ಹೊನ್ನಾವರ: ಅರಣ್ಯವಾಸಿಗಳ ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ಸರಕಾರ ಮೇ 30 ರ ಒಳಗೆ ಪ್ರಮಾಣ ಪತ್ರ ಸಲ್ಲಿಸುವದು ಹಾಗೂ ಉತ್ತರ ಕನ್ನಡ ಜಿಲ್ಲೆಗೂ ಶರಾವತಿ ಅಭಯಾರಣ್ಯ ಪ್ರದೇಶ ವಿಸ್ತರಿಸಿರುವುದರಿಂದ ಉಂಟಾದ ಸಮಸ್ಯೆಗಳನ್ನ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಮೇ 7 ರಂದು ಹೊನ್ನಾವರದಲ್ಲಿ ‘ಅರಣ್ಯವಾಸಿಗಳನ್ನ ಉಳಿಸಿ’- ಬೃಹತ್ ಜಾಥಾ ಸಂಘಟಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಇಂದು ಹೊನ್ನಾವರದ ನ್ಯೂ ಇಂಗ್ಲೀಷ್ ಸ್ಕೂಲ್ ಸಭಾಂಗಣದಲ್ಲಿ ಜರುಗಿದ ಮೇ 7 ರ ಅರಣ್ಯವಾಸಿಗಳನ್ನ ಉಳಿಸಿ- ಬೃಹತ್ ಜಾಥಾದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಅರಣ್ಯ ಭೂಮಿ ಹಕ್ಕಿಗೆ ಹೋರಾಟ ಅವಶ್ಯ. ಅರಣ್ಯವಾಸಿಗಳ ಪರವಾಗಿ ಸರಕಾರದ ಮೇಲೆ ಒತ್ತಡ ತರುವುದು ಅನಿವಾರ್ಯ. ಅರಣ್ಯ ಭೂಮಿ ಹಕ್ಕಿನ ಸಮಸ್ಯೆಗೆ ಕಾನೂನಾತ್ಮಕ ಹೋರಾಟಕ್ಕೆ ಹೋರಾಟಗಾರರ ವೇದಿಕೆಯು ಬದ್ಧವಾಗಿದೆ ಎಂದು ಹೇಳಿದರು.
ಮೇ 7 ರ ಅರಣ್ಯವಾಸಿಗಳನ್ನ ಉಳಿಸಿ- ಬೃಹತ್ ಜಾಥಾವು ಯಶಸ್ವಿಗೊಳಿಸುವ ಮೂಲಕ ಅರಣ್ಯ ಭೂಮಿ ಹೋರಾಟಕ್ಕೆ ಹೊಸ ರೂಪ ಕೊಡಲು ಹೆಚ್ಚಿನ ಸಂಖ್ಯೆಯಲ್ಲಿ ಅರಣ್ಯ ಅತೀಕ್ರಮಣದಾರರು ಭಾಗವಹಿಸುವರೆಂದು ತಾಲೂಕಾ ಅಧ್ಯಕ್ಷ ಚಂದ್ರಕಾಂತ ಕೋಚರೆಕರ, ಹೋರಾಟಗಾರರಾದ ವಾಮನ ನಾಯ್ಕ ಮಂಕಿ, ಪ್ರಶಾಂತ ನಾಯ್ಕ, ಆರ್ ಹೆಚ್ ನಾಯ್ಕ ಮುಂತಾದವರು ಹೇಳಿದರು.
ದಾಖಲೆಗೆ ಆಕ್ಷೇಪ:ಅರಣ್ಯ ಹಕ್ಕು ಮಂಜೂರಿಗೆ ಸಂಬಂಧಿಸಿ ಮೂರು ತಲೆಮಾರಿನ ದಾಖಲೆಗಳ ಸಾಕ್ಶ್ಯತೆ ಒತ್ತಾಯಿಸುವಿಕೆಯ ಕುರಿತು ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾದವು.
ವೇದಿಕೆಯ ಮೇಲೆ ನಗರ ಉಪಾಧ್ಯಕ್ಷ ದಾವುದ್ ಸಾಬ್, ಎಮ್ ಜಿ ನಾಯ್ಕ ಉಪ್ಪೋಣಿ, ಪ್ರಶಾಂತ ನಾಯ್ಕ ಬದ್ನಕೋಡ, ಜಿಲ್ಲಾ ಸಂಚಾಲಕ ರಾಮ ಮರಾಠಿ, ಗಣೇಶ ನಾಯ್ಕ ಯಲಕೊಟಗಿ, ಗಿರೀಶ್ ನಾಯ್ಕ ಚಿತ್ತಾರ, ಅಣ್ಣಪ್ಪ ನಾಯ್ಕ, ಸುರೇಶ ನಾಯ್ಕ ತುಂಬೋಳ್ಳಿ, ವಿನೋಧ ನಾಯ್ಕ, ಸಂಕೇತ ನಾಯ್ಕ ಯಲಕೊಟಗಿ, ರಜಾಕ್ ಸಿಕಂದರ, ದಾವುದ್ ಖಾನ್, ಸೂರ್ಯಕಾಂತ ಮುಂತಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ನಗರ ಅಧ್ಯಕ್ಷ ಸುರೇಶ ಮೇಸ್ತ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು.