ಭಟ್ಕಳ: ನಮ್ಮ ಹಿರಿಯರು ದೇವಾಲಯವನ್ನು ರಚಿಸಿರುವುದು ಯಾವುದೇ ಸುಂದರತೆ, ಮನಮೋಹಕತೆಯ ಆಧಾರದ ಮೇಲಷ್ಟೇ ಅಲ್ಲ; ಭಗವಂತನ ಆವಿರಭಾವದ ಸೃಷ್ಟಿಯ ಕಾರಣಕ್ಕೆ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಅವರು ಮಂಗಳವಾರದಂದು ಸಾರದಹೊಳೆಯ ಶ್ರೀಹಳೆಕೋಟೆ ಹನುಮಂತ ದೇವಸ್ಥಾನದ ಪುನರ್ ನಿರ್ಮಾಣ ಪ್ರತಿಷ್ಠಾ ಕಾರ್ಯಕ್ರಮದ 7ನೇ ದಿನದ ಧಾರ್ಮಿಕ ಸಭೆ ಸಮಾರೋಪ ಸಮಾರಂಭದ ಉದ್ಘಾಟಕರಾಗಿ ಮಾತನಾಡಿದರು.
ಈ ಸುಂದರ ದೇವಸ್ಥಾನದಲ್ಲಿ ದೈವಿಕ ಶಕ್ತಿಯಿರುವುದು ಇಂದು ದೇವಸ್ಥಾನದ ಮೆಟ್ಟಿಲು ಹತ್ತುವ ವೇಳೆ ದೈವಿಕ ಭಾವ ಜಾಗೃತಿಗೊಂಡ ಬಳಿಕ ಅರ್ಥವಾಯಿತು. ಅದ್ಭುತ ಶಾಸ್ತ್ರೋಕ್ತವಾದ ವಾಸ್ತು ಶಿಲ್ಪದ ರಚನೆಯಲ್ಲಿ ಹನುಮದೇವನ ಮಂದಿರ ನಿರ್ಮಿಸಿದ್ದು, ಅದರಲ್ಲು ಎಲ್ಲಾ ಸಮಾಜದ ಮುಖಂಡರಿಗೆ ವೀಳ್ಯಕೊಟ್ಟು ಸ್ವಾಗತಿಸಿ ಅದ್ದೂರಿ ಹಿಂದು ಸಮಾಜದ ಜಾಗೃತಿಗೆ ಕಾರ್ಯ ಸಾಧಿಸಿದಂತಾಗಿದೆ. ನಮ್ಮ ಹಿರಿಯರು ಹಿಂದೆ ಮಾಡಿದ ಯಾವುದೇ ಕೆಲಸ ಅಥವಾ ಕೈಂಕರ್ಯಗಳಲ್ಲಿ ವ್ಶೆಜ್ಞಾನಿಕತೆ ನೆಲೆಯಲ್ಲಿಯೇ ರಚಿಸಿದ್ದಾರೆ. ದೇವಾಲಯದಲ್ಲಿ ಭಗವಂತನ ಆವಿರಭಾವದ ಸೃಷ್ಟಿಯೇ ಮೂಲ ಉದ್ದೇಶವಾಗಿದೆ. ಶಕ್ತಿಯ ಅವಿರಭಾದ ದೇವ ಸಂಕಲ್ಪದ ನೆಲೆಯಲ್ಲಿ ದೇವಾಲಯದ ರಚನೆ ಆಗಬೇಕು. ನಮ್ಮ ಪೂರ್ವಿಕರು ಹಿಂದೆ ವಿಜ್ಞಾನ, ಜ್ಞಾನದಡಿಯಲ್ಲಿಯೇ ಮುಂದಿನ ಪೀಳಿಗೆಗೆ ವಿಚಾರವನ್ನು ಬಿಟ್ಟು ಹೋಗಿದ್ದಾರೆ ಅವೆಲ್ಲವನ್ನು ನಾವು ಅರ್ಥೈಸಿಕೊಳ್ಳಬೇಕಾಗಿದೆ. ಹಿರಿಯರ, ಸಿದ್ಧರ ಜೊತೆಗೆ ಚರ್ಚಿಸಿ ವಿಜ್ಞಾನ ರಚನೆಗೆ ನಾಂದಿ ಹಾಕಲಾಗಿದೆ ಎಂದರು.
