ಕಾರವಾರ: ನಶಿಸಿಹೋಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕು. ಈ ನಿಟ್ಟಿನಲ್ಲಿ ಯುವಕ ಸಂಘಟನೆಗಳು ಮುಂದೆ ಬರಬೇಕು. ಗ್ರಾಮೀಣ ಕ್ರೀಡೆಗಳನ್ನು ಸಂಘಟಿಸಲು ಅಗತ್ಯ ನೆರವು ನೀಡಲಾಗುವುದು ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ತಾಲ್ಲೂಕಿನ ಮುದಗಾದಲ್ಲಿ ಶ್ರೀ ಜೈಮಾರುತಿ ಮುದಗಾ ಕಾಲೊನಿ ಹಾಗೂ ಊರ ನಾಗರಿಕರು ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಹಗ್ಗಜಗ್ಗಾಟ ಸ್ಫರ್ಧೆ ಉದ್ಘಾಟಿಸಿ ಅವರು ಮಾತನಾಡಿ ಕೇವಲ ಕ್ರಿಕೆಟ್, ವಾಲಿಬಾಲ್ಗಳಷ್ಟೇ ಅಲ್ಲ ಗ್ರಾಮೀಣ ಕ್ರೀಡೆಗಳನ್ನು ಸಂಘಟಿಸುವ ಮೂಲಕ ಅವುಗಳನ್ನು ಉಳಿಸಿ ಬೆಳೆಸಬೇಕು. ಗ್ರಾಮೀಣ ಕ್ರೀಡೆಗಳು ಸ್ಪರ್ಧೆಯೊಂದಿಗೆ ಮನರಂಜನೆಯನ್ನೂ ಒದಗಿಸುತ್ತವೆ. ಮುದಗಾದಂತಹ ಚಿಕ್ಕ ಗ್ರಾಮದಲ್ಲಿ ರಾಜ್ಯಮಟ್ಟದ ಹಗ್ಗಜಗ್ಗಾಟ ಸ್ಪರ್ಧೆಯನ್ನು ಹಮ್ಮಿಕೊಂಡಿರುವುದು ಸಂತಸದ ವಿಚಾರ ಎಂದರು.
ಅಮದಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ನಾಯ್ಕ, ಉಪಾಧ್ಯಕ್ಷ ರವಿ ದುರ್ಗೆಕರ್, ಗ್ರಾ.ಪಂ ಸದಸ್ಯೆ ಭಾರತಿ ಬೊಬ್ರುಕರ್, ಕಲಾವತಿ ದುರ್ಗೆಕರ್, ಸರಸ್ವತಿ ತಾಂಡೇಲ್, ಹಾರವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಟಾಕೇಕರ್, ಸದಸ್ಯ ಉಮೇಶ್ ಕಾಂಚನ್, ಸಂತೋಷ ದುರ್ಗೇಕರ್, ಬಾವಿಕೇರಿ ಗ್ರಾ.ಪಂ. ಸದಸ್ಯ ವೆಂಕಟೇಶ್ ದುರ್ಗೆಕರ್, ತದಡಿ ಸಹಕಾರಿ ಸಂಘದ ಅಧ್ಯಕ್ಷ ಉಮಾಕಾಂತ ಹೊಸಕಟ್ಟಾ, ಮೀನುಗಾರ ಯುವ ಮುಖಂಡ ವಿನಾಯಕ ಹರಿಕಂತ್ರ, ಮುದಗಾ ಕಾಲೊನಿ ಬಿಜೆಪಿ ಬೂತ್ ಕಮಿತಿ ಅಧ್ಯಕ್ಷ ಅಜಯ ದುರ್ಗೇಕರ್, ತೋಕು ಹರಿಕಂತ್ರ, ಪಾಂಡುರಂಗ ಮಾಂಗ್ರೆ, ಜಿಲ್ಲಾ ಯುವ ಪ್ರಶಸ್ತಿ ವಿಜೇತ ಶ್ರೀನಿವಾಸ ಅಂಬಿಗ ಹಾಜರಿದ್ದರು.
ಕೋಟಿ ಜಟ್ಟಿಗೇಶ್ವರ ತಂಡ ಪ್ರಥಮ: ಗಂಗೊಳ್ಳಿಯ ಕೋಟಿ ಜಟ್ಟಿಗೇಶ್ವರ ತಂಡ ಪ್ರಥಮ, ಹೊನ್ನಾವರದ ಕರಿಕಾನ ಪರಮೇಶ್ವರಿ ದ್ವಿತೀಯ, ಶ್ರೀ ಮಹಾಕಾಳಿ ಗಂಗೊಳ್ಳಿ ತೃತೀಯ, ಹೊನ್ನಾವರ ವೀರಾಂಜನೇಯ ನಾಲ್ಕನೇ, ಕೋಟಿ ಜಟ್ಟಿಗೇಶ್ವರ- ಬಿ ಐದನೇ ಮತ್ತು ಹಳದೀಪುರ ತಾರಿಬಾಗಿಲಿನ ಜಲದುರ್ಗಾ ಆರನೇ ಸ್ಥಾನ ಪಡೆಯಿತು. ಮಹಿಳೆಯರ ವಿಭಾಗದಲ್ಲಿ ಹಳದೀಪುರದ ಜೈ ಗಣೇಶ್ ಪ್ರಥಮ ಹಾಗೂ ಕುಮಟಾ ಶಶಿಹಿತ್ತಲಿನ ಶ್ರೀ ಮಹಾಸತಿ ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರ ವಿಭಾಗದಲ್ಲಿ 10 ಮತ್ತು ಪುರುಷರ ವಿಭಾಗದಲ್ಲಿ 12 ತಂಡಗಳು ಭಾಗವಹಿಸಿದ್ದವು.