ಶಿರಸಿ: ಕೃತಿಯೊಂದು ಜೀವನದ ಮುಸ್ಸಂಜೆಯಲ್ಲಿ ಇರುವವರಿಗೆ ನೆರವಾಗಿದೆ. “ಮಿಂಚಿ ಮರೆಯಾದವಳು” ಕಥಾಸಂಕಲನವನ್ನು ಬಹುತೇಕ ಓದುಗರು ವೃದ್ಧಾಶ್ರಮದ ವೃದ್ಧರಿಗೆ ನೆರವಾಗುವುದಕ್ಕಾಗಿ ಖರೀದಿಸಿದ್ದರು. ಕೆಲ ಓದುಗರು ಎರಡರಿಂದ ಐದು ಪ್ರತಿಗಳ ವರೆಗೂ ಇದನ್ನು ಖರೀದಿಸಿದ್ದರು. ಪತ್ರಕರ್ತ ವಿನಾಯಕ ಹೆಗಡೆ ಅವರ “ಮಿಂಚಿ ಮರೆಯಾದವಳು” ಕಥಾ ಸಂಕಲನ ಇಂತಹ ಒಂದು ಘಟನೆಗೆ ಸಾಕ್ಷಿಯಾಗಿದೆ. ಪುಸ್ತಕದ ಪ್ರತಿಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಹಂಸ ಸೇವಾ ಟ್ರಸ್ಟ್ ರಿ. ಮೂಲಕ ವೃದ್ಧಾಶ್ರಮಕ್ಕೆ ನೀಡುವುದಾಗಿ ವಿನಾಯಕ ಹೆಗಡೆ ಪ್ರಕಟಿಸಿದ್ದರು. ಹಲವು ಓದುಗರು ಈ ಸಮಾಜ ಸೇವಾ ಕಾರ್ಯದಲ್ಲಿ ಭಾಗಿಯಾದರು.
ಏ. 21ರಂದು ಹಂಸ ಸೇವಾ ಟ್ರಸ್ಟ್ ಟ್ರಸ್ಟಿ ತನುಜಾ ಹೆಗಡೆ ಶಿರಸಿ ಹತ್ತಿರದ ಅಬ್ರಿಮನೆಯಲ್ಲಿ ಲತಿಕಾ ಭಟ್ ಅವರು ನಡೆಸುತ್ತಿರುವ ಸುಯೋಗಾಶ್ರಮ ದಲ್ಲಿ ಪುಸ್ತಕ ಖರೀದಿಸಿದ ಓದುಗರಿಂದ ಸಂಗ್ರಹವಾದ ₹5850 ಮೌಲ್ಯದ ದಿನಸಿಯನ್ನು ಹಸ್ತಾಂತರಿಸಿದರು.
ಈ ಸಮಯದಲ್ಲಿ ಲತಿಕಾ ಭಟ್ ಮಾತನಾಡಿ ಈ ರೀತಿಯಾಗಿ ಪುಸ್ತಕವನ್ನು ಮಾರಾಟ ಮಾಡಿ ವೃದ್ಧಾಶ್ರಮಕ್ಕೆ ನೀಡುವ ಕಲ್ಪನೆ ನನಗೆ ಹೊಸತು ಇಂತಹ ಮನಸ್ಥಿತಿ ಇನ್ನಷ್ಟು ಬೆಳೆದು ಬರಲಿ ಎಂದರು. ಹಂಸ ಸೇವಾ ಟ್ರಸ್ಟ್ ಟ್ರಸ್ಟಿ ತನುಜಾ ಹೆಗಡೆ ಪುಸ್ತಕ ಖರೀದಿಸಿ ನೆರವಾದ ಎಲ್ಲ ಓದುಗರಿಗೆ, ಸಮಾಜ ಸೇವಾ ಸೇವಾಕಾರ್ಯದಲ್ಲಿ ಸುದ್ದಿ ಪ್ರಕಟಿಸಿ ಸಹಕಾರ ನೀಡಿದ ಎಲ್ಲಾ ಮಾಧ್ಯಮ ಮಿತ್ರರಿಗೆ ಧನ್ಯವಾದ ವ್ಯಕ್ತಪಡಿಸಿದರು. ಪುಸ್ತಕ ಖರೀದಿಸಿ ನೆರವಾದವರ ಯಾದಿಯನ್ನು ಈ ಸಂದರ್ಭದಲ್ಲಿ ಓದಲಾಯಿತು ಅಲ್ಲದೆ ಹಂಸ ನ್ಯೂಸ್ ಜಾಲತಾಣದಲ್ಲಿ ಸೇವಾಕಾರ್ಯದಲ್ಲಿ ನೆರವಾದವರು ಎಂಬ ಕಾಲಂನಲ್ಲಿ ಪ್ರಕಟಿಸಲಾಗಿದೆ.