ಶಿರಸಿ: ದೇವಸ್ಥಾನಗಳಿಗೆ ನಿರ್ವಹಣಾಧಿಕಾರಿ ಹಾಗೂ ವ್ಯವಸ್ಥಾಪನಾ ಸಮಿತಿ ರಚನೆ ಕೈಬಿಡಬೇಕು ಎಂದು ಸೋಂದಾ ಶ್ರೀ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಸರಕಾರವನ್ನು ಆಗ್ರಹಿಸಿದರು.
ಸ್ವರ್ಣವಲ್ಲೀಯಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯಗಳ ಮಹಾಮಂಡಳದ ಪ್ರತಿನಿಧಿಗಳ
ಸಭೆಯ ಸಾನ್ನಿಧ್ಯ ನೀಡಿ ನುಡಿದ ಶ್ರೀಗಳು, ಕೆಲವು ಸಿ ವರ್ಗದ ದೇವಾಲಯಗಳಿಗೆ ಮುಜರಾಯಿ ಇಲಾಖೆಯಿಂದ ದೇವಾಲಯಗಳ ಆಡಳಿತವನ್ನು ವಹಿಸಿಕೊಳ್ಳುವ ಕುರಿತು ಹಾಗೂ ವ್ಯವಸ್ಥಾಪನಾ ಸಮಿತಿ ರಚಿಸುವ ಕುರಿತು ನೊಟೀಸ್ ಜಾರಿ ಮಾಡುತ್ತಿದ್ದು ಈ ಪರಿಸ್ಥಿತಿಯಿಂದ ಆತಂಕಗೊಂಡ ಹಿಂದೂ ಧಾರ್ಮಿಕ ದೇವಾಲಯಗಳ ಪ್ರತಿನಿಧಿಗಳ ಜೊತೆ ಸಮಾಲೋಚಿಸಿದ ಶ್ರೀಗಳು, ಕುರಿತು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಮನವಿಯನ್ನು ಮಹಾ ಮಂಡಳದ ವತಿಯಿಂದ ಸಲ್ಲಿಸಬೇಕು ಎಂದು ಹೇಳಿದರು.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಈ ಕಾನೂನನ್ನು ರಾಜ್ಯದ ಉಚ್ಚ ನ್ಯಾಯಾಲಯವು ರದ್ದುಗೊಳಿಸಿದೆ. ಆದರೆ ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಹಂತದಲ್ಲಿ ದೇವಸ್ಥಾನಗಳ ನಿರ್ವಹಣೆಗೆ ಅಧಿಕಾರಿಗಳ ,ನೇಮಕ ಮಾಡುವುದು ಹಾಗೂ ಇಲಾಖೆಯಿಂದ ವ್ಯವಸ್ಥಾಪನಾ ಸಮಿತಿ ರಚಿಸುವ ಪ್ರಕ್ರಿಯೆ ಸರಿಯಲ್ಲ ಎಂದು ಹೇಳಿದರು.
ಆಡಳಿತಾಧಿಕಾರಿಯನ್ನು ನೇಮಿಸುವ, ದೇವಾಲಯಗಳಿಗೆ ಸರಕಾರದಿಂದಲೇ ವ್ಯವಸ್ಥಾಪನಾ ಸಮಿತಿ ರಚಿಸುವ ಪ್ರಕ್ರಿಯೆಯನ್ನು ಕೂಡಲೇ ತಡೆಹಿಡಿಯಬೇಕು.ಹಾಗಂತ ದೇವಸ್ಥಾನಗಳ ನಿರ್ವಹಣೆಗೆ ಯಾವುದೇ ಕಾನೂನು ಬೇಡವೆಂದು ನಮ್ಮ ಆಶಯವಲ್ಲ. ಆದರೆ ಸರಕಾರೀಕರಣ ಸರಿಯಲ್ಲ. ಭಕ್ತರ ಕೈಯಲ್ಲಿ ದೇವಸ್ಥಾನದ ಆಡಳಿತ ಇರುವಂತಾಗಬೇಕು. ಅಂತಹ ಸರ್ವಸಮ್ಮತವಾದ ಕಾನೂನನ್ನು ರೂಪಿಸಲು ಸರಕಾರ ಮುಂದಾಗಬೇಕು ಎಂದು ಆಗ್ರಹಪಡಿಸಿದರು.
ಎಲ್ಲಾ ದೇವಾಲಯಗಳಿಗೂ ಈ ವಿಷಯದ ಕುರಿತು ಪತ್ರಿಕಾ ಪ್ರಕಟಣೆಯ ಮೂಲಕ ಅರಿವು ಮೂಡಿಸುವುದು. ಸರಕಾರದಿಂದ ಹಿಂದೂ ದೇವಾಲಯಗಳ ಹಾಗೂ ಧಾರ್ಮಿಕ ಸಂಸ್ಥೆಗಳ ಮೇಲಾಗುತ್ತಿರುವ ನಿರಂತರ ದೌರ್ಜನ್ಯದ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚಿಸಿ ಹಿಂದೂ ದೇವಾಲಯಗಳು ಹಾಗೂ ಧಾರ್ಮಿಕ ಸಂಸ್ಥೆಗಳ ಸ್ವಾಯತ್ತತೆ ಹಾಗೂ ಸ್ವಾತಂತ್ರ್ಯಕ್ಕೆ ಧಕ್ಕೆ ಬರದ ರೀತಿಯಲ್ಲಿ ಅಗತ್ಯ ಕ್ರಮ ವಹಿಸುವ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳ, ಸ್ಪೀಕರ್, ಸಚಿವರ, ಸಂಸದರ ಗಮನಕ್ಕೆ ತರಬೇಕು ಎಂಬ ತೀರ್ಮಾನ ಕೈಗೊಳ್ಳಲಾಯಿತು.
ಮಹಾಮಂಡಳದ ಕಾರ್ಯಾಧ್ಯಕ್ಷ ರವೀಂದ್ರ. ಜಿ. ನಾಯ್ಕ, ಧಾರ್ಮಿಕ ದತ್ತಿ ಕಾಯಿದೆಯು ರದ್ದಾಗಿದ್ದು ಸರ್ವೋಚ್ಚ ನ್ಯಾಯಲಯದಲ್ಲಿ ಸರಕಾರವು ಸಲ್ಲಿಸಿದ ಮೇಲ್ಮವಿ ವಿಚಾರಣೆಯ ಹಂತದಲ್ಲಿದೆ. ಈ ಸಂದರ್ಭದಲ್ಲಿ ಇಂತಹ ಕಾನೂನು ಪ್ರಕ್ರಿಯೆ ಸಮಂಜಸವಾಗಿ ಕಾಣುತ್ತಿಲ್ಲ ಎಂದರು.