ಜೊಯಿಡಾ: ತಾಲ್ಲೂಕಿನ ಗಣೇಶಗುಡಿ ಕಾಳಿ ನದಿಯಲ್ಲಿ ಸ್ಥಗಿತಗೊಳಿಸಲಾಗಿದ್ದ ಜಲಸಾಹಸ ಕ್ರೀಡೆಗಳನ್ನು ಪುನರಾರಂಭಿಸುವ ಕುರಿತಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಾಲೂಕಿನ ಜಲಸಾಹಸ ಕ್ರೀಡೆ ಆಪರೇಟರ್ ಗಳು ಮತ್ತು ಜಟ್ಟಿ ಮಾಲೀಕರ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಕಾಳಿ ನದಿಯಲ್ಲಿ ನಡೆಯುತ್ತಿರುವ ಜಲಸಾಹಸ ಕ್ರೀಡೆಗಳನ್ನು ಒಂದು ವ್ಯವಸ್ಥಿತ ಹಾಗೂ ಸುರಕ್ಷಿತ ಮಾದರಿಯಲ್ಲಿ ನಡೆಸುವ ಬಗ್ಗೆ ಚರ್ಚಿಸಲಾಯಿತು.
ಜಲಸಾಹಸ ಕ್ರೀಡೆಗಳನ್ನು ಒಂದು ವ್ಯವಸ್ಥಿತ ಮಾದರಿಯಲ್ಲಿ ನಡೆಸಲು ಸಂಬಂದಿಸಿದ ಪ್ರಾಧಿಕಾರದಿಂದ ಅನುಮತಿ, ಅನುಮತಿಗೆ ಸಂಬಂಧಿಸಿದ ದಾಖಲೆಗಳು, ಅರ್ಜಿ ನಮೂನೆ, ಪರವಾನಿಗೆ ಶುಲ್ಕದ ವಿವರ, ಜಲಸಾಹಸ ಕ್ರೀಡೆಗಳಿಗೆ ಸಂಬಂಧಸಿದ ತಾತ್ಕಾಲಿಕ ದರಗಳು ಹಾಗೂ ಇತರೆ ಷರತ್ತು ಮತ್ತು ನಿಬಂಧನೆಗಳ ಬಗ್ಗೆ ವಿವರವಾಗಿ ಚರ್ಚಿಸಲಾಯಿತು.
ಜಿಲ್ಲಾ ಪ್ರವಾಸೋದ್ಯಮ ಸಮಿತಿಯು ಒಂದು ಕೇಂದ್ರಿಕೃತ ತಂತ್ರಾಂಶವನ್ನು ಅಳವಡಿಸಿಕೊಂಡು ಜಲಸಾಹಸ ಕ್ರೀಡೆಗಳಿಗೆ ಸಂಬಂಧಿಸಿದ ಟಿಕೆಟ್ ಬುಕಿಂಗ್ ಹಾಗೂ ನಿರ್ವಹಣೆ ಮಾಡಲು ಯೋಜಿಸಿದ್ದು, ತಂತ್ರಾಂಶವನ್ನು ಸಿದ್ದಪಡಿಸಲು ಸ್ವಲ್ಪ ಕಾಲಾವಕಾಶ ಬೇಕಾಗಿರುವದರಿಂದ ಅಲ್ಲಿಯವರೆಗೆ ಎಲ್ಲ ಜಲಸಾಹಸ ಕ್ರೀಡೆ ಆಪರೇಟರಗಳು, ಜಟ್ಟಿ ಮಾಲಿಕರು ಅಗತ್ಯ ದಾಖಲಾತಿಗಳನ್ನು ನಿಗದಿತ ನಮೂನೆಯೊಂದಿಗೆ ಅರ್ಜಿಯನ್ನು ಸಲ್ಲಿಸಿ, ಜಲಸಾಹಸ ಕ್ರೀಡಾ ಚಟುವಟಿಕೆಗಳ ಅನುಮತಿಯನ್ನು ಪಡೆದುಕೊಂಡು ಚಟುವಟಿಕೆಗಳನ್ನು ಶೀಘ್ರವಾಗಿ ಪ್ರಾರಂಭಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಜಲಸಾಹಸ ಕ್ರೀಡೆ ಆಪರೇಟರಗಳು ಮತ್ತು ಜಟ್ಟಿ ಮಾಲಿಕರಿಗೆ ಅನುಕೂಲವಾಗುವಂತೆ ತ್ವರಿತವಾಗಿ ಜಲಸಾಹಸ ಕ್ರೀಡೆಗಳ ಅನುಮತಿ ನೀಡಲು ಅಗತ್ಯವಿದ್ದಲ್ಲಿ ಏಕಗವಾಕ್ಷಿ ಸಮಿತಿ ರಚಿಸಿ ಒಂದೇ ಸೂರಿನಡಿ ವಿವಿಧ ಇಲಾಖೆಯ ನಿರಾಕ್ಷೇಪಣಾ ಪ್ರಮಾಣ ಪತ್ರಗಳನ್ನು ಪಡೆದು ಪರವಾನಿಗೆ ಪ್ರಮಾಣ ಪತ್ರ ವಿತರಣೆ ಮಾಡುವ ವ್ಯವಸ್ಥೆ ಮಾಡಿಕೊಳ್ಳುವ ಬಗ್ಗೆಯೂ ತಿಳಿಸಲಾಯಿತು.
ಜಲಸಾಹಸ ಕ್ರೀಡೆ ಆಪರೇಟರಗಳು, ಜಟ್ಟಿ ಮಾಲಿಕರು ಜೆ.ಎಲ್.ಆರ್ ವತಿಯಿಂದ ನಡೆಯುತ್ತಿರುವ ರಾಫ್ಟೀಂಗ್ ಅನ್ನು ಹೊರತುಪಡಿಸಿ, ಒಂದು ವೇಳೆ ಖಾಸಗಿಯಾಗಿ ತಮಗೂ ಮಧ್ಯಮ ದೂರದ ರಾಫ್ಟೀಂಗ್ ನಡೆಸಲು ಅವಕಾಶ ನೀಡಲು ಕೋರಿದರೆ, ಅವರಿಗೆ ಕೂಡಾ ವ್ಯವಸ್ಥಿತ ಮಾದರಿಯಲ್ಲಿ ನಡೆಸಲು ಅನುಮತಿ ನೀಡುವ ಬಗ್ಗೆ ಯೋಜಿಸಲಾಗುತ್ತಿದ್ದು, ಶೀಘ್ರವೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನಾ ಪೆನ್ನೇಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅಜ್ಜಯ್ಯ ಹಾಗೂ ಬಾಲಚಂದ್ರ, ಉಪವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೋಡ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಜಯಂತ ಎಚ್.ವಿ., ಡಿವೈಎಸ್ಪಿ ಗಣೇಶ ಎಂ. ಹಾಗೂ ಇತರರು ಹಾಜರಿದ್ದರು.