ಸಿದ್ದಾಪುರ: ನೆಮ್ಮದಿ, ಸಮಾಧಾನ, ಸಂತೃಪ್ತಿ ಮಂದಿರದಲ್ಲಿ ಸಿಗುತ್ತವೆ. ಗುರುಗಳನ್ನು ನಂಬಿದರೆ ನಮ್ಮನ್ನು ಯಾವಾಗಲು ಕೈ ಬಿಡುವುದಿಲ್ಲ. ಗುರುಗಳ ಮಾರ್ಗದರ್ಶನದಲ್ಲಿ ನಡೆದರೆ ಅಂದುಕೊಂಡದನ್ನು ಸುಲಭವಾಗಿ ಸಾಧಿಸಬಹುದು ಎಂದು ಚಿತ್ರದುರ್ಗದ ಮಾಡಿವಾಳ ಮಾಚಿದೇವ ಮಠದ ಜಗದ್ಗುರು ಡಾ.ಬಸವ ಮಾಚಿದೇವ ಮಹಾಸ್ವಾಮಿ ಹೇಳಿದರು.
ತಾಲೂಕಿನ ಹೆರವಳ್ಳಿಯ ಶ್ರೀ ಮಡಿವಾಳ ಮಾಚಿದೇವರ 8ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಧರ್ಮ ಸಭೆಯ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ನಮ್ಮಲ್ಲಿರುವ ಶಾರೀರಿಕ ಶಕ್ತಿಯಿಂದ ನಮ್ಮ ಕುಟುಂಬ, ಗ್ರಾಮದ ಶಕ್ತಿಯುತವಾಗಿ ಆಗಬಹುದು. ಒಂದಿಷ್ಟು ಗಳಿಸಬಹುದು. ಆದರೆ ಉಳಿಸಿಕೊಳ್ಳುವುದು ಕಡಿಮೆಯಾಗಿರುತ್ತದೆ. ಉಳಿಸಿಕೊಳ್ಳುವ ಶಕ್ತಿ ಇರಬೇಕೆಂದರೆ ನಮ್ಮೊಳಗಿನ ಆಂತರಿಕ ಶಕ್ತಿ ಜಾಗೃತವಾಗಬೇಕು. ಪ್ರತಿದಿನ ಮಾಚಿದೇವರ ದರ್ಶನ ಮಾಡಿದರೆ ನಮ್ಮೊಳಗಿನ ಆಂತರಿಕ ಶಕ್ತಿ ಜಾಗೃತವಾಗುತ್ತದೆ ಎಂದರು.
ತಾಲೂಕು ಮಡಿವಾಳ ಸಮಾಜದ ಅಧ್ಯಕ್ಷ ಪಿ.ಬಿ.ಹೊಸುರು ಮಾತನಾಡಿ, ಕೊರೋನಾ ಕಾರಣದಿಂದ ಇಂದು ಮಾನವೀಯತೆಯಿಂದ ಇತರರೊಂದಿಗೆ ಉತ್ತಮ ಸಂಬಂಧದೊಂದಿಗೆ ಜೀವನ ನಡೆಸುವುದನ್ನು ಕಲಿತಿದ್ದೇವೆ. ಮಠದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು. ನಮ್ಮ ಮಠ ಎಂಬ ಭಾವನೆ ಎಲ್ಲರಲ್ಲೂ ಬರಬೇಕು. ಗುರುಗಳ ಮಾರ್ಗದರ್ಶನ ಇದ್ದರೆ ನಮ್ಮ ಎಲ್ಲಾ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಿಕೊಳ್ಳಬಹುದು ಎಂದರು.
ಇದೇ ಸಂದರ್ಭದಲ್ಲಿ 17 ವರ್ಷ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ವಿನಾಯಕ ಮಡಿವಾಳ ಹೆರವಳ್ಳಿ ಹಾಗೂ ಎಂಡಿ ಆಯುರ್ವೇದ (ಜನರಲ್ ಮೆಡಿಸಿನ್)ದಲ್ಲಿ ಗದಗ ಕಾಲೇಜಿಗೆ ಪ್ರಥಮ ಬಂದು ಈಗ ಸಿದ್ದಾಪುರದ ಧನ್ವಂತರಿ ಆಯುರ್ವೇದ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಚೈತ್ರಿಕಾ ಬಿ.ಹೊಸೂರ ಅವರನ್ನು ಗ್ರಾಮದ ಪರವಾಗಿ ಸನ್ಮಾನಿಸಲಾಯಿತು.
ಸದಾನಂದ ಗೌಡ ಸ್ವಾಗತಿಸಿ ನಿರೂಪಿಸಿದರು. ಗ್ರಾಮ ಕಮಿಟಿಯ ಅಧ್ಯಕ್ಷ ಕೃಷ್ಣ ಮಡಿವಾಳ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ವಾರ್ಷಿಕೋತ್ಸವ: ಮಡಿವಾಳ ಮಾಚಿದೇವರ 8ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮಗಳು ಏ. 17 ಮತ್ತು 18ರಂದು ನಡೆಯಿತು. ಗಂಗಾ ಪೂಜೆ, ದೇವರಿಗೆ ಅಭಿಷೇಕ, ಪಲ್ಲಕ್ಕಿ ಉತ್ಸವ, ರುದ್ರಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ ಪ್ರಸಾದ ವಿತರಣೆ, ರುದ್ರಾಭಿಷೇಕ, ಅಷ್ಟೋತ್ತರ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮಗಳು ನಡೆದವು.
ಶರಸೇತು ಬಂಧನ ಯಕ್ಷಗಾನ ವ್ಯಾಖ್ಯಾನ ಪ್ರದರ್ಶನ: ಶ್ರೀಮಡಿವಾಳ ಮಾಚಿದೇವರ 8ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಶ್ರೀಅನಂತ ಯಕ್ಷಕಲಾ ಪ್ರತಿಷ್ಠಾನ ಹಾಗೂ ಕನ್ನಡ ಸಂಸ್ಕ್ರತಿ ಇಲಾಖೆ ಸಹಯೋಗದಲ್ಲಿ ಶರಸೇತು ಬಂಧನ ಯಕ್ಷಗಾನ ವ್ಯಾಖ್ಯಾನ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಕೇಶವ ಹೆಗಡೆ ಕೋಳಗಿ ಮತ್ತು ಮಹೇಶ್ ಹೆಗಡೆ ಯವರು ತಮ್ಮ ಸುಶ್ರಾವ್ಯ ಕಂಠದಿಂದ ಹಾಡುಗಳ ಮೂಲಕ ಶಂಕರ ಭಾಗವತ ಯಲ್ಲಾಪುರ ವಾದಕರಾಗಿ ಹಾಗೂ ಗಣೇಶ ಗಾಂಕರ್ ಚಂಡೆ ವಾದಕರಾಗಿ ಕೇಳುಗರನ್ನು ರಂಜಿಸಿದರು.
ಅಶೋಕ ಭಟ್ ಬ್ರಾಹ್ಮಣನ ಪಾತ್ರದಲ್ಲಿ, ಪ್ರಭಾಕರ ಹೆಗಡೆ ಅರ್ಜುನನ ಪಾತ್ರದಲ್ಲಿ, ವಿದ್ವಾನ್ ದತ್ತಮೂರ್ತಿ ಭಟ್ ಹನುಮಂತನ ಪಾತ್ರದಲ್ಲಿ, ವೆಂಕಟೇಶ ಹೆಗಡೆ ಶ್ರೀರಾಮನ ಪಾತ್ರದಲ್ಲಿ ನೋಡುಗರಿಗೆ ರಂಜಿಸಿದರು.