ಸಿದ್ದಾಪುರ: ತಾಲೂಕಿನ ಭಾನ್ಕುಳಿಯ ಶ್ರೀರಾಮದೇವಮಠ, ಗೋಸ್ವರ್ಗದಲ್ಲಿ ಮೇ 4ರಿಂದ 9ರವರೆಗೆ ಶ್ರೀಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರಮಠ ಮಹಾ ಸಂಸ್ಥಾನದ ಶ್ರೀ ರಾಘವೇಶ್ವರಭಾರತೀ ಶ್ರೀಗಳವರ ದಿವ್ಯಸಂಕಲ್ಪ, ಶುಭ ಸಾನ್ನಿಧ್ಯ, ಸುಸಂಯೋಜನೆಯಲ್ಲಿ ಭವವ ಕಳೆವ ಬ್ರಹ್ಮಭಾವ ವೈಭವವಾಗಿ ‘ಶಂಕರಪಂಚಮೀ ಉತ್ಸವ’ ಜರುಗಲಿದೆ ಎಂದು ಹವ್ಯಕ ಮಹಾಮಂಡಲ ಅಧ್ಯಕ್ಷ, ಶಂಕರಪಂಚಮೀ ಗೌರವಾಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ತಿಳಿಸಿದ್ದಾರೆ.
ಭಾನ್ಕುಳಿ ಶ್ರೀರಾಮದೇವಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಅವರು, ಬ್ರಹ್ಮೀಭೂತ ಶ್ರೀ ರಾಘವೇಂದ್ರಭಾರತೀ ಶ್ರೀಗಳವರ ಮಾರ್ಗದರ್ಶನದಲ್ಲಿ ಈ ಹಿಂದಿನಿಂದಲೂ ಶಂಕರಜಯಂತಿ ಕಾರ್ಯಕ್ರಮವನ್ನು ಭಾನ್ಕುಳಿಮಠದಲ್ಲಿ ನಡೆಸಿಕೊಂಡು ಬರಲಾಗುತ್ತಿತ್ತು. 2011- 2012ರಿಂದ ರಾಘವೇಶ್ವರ ಭಾರತೀ ಶ್ರೀಗಳವರು ಈ ಕಾರ್ಯಕ್ರಮಕ್ಕೆ ವಿಸ್ತ್ರತ ರೂಪ ನೀಡಿ ಶಂಕರಪಂಚಮೀ ಉತ್ಸವವನ್ನಾಗಿಸಿದ್ದು ವಿಶೇಷ ರೀತಿಯಲ್ಲಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಪ್ರಸ್ತುತ ಶಂಕರ ಪಂಚಮೀ ಕಾರ್ಯಕ್ರಮದಲ್ಲಿ ಶ್ರೀ ಮಹಾಗಣಪತಿ ಹವನ, ಶ್ರೀರಾಮತಾರಕ ಹವನ, ಅತಿರುದ್ರಪುರಶ್ಚರಣಾಂಗ ಮಹಾರುದ್ರ ಹವನ, ಕುಂಕುಮಾರ್ಚನೆ, ಗೋಪೂಜೆ, ಗೋಆರತಿ, ಗೋಗ್ರಾಸ, ಗೋತುಲಾಭಾರ, ಸೂತ್ರಸಂಗಮ (ಸಾಮೂಹಿಕ ಉಪನಯನ), ಚಂಡಿಕಾ ಹವನ, ಆದಿತ್ಯ ಹವನ, ಶಂಕರ ಕಿಂಕರ ಪ್ರಶಸ್ತಿ ಪ್ರದಾನ, ಶ್ರೀಶಂಕರಗುರು ಮಂದಿರದಲ್ಲಿ ಶ್ರೀ ಶಂಕರಾಚಾರ್ಯರ ಪೂಜೆ, ಶಂಕರಭಾಷ್ಯ ಪಾರಾಯಣ, ಶ್ರೀಕರಾರ್ಚಿತ ದೇವರ ಪೂಜೆ ಮತ್ತು ಶ್ರೀಗುರು ಭಿಕ್ಷಾ ಸೇವೆ, ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಮೇ 4 ರಂದು ಸಾಯಂಕಾಲ ಶ್ರೀ ರಾಘವೇಶ್ವರಭಾರತೀ ಶ್ರೀಗಳವರ ಆಗಮನ, ಸ್ವಾಗತ ನಡೆಯಲಿದೆ. 