ದಾಂಡೇಲಿ: ನಗರದ ದಾಂಡೇಲಿ ಶಿಕ್ಷಣ ಸಂಸ್ಥೆಯ ಬಂಗೂರನಗರ ಪದವಿ ಮಹಾವಿದ್ಯಾಲಯದ ನೂತನ ಪ್ರಾಚಾರ್ಯರಾಗಿ ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥರಾಗಿದ್ದ ಡಾ.ಆರ್.ಜಿ.ಹೆಗಡೆಯವರು ಅಧಿಕಾರ ವಹಿಸಿಕೊಂಡಿದ್ದಾರೆ.
ಮೂಲತಃ ಕುಮುಟಾ ತಾಲ್ಲೂಕಿನ ಸುಸಂಸ್ಕೃತ ಕುಟುಂಬದ ಕುಡಿಯಾಗಿರುವ ಡಾ.ಆರ್.ಜಿ.ಹೆಗಡೆಯವರು ಪ್ರಾಥಮಿಕದಿಂದ ಪದವಿಯವರೆಗೆ ಕುಮಟಾದಲ್ಲೆ ಶಿಕ್ಷಣವನ್ನು ಪಡೆದು, ಆನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಆಂಗ್ಲ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ಬಳಿಕ ತನ್ನ ಸಂಶೋಧನಾ ಪ್ರಬಂಧಗಳ ಮೂಲಕ ಎಂ.ಫಿಲ್, ಪಿ.ಎಚ್.ಡಿ ಪದವಿಗೆ ಭಾಜನರಾಗಿದ್ದಾರೆ. ಅಂತರಾಷ್ಟ್ರೀಯ ಖ್ಯಾತಿಯ ಖಾನಾಪುರದಲ್ಲಿರುವ ಐಐಟಿಯಲ್ಲಿ ಸ್ವಾಪ್ಟ್ ಸ್ಕಿಲ್ ಕೋರ್ಸ್ ಮತ್ತು ಸ್ವಾಪ್ಟ್ ಸ್ಕಿಲ್ ಅಡ್ವಾನ್ಸ್ ಕೋರ್ಸ್ ಪರೀಕ್ಷೆಯಲ್ಲಿ ದೇಶಕ್ಕೆ ಅಗ್ರಗಣೀಯರಾಗಿ ತೇರ್ಗಡೆಗೊಂಡ ಹಿರಿಮೆ ಡಾ.ಆರ್.ಜಿ.ಹೆಗಡೆಯವರದ್ದಾಗಿದೆ.
ಸ್ನಾತಕ್ಕೋತ್ತರ ಪದವಿ ಮುಗಿದ ಬಳಿಕ 1986 ರಲ್ಲಿ ಬಂಗೂರನಗರ ಪದವಿ ಮಹಾವಿದ್ಯಾಲಯದಲ್ಲಿ ಆಂಗ್ಲ ಉಪನ್ಯಾಸಕರಾಗಿ ನೇಮಕಗೊಂಡರು. 2013ರಿಂದ 2014ರವರೆಗೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, 2014ರಿಂದ ಮತ್ತೆ ಬಂಗೂರನಗರ ಪದವಿ ಮಹಾವಿದ್ಯಾಲಯದಲ್ಲಿ ಆಂಗ್ಲ ವಿಭಾಗದ ಮುಖ್ಯಸ್ಥರಾಗಿ ಸೇವೆಯನ್ನು ಮುಂದುವರಿಸಿದರು. 2017ರಿಂದ 2020ರವರೆಗೆ ಬಿಜಾಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಕರ್ನಾಟಕ ಸರಕಾರದಿಂದ ನಿಯೋಜಿತರಾಗಿದ್ದರು.
ಕಲೆ, ರಂಗಭೂಮಿಯಲ್ಲಿ ಸೈ ಎನಿಸಿಕೊಂಡಿರುವ ಡಾ.ಆರ್.ಜಿ.ಹೆಗಡೆಯವರು ಯಕ್ಷಗಾನ ಕಲಾವಿದರಾಗಿ ಬಣ್ಣ ಹಚ್ಚಿದ್ದಾರೆ. ಪ್ರಬುದ್ದ ವಾಗ್ಮಿಯಾಗಿ, ಚಿಂತಕರಾಗಿ, ಲೇಖಕರಾಗಿ, ಸಾಹಿತಿಯಾಗಿ ಈಗಾಗಲೆ ನಾಡಿನಲ್ಲಿ ಗಮನ ಸೆಳೆದಿರುವ ಮತ್ತು ನೇರ ನಡೆ ನುಡಿಯ ಸಹೃದಯಿ ಡಾ.ಆರ್.ಜಿ.ಹೆಗಡೆಯವರು ಪ್ರತಿಷ್ಟಿತ ಬಂಗೂರನಗರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ನೇಮಕಗೊಂಡಿರುವುದಕ್ಕೆ ನಗರದ ಗಣ್ಯರನೇಕರು ಅಭಿನಂದನೆ ಸಲ್ಲಿಸಿದ್ದಾರೆ.