ಶಿರಸಿ: ತಾಲೂಕಿನ ಬೊಮ್ಮನಳ್ಳಿಯ ಶ್ರೀ ಪರಿವಾರ ರಾಮಲಿಂಗೇಶ್ವರ ಶಕ್ತಿ ದೇವಸ್ಥಾನದಲ್ಲಿ ಶ್ರೀ ಶಕ್ತಿ ದೇವರ ಪ್ರತಿಷ್ಠಾಪನಾ ಮಹೋತ್ಸವ ಏ.27ರಿಂದ ಏ.29ರ ವರೆಗೆ ಮೂರು ದಿನಗಳ ಕಾಲ ನಡೆಯಲಿದೆ.
ವೇದಮೂರ್ತಿ ಕುಮಾರ್ ಭಟ್ ಕೊಳಗೀಬೀಸ್ ಆಚಾರ್ಯತ್ವದಲ್ಲಿ ನಡೆಯುವ ಕಾರ್ಯಕ್ರಮದ ಮೊದಲನೇ ದಿನ ಗಣಪತಿ ಹೋಮ, ನವಗ್ರಹ ಶಾಂತಿ,ಜಲಾಧಿವಾಸ,ಸಪ್ತಶುದ್ಧಿ, ಕುಂಡ ಸಂಸ್ಕಾರ,ಅಗ್ನಿ ಜನನ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮದ ಎರಡನೇ ದಿನ ಸ್ವರ್ಣವಲ್ಲೀ ಶ್ರೀ ಶ್ರೀಮದ್ ಗಂಗಾಧರೇಂದ್ರ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಶ್ರೀ ದೇವರ ಪ್ರತಿಷ್ಠಾಪನೆ ನಡೆಯಲಿದ್ದು ನಂತರ ಶ್ರೀಗಳ ಪಾದಪೂಜೆ,ಶ್ರೀಗಳ ಆಶೀರ್ವಚನ,ಅಷ್ಟಬಂಧ ಹಾಗೂ ಕೊನೆಯದಿನ ಕಲಾ ಹೋಮ, ರುದ್ರ ಹೋಮ,ಪೂರ್ಣಾಹುತಿಯೊಂದಿಗೆ ದೇವತಾ ಕಾರ್ಯಗಳು ಸಂಪನ್ನವಾಗಲಿವೆ.
ಏ.29 ಶುಕ್ರವಾರ ಮಧ್ಯಾಹ್ನ 3.30ರಿಂದ ಧರ್ಮಸಭೆ ಜರುಗಲಿದ್ದು ಸಭೆಯ ಅಧ್ಯಕ್ಷತೆಯನ್ನು ದೇವಸ್ಥಾನದ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ,ಸಂಸದ ಅನಂತಕುಮಾರ್ ಹೆಗಡೆ,ಕಾರ್ಮಿಕ ಸಚಿವ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್,ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿರಲಿದ್ದಾರೆ.
ವಿ.ಗಣಪತಿ ಭಟ್ ಕಿಬ್ಬಳ್ಳಿ ಇವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು,ಎಲ್ಲ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು-ಮನ-ಧನಗಳಿಂದ ಸಹಕರಿಸಿ,ಪ್ರಸಾದ ಸ್ವೀಕರಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗಲು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.