5 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಯಲ್ಲಿ ಶ್ರೀ ರಾಘವೇಶ್ವರಭಾರತೀ ಶ್ರೀಗಳವರಿಂದ ಶ್ರೀಶಂಕರಗುರು ಮಂದಿರದಲ್ಲಿ ಶ್ರೀ ಶಂಕರಾಚಾರ್ಯರ ಪೂಜೆ, ಹವನಗಳ ಪೂರ್ಣಾಹುತಿ, ಭಾನ್ಕುಳಿಮಠದ ವಾರ್ಷಿಕೋತ್ಸವ, ದೇಸಿ ಉತ್ಪನ್ನ ಹಾಗೂ ಗೋ ಆಧಾರಿತ ಉತ್ಪನ್ನಗಳ “ಸ್ವರ್ಗಸುಧಾ” ಮಳಿಗೆಯ ಲೋಕಾರ್ಪಣೆ ನಡೆಯಲಿದೆ. ಭಾನ್ಕುಳಿಮಠ ಸಂಪರ್ಕದ ಕಾಂಕ್ರೀಟ ರಸ್ತೆಯ ಉದ್ಘಾಟನೆಯನ್ನು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ನೆರವೇರಿಸಿ ಶಂಕರಪಂಚಮೀ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
7ರಂದು ಸಿದ್ದಾಪುರ ಹವ್ಯಕ ಮಂಡಲೋತ್ಸವ, ಸಂಧ್ಯಾಮಂಗಲ, ಸಹಸ್ರಚಂದ್ರದರ್ಶನ, ಭೀಮರಥ ಶಾಂತಿ, ವಿದ್ಯಾರ್ಥಿ ಪುರಸ್ಕಾರ, ಸಭಾ ಕಾರ್ಯಕ್ರಮ, 8ರಂದು ಸೂತ್ರ ಸಂಗಮ, ಮಾತೃತ್ವಮ್ ಸಮಾವೇಶ, ಶ್ರೀಮಧ್ವಾಧೀಶ ವಿಠ್ಠಲದಾಸರಾದ ರಾಮಕೃಷ್ಣ ಕಾಟುಕುಕ್ಕೆ ತಂಡದಿಂದ ಭಜನೆ, ದಿನೇಶ ಶಹರಾ ಫೌಂಡೇಶನ್ ಅವರ ಪ್ರಾಯೋಜಕತ್ವದಲ್ಲಿ ಐವರು ಗೋ ಸೇವಾ ಸಾಧಕರಿಗೆ ‘ಗೋಪಾಲ ಗೌರವ’ ಪ್ರಶಸ್ತಿ ಪ್ರದಾನ, ಸಭಾ ಕಾರ್ಯಕ್ರಮ, ಮಾಸದ ಮಾತೆಯರಿಗೆ ಬಾಗಿನ ಪ್ರದಾನ ನಡೆಯಲಿದೆ. ಶ್ರೀಮತಿ ದೇವಕಿ ಅಮ್ಮ ಅವರಿಗೆ ‘ಶ್ರೀ ಮಾತಾ’ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. 9ರಂದು ದಾನಮಾನ ಕಾರ್ಯಕ್ರಮವಿದೆ ಎಂದು ಅವರು ತಿಳಿಸಿದರು.
ಆರು ದಿವಸಗಳ ಕಾಲ ಜರುಗುವ ಶಂಕರ ಪಂಚಮೀ ಉತ್ಸವದಲ್ಲಿ ಯಾವತ್ತೂ ಶಿಷ್ಯ ಭಕ್ತರು, ಸಾರ್ವಜನಿಕರು, ಗೋಪ್ರೇಮಿಗಳು ಪಾಲ್ಗೊಂಡು ಶ್ರೀಗುರುದೇವತಾ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಸಂಘಟಕರು ಕೋರಿದರು.
ಸಿದ್ದಾಪುರ ಹವ್ಯಕ ಮಂಡಲ ಅಧ್ಯಕ್ಷ ಮಹೇಶ ಭಟ್ಟ ಚಟ್ನಳ್ಳಿ, ಶಂಕರ ಪಂಚಮಿ ಉತ್ಸವ ಸಮಿತಿ ಅಧ್ಯಕ್ಷ ಕೆ.ಎನ್. ಮಂಜುನಾಥ ಭಟ್ಟ ಕವ್ಲಮನೆ, ಕೋಶಾಧ್ಯಕ್ಷ ಎಂ.ಎಂ.ಹೆಗಡೆ ಮಗೇಗಾರ, ಪ್ರಧಾನ ಕಾರ್ಯದರ್ಶಿ ಎಂ.ವಿ.ಹೆಗಡೆ ಮುತ್ತಿಗೆ, ಮಾತೃತ್ವಮ್ ಸಾಗರ ಪ್ರಾಂತ್ಯದ ಅಧ್ಯಕ್ಷೆ, ಗೋಸ್ವರ್ಗ ಸಮಿತಿ ಕೋಶ ವಿಭಾಗದ ಕಾರ್ಯದರ್ಶಿ ವೀಣಾ ಭಟ್ಟ ಶಿರಸಿ, ರಾಘವೇಂದ್ರ ವಟು ಶಿಕ್ಷಣ ಶಿಬಿರ ಸಂಚಾಲಕ ಜಯರಾಮ ಭಟ್ಟ ಗುಂಜಗೋಡ ಇತರರು ಇದ್ದರು.