ಜೀವನದ ಮೌಲ್ಯ, ಮಹತ್ವ ಅರಿಯಲು ದೇವಸ್ಥಾನದ ಸಂಗ ಅತ್ಯಗತ್ಯ. ದೇವಸ್ಥಾನ ಶಾಂತಿ ನೆಮ್ಮದಿಯ ಕೇಂದ್ರವಾಗಿದ್ದು, ದೇವರಲ್ಲಿ ನಮ್ಮ ಆಸೆ ಆಕಾಂಕ್ಷೆಯನ್ನು ಬೇಡುವ ಬದಲು ಜೀವನದ ಸತ್ಯ ತಿಳಿಸು ಎಂದು ಬೇಡಬೇಕು ಆಗ ಸಾಕ್ಷಾತ್ಕಾರವಾಗಲಿದೆ ಎಂದ ಅವರು, ಮನುಷ್ಯನು ದೇವರನ್ನು ತನ್ನ ಎಲ್ಲಾ ಭ್ರಷ್ಟ ಕೆಲಸದಲ್ಲಿ ಬಳಸಿಕೊಳ್ಳುವ ಮಟ್ಟಿಗೆ ತಲುಪಿಸಿದ್ದು ಆದರೆ ನಾವೆಲ್ಲರು ಸರಕಾರಿ ಕಚೇರಿಯ ಅಧಿಕಾರಿಗಳ ಭ್ರಷ್ಟತೆಯ ಬಗ್ಗೆ ಮಾತನಾಡುತ್ತೇವೆ. ಇದು ಸರಿಯೇ? ಎಂದು ಪ್ರಶ್ನಿಸಿದರು.
ಅಪೇಕ್ಷೆ ಇಲ್ಲದೇ ಬೇಡುವುದು ನಿಜವಾಗಿ ದೇವರಿಗೆ ತೋರುವ ಭಕ್ತಿಯಾಗಿದೆ. ಹೊರೆಕಾಣಿಕೆ ನಮ್ಮಲ್ಲಿನ ಶ್ರಮವನ್ನು ದೇವರ ಪಾದಕ್ಕೆ ಅರ್ಪಿಸುವುದೇ ಹೊರತು ನಮ್ಮ ಸಂಪತ್ತು ತೋರ್ಪಡಿಕೆಯ ದಾರಿಯಾಗಬಾರದು. ಇರುವವರು ಹಣ ಕೊಟ್ಟು ದೇವರಲ್ಲಿ ಬೇಡಲಿದ್ದು, ಇಲ್ಲದಿರುವವರು ತಮ್ಮ ಶಕ್ತಿ, ಶ್ರಮದಿಂದ ದೈವಿಕ ಶಕ್ತಿ ಪಡೆಯುವಿಕೆಯಲ್ಲಿ ಕೆಲಸ ಮಾಡಬೇಕು ಎಂದರು. ನಿಜವಾದ ಪ್ರಜೆ ಆಗಬೇಕಾಗಿರುವುದು ನಮ್ಮ ಮನದಲ್ಲಿ, ಹೃದಯದಲ್ಲಿ ಆಗಬೇಕಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಈ ದೇವಾಲಯದ ನಿರ್ಮಾಣದಿಂದ ಹಿಡಿದು ಲೋಕಾರ್ಪಣೆಯ ತನಕ ಇಲ್ಲಿನ ಜನರ ಒಗ್ಗಟ್ಟಿನ ಪ್ರದರ್ಶನ ಕಂಡು ನಿಬ್ಬೆರಗಾಗಿದ್ದೇನೆ. ಅಚ್ಚುಕಟ್ಟಿನ ಕಾರ್ಯಕ್ರಮವನ್ನು ಮಾಡಿ ಸಮಸ್ತ ಹಿಂದು ಧರ್ಮವನ್ನು ಒಂದೆಡೆ ಸೇರುವಂತೆ ಸಮಾವೇಶದಂತೆ ಜನರು ಸೇರಿರುವುದು ಸಾರದಹೊಳೆ ಹನುಮನ ಶಕ್ತಿಯಿಂದ ಮಾತ್ರ ಸಾಧ್ಯವಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದಂತೆ ಹಳೆಕೋಟೆ ಸಾರದಹೊಳೆಯಲ್ಲಿ ಹನುಮಂತನ ಮಂದಿರ ನಿರ್ಮಾಣ ಎರಡು ಸಂತಸ ತಂದ ವಿಚಾರ ಎಂದ ಅವರು ಇದು ಮುಂದಿನ ದಿನದಲ್ಲಿ ಅತೀ ದೊಡ್ಡ ಶಕ್ತಿ ಕೇಂದ್ರವಾಗಿ ರಾಜ್ಯದೆಲ್ಲಡೆ ಪರಿಚಯಿಸುವಂತೆ ಹನುಮಂತ ದೇವರು ನಿಮಗೆಲ್ಲ ಶಕ್ತಿ ನೀಡಲಿ ಎಂದು ಹೇಳಿದರು.
ವೇದಿಕೆಯಲ್ಲಿ ಶಾಸಕ ಸುನೀಲ ನಾಯ್ಕ, ಕಾಸ್ಕಾರ್ಡ್ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಈಶ್ವರ ನಾಯ್ಕ, ದೀಪಕ ನಾಯ್ಕ ಮಂಕಿ, ನಾಮಧಾರಿ ಸಮಾಜದ ತಾಲೂಕು ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ, ಹಳೆಕೋಟೆ ಹನುಮಂತ ದೇವಸ್ಥಾನದ ಮೊಕ್ತೇಸರ ಮಂಡಳಿ ಅಧ್ಯಕ್ಷರು, ಜೀರ್ಣೋದ್ಧಾರ ಮಂಡಳಿ ಅಧ್ಯಕ್ಷರು ಮುಂತಾದವರು ಇದ್ದರು.