ಶಿರಸಿ: ನಗರದ ರಾಯರಪೇಟೆ ಶ್ರೀ ವೆಂಕಟರಮಣ ಸಭಾಭವನದಲ್ಲಿ ನಡೆದ ಸಾಯಿ ಸಂಗೀತ ವಿದ್ಯಾಲಯದ 39ನೇ ವಾರ್ಷಿಕ ಸಮ್ಮೇಳನದಲ್ಲಿ ಇತ್ತೀಚೆಗೆ ಅಗಲಿದ ಸಂಗೀತ ದಿಗ್ಗಜರ ಕುರಿತಾಗಿ ‘ಸ್ವರಾಂಜಲಿ’ ಕಾರ್ಯಕ್ರಮ ಭಾವಪೂರ್ಣವಾಗಿ ಯಶಸ್ವಿಯಾಗಿ ನಡೆಯಿತು.
ಪ್ರೊ .ಎಂ .ಎ. ಹೆಗಡೆ ದಂಟಕಲ್, ಪಂ.ರಾಜನ್ ಮಿಶ್ರಾ, ದಿ.ಗಜಾನನ ಹೆಗಡೆ ಗಿಳಿಗುಂಡಿ, ಶ್ರೀಮತಿ ರಾಧಾ ಪಡಿಗೇರೆಯವರ ನಿಧನದ ಕುರಿತು ಒಂದು ನಿಮಿಷದ ಮೌನಾಚರಣೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಶ್ರೀಮತಿ ರಾಧಾ ಪಡಿಗೇರೆಯವರ ಕುರಿತಾಗಿ ಡಾ.ರಾಮಕೃಷ್ಣ ಬಿಳಗಿಕರ ಮತ್ತು ಧಾರವಾಡದ ಶ್ರೀಮತಿ ರಾಧಾ ದೇಸಾಯಿಯವರು ಅವರ ಸಂಗೀತ ಅಭಿಮಾನ, ಸಾಧಕಿನೆ ಕುರಿತು ಮಾತನಾಡಿದರು. ನಂತರದಲ್ಲಿ ಪಂ.ಎಂ.ಪಿ.ಹೆಗಡೆ ಪಡಿಗೆರೆಯವರು ಪ್ರೊ.ದಂಟಕಲ್ ಹಾಗೂ ಪಂ.ಮಿಶ್ರಾ ಮತ್ತು ವಿ.ಗಿಳಿಗುಂಡಿಯವರ ಕುರಿತಾಗಿ ಅವರೊಂದಿಗಿನ ಒಡನಾಟ ಮತ್ತು ಸಾಧನೆ ಕುರಿತು ವಿವರಿಸಿದರು.
ವೇದಿಕೆಯಲ್ಲಿ ಹಿರಿಯ ನ್ಯಾಯವಾದಿ ಪಿ.ಜಿ.ಹೆಗಡೆ ಜಾನ್ಮನೆ, ಗುರುಪತ್ನಿ ಶ್ರೀಮತಿ ಯಮುನಾ ರಂಗನಾಥ ಹೆಗಡೆ ಶೀಗೆಹಳ್ಳಿ ಉಪಸ್ಥಿತರಿದ್ದರು. ತದನಂತರದಲ್ಲಿ ನಡೆದ ಸ್ವರಾಂಜಲಿ ಗಾನನಮನದಲ್ಲಿ ಆರಂಭಿಕವಾಗಿ ಖ್ಯಾತ ಗಾಯಕಿ ಶ್ರೀಮತಿ ರಾಧಾ ದೇಸಾಯಿ ಧಾರವಾಡರವರು ಒಂದು ತಾಸಿಗೂ ಹೆಚ್ಚು ರಾಗವನ್ನು ವಿಸ್ತಾರಗೊಳಿಸುತ್ತ ಹಾಡಿ ಅಗಲಿದ ದಿವ್ಯ ಚೇತನಗಳಿಗೆ ಗಾನನಮನ ಸಲ್ಲಿಸಿದರು. ಇವರ ಗಾನಕ್ಕೆ ತಬಲಾದಲ್ಲಿ ಗಣೇಶ ಗುಂಡ್ಕಲ್, ಹಾರ್ಮೋನಿಯಂನಲ್ಲಿ ಅಜೇಯ ಹೆಗಡೆ ವರ್ಗಾಸರ ಸಾಥ್ ನೀಡಿದರು.
