ಶಿರಸಿ: ಹಿರಿಯ ಸಹಕಾರಿ ಧುರೀಣರಾಗಿರುವ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಶಂಭುಲಿಂಗ ಹೆಗಡೆ ನಡಗೋಡು ದಂಪತಿಗಳನ್ನು ಮಂಗಳವಾರ ಕದಂಬ ಮಾರ್ಕೆಟಿಂಗ್ ಸಭಾಭವನದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಿ, ಅಭಿನಂದಿಸಲಾಯಿತು.
ಶಂಭುಲಿಂಗ ಹೆಗಡೆ ನಡಗೋಡು ಅಭಿನಂದನಾ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಗ್ರಿಕಲ್ಚರಲ್ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ ಅಭಿನಂದನಾ ನುಡಿಗಳನ್ನಾಡಿ ಸಜ್ಜನಿಕೆಯನ್ನು ಗುರುತಿಸಿ, ಗೌರವಿಸುವುದು ಸುಸಂಸ್ಕೃತ ಸಮಾಜದ ಕರ್ತವ್ಯವಾಗಿದೆ. ಸಮಾಜಕ್ಕೆ ಶಂಭುಲಿಂಗ ಹೆಗಡೆಯವರ ಕೊಡುಗೆಯನ್ನು ಗುರುತಿಸಿ ಇಂದು ನಾವೆಲ್ಲ ಸೇರಿ ಅವರನ್ನು ಅಭಿನಂದಿಸುತ್ತಿದ್ದೇವೆ. ಕೃಷಿ, ಸಹಕಾರಿ, ಹೈನುಗಾರಿಕೆ, ರಾಜಕೀಯ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ನೀಡಿದ್ದಾರೆ. ಮಲಯ ಪರ್ವತದಲ್ಲಿ ಶ್ರೀಗಂಧವನ್ನು ಉರುವಲನ್ನಾಗಿ ಬಳಸುತ್ತಾರಂತೆ, ಅಂತೆಯೇ ನಮ್ಮ ಜೊತೆಗಿರುವವರ ಬಗ್ಗೆಯೇ ನಮಗೆ ತಿಳಿದಿರುವುದಿಲ್ಲ. ಶಂಭುಲಿಂಗ ಹೆಗಡೆಗೆ ಸಹಕಾರಿ ರತ್ನ ದೊರಕಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸರಕಾರ ಯೋಗ್ಯರನ್ನು ಗುರುತಿಸಿ ಗೌರವಿಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ತಳಮಟ್ಟದಿಂದ ಸಂಘಟನೆಯನ್ನು ಬಲಪಡಿಸುವ ತಾಕತ್ತು ಶಂಭುಲಿಂಗ ಹೆಗಡೆಯವರಲ್ಲಿದೆ. ಕದಂಬ ಮಾರ್ಕೆಟಿಂಗ್ ನಂತಹ ಸಂಸ್ಥೆಯನ್ನು ರಾಜ್ಯಾದ್ಯಂತ ಗುರುತಿಸುವಂತೆ ಮಾಡಿರುವ ಶ್ರೇಯಸ್ಸು ಶಂಭುಲಿಂಗ ಹೆಗಡೆಯವರದ್ದಾಗಿದೆ. ರೈತರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಶಂಭುಲಿಂಗ ಹೆಗಡೆ ಮಾಡಿದ್ದಾರೆ ಎಂದರು.
ಇನ್ನೋರ್ವ ಸಹಕಾರಿಯಾಗಿರುವ ಸಹಕಾರಿ ರತ್ನ ಪುರಸ್ಕೃತ ಎಚ್.ಎಸ್ ಮಂಜಪ್ಪನವರನ್ನೂ ಸಹ ಇದೇ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಕದಂಬ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ಶ್ರೀಪಾದ ಹೆಗಡೆ ದೊಡ್ಡಳ್ಳಿ, ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನ ನಾಯಕ, ಸಹಕಾರ ಭಾರತೀ ರಾಷ್ಟ್ರೀಯ ಸಂರಕ್ಷಕ ರಮೇಶ ವೈದ್ಯ, ಸಹಕಾರ ಭಾರತೀ ರಾಜ್ಯಾಧ್ಯಕ್ಷ ರಾಜಶೇಖರ ಶೀಲವಂತ ಸೇರಿದಂತೆ ಇನ್ನಿತರರು ಇದ್ದರು.
ಧಾರವಾಡ ಹಾಲು ಒಕ್ಕೂಟ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಕೆಶಿನ್ಮನೆ, ಅಡಿಕೆ ಮತ್ತು ಕಾಳುಮೆಣಸು ವರ್ತಕರ ಸಂಘ, ಟಿ.ಆರ್.ಸಿ. ಸೊಸೈಟಿ, ಹುಳಗೋಳ ಸೇವಾ ಸಹಕಾರಿ ಸಂಘ, ತಾರಗೋಡು ಹಾಲು ಉತ್ಪಾದಕರ ಸಂಘ ಸೇರಿದಂತೆ ಅನೇಕ ಸಂಘಟನೆಗಳು, ಗಣ್ಯರು ಶಂಭುಲಿಂಗ ಹೆಗಡೆ ದಂಪತಿಗಳನ್ನು ಸನ್ಮಾನಿಸಲಾಯಿತು.