ಕುಮಟಾ ; ಕೆನರಾ ಕಾಲೇಜು ಸೊಸೈಟಿ(ರಿ)ಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ ಕುಮಟಾ, ಉತ್ತರ ಕನ್ನಡ ಜಿಲ್ಲಾ ಶಿಕ್ಷಕ/ಶಿಕ್ಷಕಿಯರ ನಿರಂತರ ಸಹಾಯವಾಣಿ (ರಿ) ಶಿರಸಿ, ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಹಾಗೂ ಶಿಕ್ಷಕೇತರ ಒಕ್ಕೂಟ(ರಿ) ಇವರ ಸಹಯೋಗದಲ್ಲಿ ಶಿಕ್ಷಕ/ಶಿಕ್ಷಕಿಯರ ಬೃಹತ್ ಉದ್ಯೋಗ ಮೇಳ, ಅತ್ಯುತ್ತಮ ಶಿಕ್ಷಣ ಸಂಸ್ಥೆ ಹಾಗೂ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏ.24 ರವಿವಾರದಂದು ಆಯೋಜಿಸಲಾಗಿದೆ. ಈ ಉದ್ಯೋಗ ಮೇಳದಲ್ಲಿ ಪಿ.ಯು.ಸಿ 2ನೇ ವರ್ಷ ಪಾಸಾದವರಿಂದ ಹಿಡಿದು ಪಿ.ಎಚ್.ಡಿ ಯವರೆಗೆ ಪದವಿ ಮುಗಿಸಿದ ವಿದ್ಯಾರ್ಥಿಗಳು ಭಾಗವಹಿಸಬಹುದು.
ಇದರಲ್ಲಿ ರಾಜ್ಯಾದ್ಯಂತ ಇರುವ ಹಲವಾರು ಶಿಕ್ಷಣ ಸಂಸ್ಥೆಗಳು ಈಗಾಗಲೇ ನೊಂದಣಿ ಮಾಡಿರುತ್ತಿದ್ದು ಇನ್ನೂ ಹಲವಾರು ಶಿಕ್ಷಣ ಸಂಸ್ಥೆಗಳು ನೋಂದಣಿ ಮಾಡುವ ನಿರೀಕ್ಷೆ ಇದೆ. ವಿದ್ಯಾರ್ಥಿಗಳು 300ಕ್ಕೂ ಅಧಿಕವಾಗಿ ಭಾಗವಹಿಸುವ ನಿರೀಕ್ಷೆ ಇದ್ದು, ಎಲ್ಲರಿಗೂ ಊಟ-ಉಪಹಾರಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಉದ್ಯೋಗಾಕಾಂಕ್ಷಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಈ ಉದ್ಯೋಗ ಮೇಳದ ಆಮಂತ್ರಣ ಪತ್ರಿಕೆಯನ್ನು ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿಡುಗಡೆಗೊಳಿಸಿ ಕೆನರಾ ಕಾಲೇಜು ಸೊಸೈಟಿಯ ಕಾರ್ಯದರ್ಶಿಗಳಾದ ಶ್ರೀ.ಸುಧಾಕರ.ವಿ.ನಾಯಕ ಇವರು ಮಾತನಾಡುತ್ತಾ ಈ ಬೃಹತ್ ಉದ್ಯೋಗ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಧವೀಧರರು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಕರೆ ನೀಡಿದರು.
ಈ ಸಂದರ್ಭದಲ್ಲಿ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ|| ಪ್ರೀತಿ ಭಂಡಾರಕರ್, ಉತ್ತರ ಕನ್ನಡ ಜಿಲ್ಲಾ ಶಿಕ್ಷಕ/ಶಿಕ್ಷಕಿಯರ ನಿರಂತರ ಸಹಾಯವಾಣಿ ಶಿರಸಿ ಇದರ ಅಧ್ಯಕ್ಷರಾದ ಶ್ರೀ ವಿಶ್ವನಾಥ ಗೌಡ, ಉಪಾಧ್ಯಕ್ಷರಾದ ಕುಮಾರ ಅಕ್ಷಯ್ ಕುಮಾರ್, ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಶಿಕ್ಷಕ ಉಪನ್ಯಾಸಕರಾದ ಡಾ||ಡಿ.ಡಿ.ಭಟ್, ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಜಿ.ಡಿ. ಭಟ್ ಉಪಸ್ಥಿತರಿದ್ದರು.