ಶಿರಸಿ: ವೃಕ್ಷಲಕ್ಷ ಆಂದೋಲನದ ತಜ್ಞರ ತಂಡವು ಚಂದ್ರಗುತ್ತಿ ಜನರ ಆಹ್ವಾನದಂತೆ ಮಾರ್ಚ್ 2ನೇ ವಾರ ಚಂದ್ರಗುತ್ತಿಗೆ ಭೇಟಿ ನೀಡಿ ಸ್ಥಳ ಸಮೀಕ್ಷೆ ಮಾಡಿ ನಂತರ ಸ್ಥಳೀಯ ಗ್ರಾಮ ಪಂಚಾಯಿತಿ ಜೀವ ವೈವಿಧ್ಯ ಸಮಿತಿಯವರನ್ನು ಭೇಟಿ ಮಾಡಿತ್ತು.
ಮಾರ್ಚ್ 28ರಂದು ಚಂದ್ರಗುತ್ತಿ ಗ್ರಾಮದ ಜನರ ಜೊತೆ ಶಿವಮೊಗ್ಗ ಜಿಲ್ಲಾಧಿಕಾರಿಗಳು ಭೇಟಿ ಮಾಡಿ ಅಲ್ಲಿನ ಪರಿಸ್ಥಿತಿಯ ವರದಿಯನ್ನು ನೀಡಿತು.ಅಂತೆಯೇ ಜಿಲ್ಲಾಧಿಕಾರಿಗಳು ಏ.8ರಂದು ಅಧಿಕಾರಿಗಳ ತಂಡವನ್ನು ಚಂದ್ರಗುತ್ತಿಗೆ ಕಳಿಸಿ ಸ್ಥಳ ವರದಿ ಪಡೆದರು.
ವರದಿಯಲ್ಲೇನಿದೆ?
ಸಿದ್ದಾಪುರ,ಶಿರಸಿ ತಾಲೂಕುಗಳಿಗೆ ಹೊಂದಿಕೊಂಡಿರುವ ಸೊರಬ ತಾಲೂಕಿನ ಚಂದ್ರಗುತ್ತಿ ಹೋಬಳಿಯ ಹಳ್ಳಿಗಳು ಭಾರೀ ಗಣಿಗಾರಿಕೆಯಿಂದ ನಿರ್ಜೀವ ಆಗುವ ಪರಿಸ್ಥಿತಿ ಬಂದಿದೆ. ಚಂದ್ರಗುತ್ತಿ ಬಸ್ತಿಕೊಪ್ಪದಲ್ಲಿ ನಡೆದಿರುವ ಗಣಿಗಾರಿಕೆಯಿಂದ ಪ್ರಸಿದ್ಧ ರೇಣುಕಾಂಬಾ ದೇವಾಲಯದ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದ್ದು,ಸ್ಪೋಟದಿಂದ ಗ್ರಾಮಗಳ ಮನೆಗಳು ಬಿರುಕುಬಿಟ್ಟಿವೆ. ಕೃಷಿ ತೋಟಗಾರಿಕೆ ನಾಶವಾಗಿ ಬರಗಾಲ ಎದುರಿಸುತ್ತಿದ್ದು,ಬೋರ್ ವೆಲ್, ತೆರೆದ ಬಾವಿಗಳಲ್ಲಿ ಇರುವ ಅಲ್ಪಸ್ವಲ್ಪ ನೀರು ಕೂಡ ಮಾಲಿನ್ಯವಾಗಿದೆ. ಪ್ರತಿದಿನ ನಡೆಯುವ ಸ್ಪೋಟಕದಿಂದಾಗಿ ಆರೋಗ್ಯ ಪೂರ್ಣ ಹಾಳಾಗಿದ್ದು, ಗರ್ಭಪಾತ,ಕ್ಷಯ, ಹೃದಯ ಕಾಯಿಲೆಗಳು ಹೆಚ್ಚಾಗಿವೆ.
ವರದಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಏ.18ರ ಬೆಳಿಗ್ಗೆ ಸ್ವತಃ ಚಂದ್ರಗುತ್ತಿ ಗಣಿಗಾರಿಕೆ ಸ್ಥಳ ಪರಿಶೀಲಿಸಿ ಕಾಮಗಾರಿ ನಿಲ್ಲಿಸಿದರು. ವೃಕ್ಷಲಕ್ಷ ಆಂದೋಲನ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ ಚಂದ್ರಗುತ್ತಿಯ ಸುತ್ತಲಿನ ಹಳ್ಳಿಗಳು ಸೇರಿದಂತೆ ಶಿರಸಿ,ಸಿದ್ದಾಪುರ ತಾಲೂಕಿನ ಅರಣ್ಯ, ಹಳ್ಳಿಗಳು,ಜಲಮೂಲಗಳ ಮೇಲೆ ಗಣಿಗಾರಿಕೆ ದುಷ್ಪರಿಣಾಮ ಹೆಚ್ಚಾಗಿದೆ ಎಂಬ ತಜ್ಞರ ವರದಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ರಾಜ್ಯ ಗಣಿ, ಅರಣ್ಯ, ಪರಿಸರ ಇಲಾಖೆ ಮುಖ್ಯಸ್ಥರ ಗಮನ ಸೆಳೆಯಲಾಗಿದ್ದು ಚಂದ್ರಗುತ್ತಿ,ಬಸ್ತಿಕೊಪ್ಪ ಹಳ್ಳಿಗಳ ಜಲ, ಆರೋಗ್ಯ, ಸಂಪರ್ಕ, ಕೃಷಿ ಪರಿಸ್ಥಿತಿಗಳಿಗೆ ಪರಿಹಾರ ನೆರವು ನೀಡುವ ಕುರಿತು ಗ್ರಾಮೀಣ ಅಭಿವೃದ್ಧಿ ಇಲಾಖೆಯ ಧಾವಿಸಬೇಕು ಎಂದು ಮನವಿ ಮಾಡಿದೆ.