ಷರಾದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಕಲ್ಯಾಣ ಸಂಘದಿಂದ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅದರಲ್ಲಿ ಮೊದಲನೇಯದಾಗಿ ಹಾಲು ಉತ್ಪಾದಕರ ಮತ್ತು ನೌಕರರ ಮಕ್ಕಳಿಗಾಗಿ ವಿದ್ಯಾರ್ಥಿ ನಿಲಯವನ್ನು ಒಕ್ಕೂಟದ ಜಾಗದಲ್ಲಿ ನಿರ್ಮಾಣ ಮಾಡಲು ಈಗಾಗಲೇ ತೀರ್ಮಾನಿಸಲಾಗಿದ್ದು, ಹಾಲು ಉತ್ಪಾದಕರು ಮತ್ತು ನೌಕರರ ಮಕ್ಕಳ ಕಲ್ಯಾಣ ಕಾರ್ಯಕ್ಕಾಗಿ ಕಲ್ಯಾಣ ಮಂಟಪವನ್ನು ಕೂಡ ಒಕ್ಕೂಟದ ಜಾಗದಲ್ಲಿ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಅಲ್ಲದೇ ಅತೀ ಶೀಘ್ರದಲ್ಲಿ ಶೇ. 50 ರಷ್ಟು ಅನುದಾನದ ಅಡಿಯಲ್ಲಿ ಕಲ್ಯಾಣ ಸಂಘದಿಂದ ಕಲ್ಯಾಣ ಸಂಘದ ಸದಸ್ಯತ್ವ ಹೊಂದಿದ ಹಾಲು ಉತ್ಪಾದಕರಿಗೆ ಹಾಲು ಕರೆಯುವ ಯಂತ್ರ,ರಬ್ಬರ್ ಮ್ಯಾಟ್ ಮತ್ತು ಹುಲ್ಲು ಕತ್ತರಿಸುವ ಯಂತ್ರಗಳನ್ನು ನೀಡಲಾಗುವುದು ಎಂದರು. ಮುಂದಿನ ದಿನಗಳಲ್ಲಿ ಜಿಲ್ಲೆಯ ಹೈನೋದ್ಯಮದಲ್ಲಿ ಉತ್ತಮ ಅವಕಾಶಗಳು ಬರಲಿದ್ದು, ಅದಕ್ಕಾಗಿ ಜಿಲ್ಲೆಯ ಜನರು ಹೈನೋದ್ಯಮದಿಂದ ವಿಮುಖರಾಗದಂತೆ ವಿನಂತಿಸಿದರು.
ಚೆಕ್ ವಿತರಣೆಯ ನಂತರ ಹನುಮಂತಿಯ ಶೀತಲಕೇಂದ್ರ ಹಾಗೂ ನೂತನ ಹಾಲು ಪ್ಯಾಕಿಂಗ್ ಘಟಕಕ್ಕೆ ತೆರಳಿದ ಅಧ್ಯಕ್ಷ ಶಂಕರ ವಿ ಮುಗದ ಅವರು ಶೀತಲಕೇಂದ್ರ ಹಾಗೂ ಹಾಲು ಪ್ಯಾಕಿಂಗ್ ಘಟಕದ ದೈನಂದಿನ ಚಟುವಟಿಕೆಗಳನ್ನು ವೀಕ್ಷಿಸಿದರು. ನಂತರ ಧಾರವಾಡ ಸಹಕಾರ ಹಾಲು ಒಕ್ಕೂಟದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕೆಲಸ ನಿರ್ವಹಿಸುತ್ತಿರುವ ಒಕ್ಕೂಟದ ಸಿಬ್ಬಂದಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಒಕ್ಕೂಟದ ಸಿಬ್ಬಂದಿಗಳಿಂದ ಪ್ರಗತಿ ವರದಿಯನ್ನು ಪಡೆದರು.
ಎಲ್ಲರೂ ಜಿಲ್ಲೆಯ ಹಾಗೂ ಒಕ್ಕೂಟದ ಪ್ರಗತಿಗೆ ಆಯಾ ವ್ಯಾಪ್ತಿಯ ನಿರ್ದೇಶಕರ ಜೊತೆ ಸೇರಿ ಒಟ್ಟಾಗಿ ಕೆಲಸ ನಿರ್ವಹಿಸಬೇಕು, ಯಾವುದೇ ಕಾರಣಕ್ಕೂ ಯಾವುದೇ ಕೆಲಸಗಳು ವಿಳಂಬವಾಗಬಾರದು. ಹಾಲು ಉತ್ಪಾದಕ ರೈತರಿಗೆ ಹಾಗೂ ನಂದಿನಿ ಗ್ರಾಹಕರಿಗೆ ಬೇಕಾದ ಸೇವೆಯನ್ನು ಎಲ್ಲರೂ ತಪ್ಪದೇ ಒದಗಿಸಬೇಕು ಯಾರಾದರೂ ತಮ್ಮ ಕೆಲಸಗಳನ್ನು ಕಾರ್ಯಕ್ಷಮತೆಗೆ ತಕ್ಕಂತೆ ನಿರ್ವಹಿಸದೇ ಇದ್ದಲ್ಲಿ ಮತ್ತು ಬೇಜವಾಬ್ದಾರಿಯಿಂದ ಕೆಲಸ ಮಾಡಿದ್ದಲ್ಲಿ ಅಂತಹ ಸಿಬ್ಬಂದಿಗಳನ್ನು ಕಠಿಣ ಕ್ರಮಕ್ಕೆ ಒಳಪಡಿಸಲಾಗುವುದು ಎಂದರು.
ಧಾರವಾಡ ಸಹಕಾರ ಹಾಲು ಒಕ್ಕೂಟದ ನಿರ್ದೇಶಕರುಗಳಾದ ಶಂಕರ ಪಿ ಹೆಗಡೆ, ಪರಶುರಾಮ ವಿ ನಾಯ್ಕ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಲೋಹಿತೇಶ್ವರ ಕೆ ಎಂ, ವ್ಯವಸ್ಥಾಪಕರಾದ ಡಾ. ವೀರೇಶ ತರಲಿ, ಉತ್ತರ ಕನ್ನಡ ಜಿಲ್ಲೆಯ ಶೇಖರಣೆ ಮತ್ತು ತಾಂತ್ರಿಕ ವಿಭಾಗ ಹಾಗೂ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ಎಸ್.ಎಸ್.ಬಿಜೂರ್, ಶಿರಸಿ ಶೀತಲಕೇಂದ್ರದ ವ್ಯವಸ್ಥಾಪಕರಾದ ಕೃಷ್ಣ ಕೆ ಎನ್, ದೇವೆಂದ್ರ ಕುಮಾರ, ಮಾರುಕಟ್ಟೆ ವಿಭಾಗದ ಶರಣು ಮೆಣಸಿನಕಾಯಿ, ಬಸವರಾಜ ಸಲೋನಿ, ಹಾಗೂ ಧಾರವಾಡ ಸಹಕಾರ ಹಾಲು ಒಕ್ಕೂಟದ ಶೇಖರಣೆ ಮತ್ತು ತಾಂತ್ರಿಕ ವಿಭಾಗ, ಶಿರಸಿ ಶೀತಲಕೇಂದ್ರ ವಿಭಾಗ ಹಾಗೂ ಮಾರುಕಟ್ಟೆ ವಿಭಾಗದ ಸಿಬ್ಬಂಧಿಗಳು ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಪಸ್ಥಿತರಿದ್ದರು.