ಶಿರಸಿ: ಸ್ವರ್ಣವಲ್ಲೀ ಮಹಾಸಂಸ್ಥಾನದಿಂದ ಶ್ರೀಶಂಕರ ಜಯಂತಿ ನಿಮಿತ್ತ ದಾರ್ಶನಿಕರ ದಿನ ಕಾರ್ಯಕ್ರಮವನ್ನು ಮೇ 5 ಮತ್ತು 6ರಂದು ಹಮ್ಮಿಕೊಳ್ಳಲಾಗಿದೆ ಎಂದು ಸ್ವರ್ಣವಲ್ಲೀ ಮಠದ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಕಾಲ ಇಲ್ಲಿನ ಯೋಗ ಮಂದಿರ ಹಾಗೂ ಸ್ವರ್ಣವಲ್ಲೀ ಮಠದಲ್ಲಿ ದಾರ್ಶನಿಕರ ದಿನ ಕಾರ್ಯಕ್ರಮ ನಡೆಯಲಿದೆ. ಅಲ್ಲಿ ಕ್ರಮವಾಗಿ ಆಚಾರ್ಯ ಶಂಕರಶ್ರೀ ಹಾಗೂ ಸಾಧನ ಶಂಕರ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಮೇ 5ರಂದು ಯೋಗ ಮಂದಿರದಲ್ಲಿ ಸಂಜೆ 5 ಗಂಟೆಯಿಂದ ಸಭಾ ಕಾರ್ಯಕ್ರಮ ಆರಂಭವಾಗಲಿದ್ದು, ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸಿದ್ದಾಪುರ ಶಿರಳಗಿಯ ಬ್ರಹ್ಮಾನಂದ ಭಾರತೀ ಮಹಾಸ್ವಾಮಿಗಳು ಆಗಮಿಸಲಿದ್ದಾರೆ. ಅಂದು ಹೆಗ್ಗರಣಿಯ ಮಾಸ್ತಿಬೈಲಿನ ಶ್ರೀವಾಣಿವಿನಾಯಕ ಸಂಸ್ಕೃತ ಪಾಠಶಾಲೆಯ ನಿವೃತ್ತ ಮುಖ್ಯ ಪ್ರಾಧ್ಯಾಪಕ ವೇ.ಮೂ.ಗಣಪತಿ ಜೋಶಿ ಕೂಗಲಬಳ್ಳಿ ಮಠ ಅವರಿಗೆ ಆಚಾರ್ಯ ಶಂಕರಶ್ರೀ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಮಾಹಿತಿ ನೀಡಿದರು.
6ರಂದು ದಾರ್ಶನಿಕ ದಿನ ಸ್ವರ್ಣವಲ್ಲೀ ಮಠದಲ್ಲಿ ನಡೆಯಲಿದ್ದು, ಬೆಳಿಗ್ಗೆ 9ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ. ಸಂಜೆ 4 ಗಂಟೆಯಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಸ್ವರ್ಣವಲ್ಲೀ ಶ್ರೀಗಳ ದಿವ್ಯ ಸಾನ್ನಿಧ್ಯ ಇರಲಿದೆ. ಅಂದು ನಿವೃತ್ತ ಸಂಸ್ಕೃತ ಶಿಕ್ಷಕ ವಿ.ಶ್ರೀಪಾದ ಭಟ್ಟ ಕಡತೋಕ ಹಾಗೂ ನಿವೃತ್ತ ಪ್ರಾಂಶುಪಾಲ ಡಾ.ಲಕ್ಷ್ಮೀನಾರಾಯಣ ಭಟ್ಟ ಅವರಿಗೆ ಸಾಧನಾ ಶಂಕರ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದರು.
ಪುಸ್ತಕ ಬಿಡುಗಡೆ: ಶಂಕರ ಜಯಂತಿಯ ನಿಮಿತ್ತ ಮೇ 6ರಂದು ಸ್ವರ್ಣವಲ್ಲೀಯಲ್ಲಿ ಶ್ರೀಭಗವತ್ಪಾದ ಪ್ರಕಾಶನದಿಂದ ಡಾ.ಸೂರ್ಯನಾರಾಯಣ ಭಟ್ಟ ಹಿತ್ಲಳ್ಳಿ ಅವರ ಸತ್ಯನಾರಾಯಣ ವೃತಕಥೆ ಗ್ರಂಥ ಬಿಡುಗಡೆ ಆಗಲಿದೆ ಎಂದು ಪ್ರಮುಖರಾದ ಕೆ.ವಿ.ಭಟ್ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಪ್ರಮುಖರಾದ ವಿ.ಶಂಕರ ಭಟ್, ಎಸ್.ಎನ್.ಭಟ್ ಇದ್ದರು.