ಜೊಯಿಡಾ: ತಾಲೂಕಿನ ಯರಮುಖ ಶ್ರೀ ಸೋಮೇಶ್ವರ ಸಭಾಭವನದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಸಪ್ತಸ್ವರ ಸೇವಾ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಗೀತ,ನೃತ್ಯೋತ್ಸವ ಕಾರ್ಯಕ್ರಮವನ್ನು ಗ್ರೀನ್ ಇಂಡಿಯಾ ನಿರ್ದೇಶಕ ಡಾ.ಮಹೇಂದ್ರಕುಮಾರ್ ಬಿ.ಪಿ. ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ನೃತ್ಯ ಪ್ರಕಾರಗಳು ಉಳಿದು ಬೆಳೆದು ಬಂದಿದ್ದೇ ಆದಿವಾಸಿಗಳಿಂದ. ಹಾಗಾಗಿ ಆದಿವಾಸಿಗಳ ನೃತ್ಯಗಳ ಬಗ್ಗೆ ಯಾರಾದರೂ ಅಧ್ಯಯನ ಮಾಡಿದರೆ ನಾನು ಸಹಕಾರ ನೀಡಲು ಸಿದ್ಧನಿದ್ದೇನೆ ಎಂದು ಹೇಳಿದರು.ನೃತ್ಯ ಸಂಗೀತ ಪರಿಸರದ ಅವಿಭಾಜ್ಯ ಅಂಗಗಳು. ಸೃಷ್ಟಿಯಲ್ಲಿ ಈ ಅಂಶಗಳು ಒಳಗೊಂಡಿವೆ. ನೃತ್ಯಗಳಲ್ಲಿ 32 ಪ್ರಕಾರಗಳಿವೆ. ಶಿವನ ತಾಂಡವ ನೃತ್ಯವೇ ಇವುಗಳಲ್ಲಿ ಮೇರು ನೃತ್ಯ. ಜೊಯಿಡಾ ತಾಲೂಕಿನ ಹಿಂದುಳಿದ ಈ ಭಾಗದಲ್ಲಿ ರಾಜ್ಯದ ಸಂಗೀತ ನೃತ್ಯ ಅಕಾಡಮಿಯೆ ಬಂದಿರುವುದು ನನಗೆ ಅತ್ಯಂತ ಸಂತಸವಾಗಿದೆ ಎಂದರು.
ಸಂಗೀತ ನಾಟಕ ಅಕಾಡೆಮಿಯ ಸದಸ್ಯೆ ಹೇಮಾ ಮಾತನಾಡಿ, ಸಂಸ್ಕೃತಿ- ಸಂಸ್ಕಾರಗಳು ಬೆಳೆಯಲು ಕಲೆ ಸಂಗೀತಗಳು ಸಾಧನವಾಗುತ್ತಿವೆ. ಸಂಸ್ಕೃತಿ, ಕಲೆಗಳು ಶ್ರೀಮಂತವಾಗಲು ಕಲಾ ಪೋಷಕರಿಂದ ಮಾತ್ರ ಸಾಧ್ಯ. ಆ ಕೆಲಸ ಮಾಡುವವರಿಗೆ ಅಕಾಡೆಮಿ ಸಹಕಾರ ನೀಡುವುದು ಎಂದರು.
ಸಹಕಾರಿ ಸಂಘದ ನಿವೃತ್ತ ಕಾರ್ಯನಿರ್ವಾಹಕ ಎಸ್.ಟಿ.ದಾನಗೇರಿ ಮಾತನಾಡಿ, ಕಲೆಗಳು ನಶಿಸಿ ಹೋಗುತ್ತಿರುವುದು ಈ ಸಂದರ್ಭದಲ್ಲಿ ಕಲೆಯನ್ನು ಬೆಳಕಿಗೆ ತರಲು ಪ್ರಯತ್ನಿಸುವ ಸಂಘಟಕರಿಗೆ ಗ್ರಾಮಸ್ಥರ ಸಹಕಾರ ಬೇಕು ಎಂದರು.
ವೇದಿಕೆಯಲ್ಲಿ ಅಕಾಡೆಮಿಯ ಟಿ.ರಾಜಾರಾಮ, ನಾಟಕ ಅಕಾಡೆಮಿ ಸದಸ್ಯ ಬಿ.ವಿ.ಪರಶುರಾಮ, ಸದಸ್ಯೆ ಸುಜಾತ, ಅಂಜಲಿ ಹೊಸಪೇಟೆ, ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಅನಂತ ದೇಸಾಯಿ ಇತರರು ಇದ್ದರು.
ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್.ಶಿವರುದ್ರಪ್ಪ ಪ್ರಾಸ್ತಾವಿಕ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಸಪ್ತಸ್ವರ ಸೇವಾ ಸಂಸ್ಥೆಯ ಅಧ್ಯಕ್ಷೆ ಸುಮಂಗಲಾ ದೇಸಾಯಿ ನಿರ್ವಹಿಸಿದರು. ಸಂಗೀತ ಕಾರ್ಯಕ್ರಮದಲ್ಲಿ ಬೆಂಗಳೂರಿನ ಗಣೇಶ ದೇಸಾಯಿ, ಗುಂದದ ಸುಧಾಮ ದಾನಗೇರಿ ಸೇರಿದ ತಂಡ ಜನರನ್ನು ರಂಜಿಸಿದರು. ಸುಜಾತ ಹರಿಹರ ತಂಡದಿಂದ ಗಮಕ ಸಿಂಚನ, ಕೂಡಗಿಯ ಅನುರಾಧಾ ತಂಡದಿಂದ ಸುಗಮ ಸಂಗೀತ, ಅಂಜಲಿ ತಂಡದವರಿಂದ ಭರತನಾಟ್ಯ, ಸ್ಥಳೀಯ ವಿವಿಧ ತಂಡಗಳಿಂದ ನಾಟ್ಯಗಳು ನಡೆದವು.