ಹೊನ್ನಾವರ: ಕಾಗೋಡ ತಿಮ್ಮಪ್ಪನವರು ಅತಿಕ್ರಮಣದಾರರು ಹಾಗೂ ಬಡವರ ಪರ ಮತ್ತು ಜನಪ್ರತಿನಿಧಿಯಾಗಿ ಮಾಡಿದ ಕಾರ್ಯವನ್ನು ಎಲ್ಲರೂ ಗಮನಿಸಿದ್ದಾರೆ. ಅವರಿಗೆ ನೈತಿಕತೆಯ ಬಗ್ಗೆ ಶಾಸಕ ದಿನಕರ ಶೆಟ್ಟಿ ಪಾಠ ಹೇಳುವ ಅಗತ್ಯವಿಲ್ಲ. ಅಧಿಕಾರಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಇವರು ನೈತಿಕತೆ ಹೊಂದಿದ್ದಾರೆಯೇ? ಎಂದು ಯೂಥ್ ಕಾಂಗ್ರೆಸ್ ಅಧ್ಯಕ್ಷ ಸಂದೇಶ ಶೆಟ್ಟಿ ಪ್ರಶ್ನಿಸಿದ್ದಾರೆ.
ಅತಿಕ್ರಮಣದಾರರ ಸಂಕಷ್ಟ ಹಾಗೂ ಜಿಲ್ಲೆಯ ಬಹುತೇಕ ಅರ್ಜಿ ತಿರಸ್ಕೃತಗೊಂಡಿರುವುದಕ್ಕೆ ಮಾಜಿ ಸ್ಪೀಕರ್ ಕಾಗೋಡ ತಿಮ್ಮಪ್ಪ ಜಿಲ್ಲೆಯ ಶಾಸಕರು, ಸಂಸದರು ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ರಾಜ್ಯದ ಎಲ್ಲಡೆಗಿಂತ ಜಿಲ್ಲೆಯಲ್ಲಿ ಹೆಚ್ಚಿನ ಅರ್ಜಿ ತಿರಸ್ಕೃತಗೊಂಡಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಸರ್ಕಾರವಿದ್ದು, ಜಿಲ್ಲೆ ಹಾಗೂ ಕ್ಷೇತ್ರದಲ್ಲಿ ಅದೇ ಪಕ್ಷದವರು ಅಧಿಕಾರದಲ್ಲಿ ಇದ್ದರೂ ಸಮಸ್ಯೆ ಬಗೆಹರಿಸುವ ಇಚ್ಚಾಶಕ್ತಿ ತೋರಿಸುತ್ತಿಲ್ಲ ಎಂದು ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಯಾಗಿ ಶಾಸಕ ದಿನಕರ ಶೆಟ್ಟಿ, ಸಮಸ್ಯೆಗಳಿಗೆ ಕಾಂಗ್ರೆಸ್ ಸರ್ಕಾರ ಕಾರಣ. ಪ್ರಚಾರದ ಕಾರಣಕ್ಕಾಗಿ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ. ಸಂಸದ ಅನಂತಕುಮಾರ ಹೆಗಡೆ ಬಗ್ಗೆ ಆರೋಪಿಸಲು ನೈತಿಕತೆ ಅವರಿಗಿಲ್ಲ ಎಂದು ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಯಾಗಿ ಹೇಳಿಕೆ ನೀಡಿರುವ ಸಂದೇಶ ಶೆಟ್ಟಿ, ಪಕ್ಷ ಸಂಘಟನೆ ಬೇರೆಯವರು ಮಾಡಿದ್ದರು ಆ ಪಕ್ಷಕ್ಕೆ ಬಂದು ಮೂಲ ಕಾರ್ಯಕರ್ತರನ್ನು ಹೊರದಬ್ಬಿ ಅಧಿಕಾರಕ್ಕೆ ಏರಿಲ್ಲವೇ? ಈ ಹಿಂದೆ ಸಂಸದ ಅನಂತಕುಮಾರ ಹೆಗಡೆಯವರನ್ನು ಇವರೇ ಟೀಕೆ ಮಾಡುವಾಗ ಯಾವ ನೈತಿಕತೆ ಇದ್ದು ಟೀಕಿಸಿದ್ದರು? ಸಾರ್ವಜನಿಕ ಸ್ಥಳದಲ್ಲಿ ಪ್ರಧಾನಿ ಮೋದಿ ಭಾವಚಿತ್ರ ತೆಗೆಯಿಸಿ ಈಗ ಅವರ ಬಗ್ಗೆ ಗುಣಗಾನ ಮಾಡುವುದು ನೈತಿಕತೆಯಾ? ಎಂದು ಪ್ರಶ್ನಿಸಿದ್ದಾರೆ. ಕಾಗೋಡ ತಿಮ್ಮಪ್ಪ ಅವರಿಗೆ ಪ್ರಚಾರ ಪಡೆಯುವ ಅಗತ್ಯವಿಲ್ಲ. ಸಂಸದರನ್ನು ಹಾಗೂ ಬಿಜೆಪಿ ನಾಯಕರನ್ನು ಮೆಚ್ಚಿಸಲು ಇಂತಹ ಹೇಳಿಕೆಯನ್ನು ನೀವು ನೀಡುತ್ತಿದ್ದೀರಿ ಎನ್ನುವ ವಿಷಯ ಎಲ್ಲರಿಗೂ ತಿಳಿದಿದೆ. ಹಾಲಿ ಶಾಸಕರಾಗಿದ್ದರೂ ಮುಂದಿನ ಚುನಾವಣೆಯಲ್ಲಿ ಟಿಕೇಟ್ ಕೈ ತಪ್ಪುವ ಸಾಧ್ಯತೆ ಇರುವ ನಿಮಗೆ ಪ್ರಚಾರದ ಅಗತ್ಯ ಇರಬಹುದು, ಅವರಿಗಲ್ಲ ಎಂದು ಟಾಂಗ್ ನೀಡಿದ್ದಾರೆ.