ಆಮಂತ್ರಿತ ಕಲಾವಿದರಾದ ಭಾರ್ಗವ ಹೆಗಡೆ ಶೀಗೇಹಳ್ಳಿಯವರು ತಮ್ಮ ಸೀತಾರ್ ವಾದನದ ಮೂಲಕ ವಾದನ ನಮನ ಸಲ್ಲಿಸಿದರೆ ತಬಲಾದಲ್ಲಿ ಸಂದೇಶ ಹೆಗಡೆ ಸಹಕರಿಸಿದರು.
ನಂತರದಲ್ಲಿ ಖ್ಯಾತ ಗಾಯಕ ಶ್ರೀಧರ ಹೆಗಡೆ ಕಲ್ಬಾಗ್ ಹೊನ್ನಾವರರವರು ತಮ್ಮ ಸಂಗೀತ ಕಚೇರಿ ನಡೆಸಿಕೊಟ್ಟು ರಾಗ್ ಜೋಗನ್ನು ವಿಸ್ತಾರಗೊಳಿಸಿದರು. ನಂತರ ಕೆಲವೊಂದು ದಾಸರ ಭಜನೆ ಹಾಡಿದರು. ತಬಲಾದಲ್ಲಿ ಗುಂಡ್ಕಲ್ ಗಣೇಶ್ ಭಾಗವತ, ಹಾರ್ಮೋನಿಯಂನಲ್ಲಿ ವರ್ಗಾಸರ ಅಜೇಯ್ ಹೆಗಡೆ ಹಾಗೂ ತಬಲಾದಲ್ಲಿ ರಾಮಚಂದ್ರ ಭಟ್ಟ ಸಹಕರಿಸಿದರು.
‘ಸ್ವರಾಂಜಲಿ’ಗಾನ ನಮನದ ಕೊನೆಯ ಹಂತವಾಗಿ ಪಂ.ಎಂ.ಪಿ.ಹೆಗಡೆ ಪಡಿಗೆರೆಯವರು ರಾಗ್ ಭೈರವಿಯಲ್ಲಿ ಜನಪ್ರಿಯ ಧತ್ತ ಭಜನೆಯೊಂದಿಗೆ ತರಾನಾ ಪ್ರಸ್ತುತಗೊಳಿಸಿ ಒಟ್ಟಾರೆ ಕಾರ್ಯಕ್ರಮ ಸಮಾಪ್ತಿಗೊಳಿಸಿದರು.
ಮುಂಜಾನೆಯಿಂದಲೇ ಆರಂಭಗೊಂಡ ಸ್ವರಾಂಜಲಿಯಲ್ಲಿ ಶ್ರೀ ಸಾಯಿ ಸಂಗೀತ ವಿದ್ಯಾಲಯದ ಹಿರಿಯ-ಕಿರಿಯ ವಿದ್ಯಾರ್ಥಿಗಳು ತಮ್ಮ ಗಾಯನ ಪ್ರಸ್ತುತಗೊಳಿಸಿದರು. ಅವರಿಗೆ ತಬಲಾದಲ್ಲಿ ವಿಜಯೇಂದ್ರ ಹೆಗಡೆ ಅಜ್ಜೀಬಳ, ಆನಂದ ಭಟ್ಟ ದಾಯಿಮನೆ, ಕಿರಣ ಹೆಗಡೆ ಕಾನಗೋಡ್ ಹಾಗೂ ಸಂವಾದಿನಿಯಲ್ಲಿ ಕೆ.ಪಿ.ಹೆಗಡೆ ದಾಸನಕೊಪ್ಪ ಮತ್ತಿತರರು ಸಹಕಾರ ನೀಡಿದರು.
ಸಾಯಿ ಸಂಗೀತ ವಿದ್ಯಾಲಯದ ಪ್ರಾಚಾರ್ಯ ಹಿರಿಯ ಗಾಯಕರಾದ ಎಂ.ಪಿ.ಹೆಗಡೆ ಪಡಿಗೆರೆ ಆರಂಭದಲ್ಲಿ ಸ್ವಾಗತಿಸಿದರೆ, ಗಿರಿಧರ ಕಬ್ನಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.