ಸಿದ್ದಾಪುರ: ಮಂಗನ ಕಾಯಿಲೆ ನಿಯಂತ್ರಣದ ಕುರಿತಂತೆ ಈಗಾಗಲೇ ಆರೋಗ್ಯ ಇಲಾಖೆ, ತಾಲೂಕು ಆಡಳಿತದ ನೇತೃತ್ವದಲ್ಲಿ ಸೂಕ್ತ ಕ್ರಮ ತೆಗೆದುಕೊಂಡಿದ್ದು, ಯಾರಾದರೂ ಆತಂಕಪಡುವಂಥ ಹೇಳಿಕೆಗಳನ್ನು ವ್ಯಕ್ತಪಡಿಸಿದಲ್ಲಿ ಭಯ ಪಡಬೇಕಿಲ್ಲ. ಕಾಯಿಲೆ ನಿಯಂತ್ರಣದಲ್ಲಿದ್ದರೂ ಮುನ್ನೆಚ್ಚರಿಕೆ ವಹಿಸಲು ಎಲ್ಲ ಇಲಾಖೆಗಳಿಗೂ ಸೂಚನೆ ನೀಡಲಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಮಂಗನ ಕಾಯಿಲೆ ಕುರಿತಾದ ಮುನ್ನೆಚ್ಚರಿಕೆ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜನವರಿಯಿಂದ ಈವರೆಗೆ ತಾಲೂಕಿನಲ್ಲಿ 28,234 ಜನರಿಗೆ ಕೆಎಫ್ಡಿ ಲಸಿಕೆ ನೀಡಲಾಗಿದೆ. ಅಗತ್ಯವುಳ್ಳ ತೈಲ, ಲಸಿಕೆಗಳು ಲಭ್ಯವಿದೆ. 11 ಪ್ರಕರಣಗಳು ಈವರೆಗೆ ಕಂಡುಬಂದಿದ್ದು, ಅವರು ಆರೋಗ್ಯವಾಗಿದ್ದಾರೆ. ಇಬ್ಬರು ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯದಲ್ಲಿ ಮನೆಗೆ ತೆರಳಲಿದ್ದಾರೆ. ಸಾಕಷ್ಟು ಮಳೆಯಾಗಿದ್ದಲ್ಲದೇ, ಎಚ್ಚರಿಕೆ ಕ್ರಮ ವಹಿಸಿದ್ದರಿಂದ ಕಾಯಿಲೆ ವ್ಯಾಪಕವಾಗಿ ಹರಡಿಲ್ಲ. ಆರೋಗ್ಯ ಇಲಾಖೆ ಪ್ರಕಾರ ಮಂಗನ ಕಾಯಿಲೆ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದರು.
ಯಾವುದೇ ಕಾರಣಕ್ಕೂ ಮಾಹಿತಿ ಕೊರತೆ ಆಗಬಾರದು. ಎಲ್ಲೇ ಆದರೂ ಈ ಬಗ್ಗೆ ಅನುಮಾನದ ಸ್ಥಿತಿ ಕಂಡುಬಂದಲ್ಲಿ ತಕ್ಷಣ ಮಾಹಿತಿ ನೀಡಬೇಕು. ಆರೋಗ್ಯ, ಅರಣ್ಯ, ಕಂದಾಯ, ಗ್ರಾಮೀಣಾಭಿವೃದ್ಧಿ, ಪೊಲೀಸ್, ಶಿಕ್ಷಣ ಮುಂತಾಗಿ ಎಲ್ಲ ಇಲಾಖೆಗಳ ಸಿಬ್ಬಂದಿಗಳೂ ಕಾರ್ಯದಲ್ಲಿ ನಿಗಾವಹಿಸಬೇಕು. ಆರೋಗ್ಯ ಇಲಾಖೆ ಇನ್ನೂ ಹೆಚ್ಚು ಜಾಗೃತವಾಗಿರಬೇಕು. ಈವರೆಗೆ 8 ಮಂಗಗಳು ಸತ್ತ ವರದಿಯಾಗಿದೆ. ಕಾನಸೂರು ಭಾಗದಲ್ಲಿ ಸಕ್ರೀಯ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿದೆ. ಆ ಭಾಗದಲ್ಲಿ ಈವರೆಗೆ 5215 ಜನರಿಗೆ ಲಸಿಕೆ ಹಾಕಲಾಗಿದೆ. ಯಾವುದೇ ಕಾರಣಕ್ಕೂ ಜನರು ಆತಂಕಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆ ವಹಿಸುವದನ್ನು ಯಾರೂ ಮರೆಯಬಾರದು ಎಂದು ತಿಳಿಸಿದರು.
ತಹಶೀಲ್ದಾರ ಸಂತೋಷ ಭಂಡಾರಿ, ತಾಲೂಕು ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ, ರೇಂಜರ್ ಶಿವಾನಂದ ನಿಂಗಾಣಿ ಮುಂತಾಗಿ ಹಲವು ಇಲಾಖಾ ಅಧಿಕಾರಿಗಳು ಪಾಲ್ಗೊಂಡಿದ್ದರು.