‘ಶಂಕರ ಕಿಂಕರ’ ಪ್ರಶಸ್ತಿ ಪ್ರದಾನ: ಮೇ 6ರಂದು ಅತಿರುದ್ರಪುರಶ್ಚರಣಾಂಗ ಮಹಾರುದ್ರ ಹವನ ಪೂರ್ಣಾಹುತಿ, ಮಧ್ಯಾಹ್ನ 2ರಿಂದ ಧರ್ಮಸಭೆ, ‘ಶಂಕರ ಕಿಂಕರ’ ಪ್ರಶಸ್ತಿ ಪ್ರದಾನ, ಕರ್ಣಾಟಕ ಬ್ಯಾಂಕಿನ ಸಿಇಒ ಎಂ.ಎಸ್.ಮಹಾಬಲೇಶ್ವರ ಅವರಿಗೆ ‘ಶ್ರೀಪುರುಷೋತ್ತಮ’ ಪ್ರಶಸ್ತಿ ಪ್ರದಾನ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಆರ್.ಎಂ.ಹೆಗಡೆ ಬಾಳೇಸರ ಅವರಿಗೆ ಸನ್ಮಾನ, ರಾಘವೇಶ್ವರ ಭಾರತೀ ಶ್ರೀಗಳವರಿಂದ ಆಶೀರ್ವಚನ ನಡೆಯಲಿದೆ. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಉಪಸ್ಥಿತರಿರುತ್ತಾರೆ.
ಉತ್ಸವದಲ್ಲಿ ಮೆರೆಯಲಿರುವ ಸಾಂಸ್ಕೃತಿಕ ವೈಭವ; ಭಾನ್ಕುಳಿ ಶ್ರೀ ರಾಮದೇವಮಠ- ಗೋಸ್ವರ್ಗದಲ್ಲಿ ಶಂಕರಕಿಂಕರ ವೃಂದದಿಂದ ಆಯೋಜಿಸಲಾಗಿರುವ ಶಂಕರ ಪಂಚಮೀ ಉತ್ಸವದಲ್ಲಿ ಪ್ರತಿ ದಿನವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮೇ 5ರಂದು ಸಂಜೆ 5 ರಿಂದ ಧಾತ್ರಿ ಹೆಗಡೆ ಗೋಳಗೋಡ ಹಾಗೂ ಸಂಗಡಿಗರಿಂದ ಹಿಂದೂಸ್ತಾನಿ ಗಾಯನ, 6ರಂದು ಸಂಜೆ 4ರಿಂದ ಮೇಘಾ ಘಳಿಗಿ ಅವರಿಂದ ಸಿತಾರ ವಾದನ, 5ರಿಂದ ಕಲಾರಾಮ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಶೋಕ ಹೆಗ್ಗೋಡು ಅವರಿಂದ ಕರ್ನಾಟಕ ಸಂಗೀತ, ಅನಿತಾ ವೆಂಕಟೇಶ ಅವರಿಂದ ಗಾಯನ, ರವಿ ಕುಗ್ವೆ ಅವರಿಂದ ಕೊಳಲು ವಾದನ, ಶ್ರೀರಕ್ಷಾ ಹೆಗಡೆ ಹಾಗೂ ಚಿಂತನಾ ಹೆಗಡೆ ಅವರಿಂದ ಯಕ್ಷ ಗಾಯನ, 7ರಂದು ಸಂಜೆ 5ರಿಂದ ದೀಪ್ತಿ ಕಾಳಮಂಜಿ ಅವರಿಂದ ಭಕ್ತಿ ಸಂಗೀತ, 6ರಿಂದ ಶ್ರೀಪಾದ ಭಟ್ಟ ಕಡತೋಕಾ ಅವರಿಂದ ಗೀತರಾಮಾಯಣ, ಗೀತರಾಮಾಯಣಕ್ಕೆ ಪೂರಕವಾಗಿ ನೀರ್ನಳ್ಳಿ ಗಣಪತಿ ಅವರಿಂದ ಆಶುಚಿತ್ರ ರಚನೆ, 7.30ರಿಂದ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ(ರಿ) ಕೊಂಡದಕುಳಿ, ಕುಂಭಾಶಿ ಅವರಿಂದ ‘ಜಾಂಬವತೀ ಕಲ್ಯಾಣ’ ಯಕ್ಷಗಾನ, 8ರಂದು ಸಂಜೆ 5ರಿಂದ ಹರಿಕಥಾರತ್ನ ಸೀತಾರಾಮ ಮುನಿಕೋಟಿ ಅವರಿಂದ ‘ಶಂಕರಾವತಾರ ವೈಭವ’ ಹರಿಕಥೆ, ನಂತರ ಒಡ್ಡೋಲಗ ರಂಗಪರ್ಯಟನ ಹಿತ್ಲಕೈ ಅವರಿಂದ ‘ಧರಣಿಮಂಡಲ’ ನಾಟಕ ಪ್ರದರ್ಶನ ನಡೆಯಲಿದೆ.