ಶಿರಸಿ: ಹೆಗಡೆಕಟ್ಟಾದ ‘ಶ್ರೀ ವಿದ್ಯಾ ನೃತ್ಯ ಸದನ’ ಇದರ ವತಿಯಿಂದ ಭರತನಾಟ್ಯ ಕಾರ್ಯಕ್ರಮ ದಿ. 17 ಭಾನುವಾರ ಸಂಜೆ 5 ಗಂಟೆಗೆ ಶ್ರೀ ಗಜಾನನ ಪ್ರೌಢಶಾಲೆ ಹೆಗಡೆಕಟ್ಟಾ ಸಭಾಭವನದಲ್ಲಿ ನಡೆಯಿತು. ಮಕ್ಕಳ ಸಾಧನೆಗೆ ಪ್ರೋತ್ಸಾಹ ಅಗತ್ಯ. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಾರ್ಯಕ್ರಮಗಳು ವಿರಳವಾಗಿದೆ. ಅದೇ ರೀತಿ ಪ್ರೇಕ್ಷಕರಲ್ಲಿ ಕೂಡ ಆಸಕ್ತಿ ಕಡಿಮೆ ಆಗುತ್ತಿದೆ ಎಂದು ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ಟಿಎಂಎಸ್ ಉಪಾಧ್ಯಕ್ಷ ಎಂ. ಪಿ.ಹೆಗಡೆ ಕೊಟ್ಟೆಗದ್ದೆ ಹೇಳಿದರು. ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು ಭರತನಾಟ್ಯ ದಂತಹ ಕಾರ್ಯಕ್ರಮ ನಡೆಯಬೇಕು. ಪ್ರೇಕ್ಷಕರೂ ಕಲೆಯನ್ನು ಬೆಳೆಸಬೇಕಿದೆ. ಮಕ್ಕಳಿಗೆ ಪ್ರೋತ್ಸಾಹ ನೀಡುವಂತಹ ಕಾರ್ಯವನ್ನು ವಿದುಷಿ ಜಯಶ್ರೀ ಹೆಗಡೆ ಮಾಡುತ್ತಿದ್ದಾರೆ ಎಂದು ಎಂ. ಪಿ. ಹೆಗಡೆ ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಗಜಾನನ ಪ್ರೌಢಶಾಲೆ ಹೆಗಡೆಕಟ್ಟಾ ಇದರ ಅಧ್ಯಕ್ಷ ಎಂ. ಆರ್.ಹೆಗಡೆ ಹೊನ್ನೆಕಟ್ಟಾ ಗ್ರಾಮೀಣ ಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತಂದು ಜನರಲ್ಲಿ ಬಾಂಧವ್ಯದ ಬೆಸುಗೆ ನೀಡುತ್ತಿರುವ ವಿದುಷಿ ಜಯಶ್ರೀ ಹೆಗಡೆ ಹಾಗೂ ಅವರ ಕುಟುಂಬದ ಕಾರ್ಯ ಮಾದರಿ. ಬಹಳ ವರ್ಷಗಳಿಂದ ಹೆಗಡೆಕಟ್ಟಾ ಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಖ್ಯೆ ವಿರಳವಾಗಿದೆ. ಈ ನಿಟ್ಟಿನಲ್ಲಿ ಈ ತರಹದ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಹಾರೈಸಿದರು. ‘ಶ್ರೀ ವಿದ್ಯಾ ನೃತ್ಯ ಸದನ’ ದ ವಿದುಷಿ ಜಯಶ್ರೀ ಹೆಗಡೆ ಮಾತನಾಡಿ ಪುರಾತನ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ತಮ್ಮ ಉದ್ದೇಶ ಆರ್ಥಿಕವಾಗಿ ಕಾರ್ಯಕ್ರಮ ಸಂಘಟನೆ ಸುಲಭವಲ್ಲದಿದ್ದರೂ ಕಲೆ ಬೆಳೆಸುವ ತೃಪ್ತಿಯಿದೆ ಎಂದರು.
ವಿದುಷಿ ಅನುರಾಧಾ ಹೆಗಡೆ ಅವರ ನೂಪುರ ನೃತ್ಯ ಶಾಲೆ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು. ಜಯಶ್ರೀ ಹೆಗಡೆ ಅವರು ನಡೆಸುತ್ತಿರುವ ‘ಶ್ರೀವಿದ್ಯಾ ನೃತ್ಯ ಸದನ’ ದ ನಾಣಿಕಟ್ಟಾ ಮತ್ತು ಹೆಗಡೆಕಟ್ಟಾ ಇದರ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು. ವಿದುಷಿ ಕುಮಾರಿ ಕೀರ್ತನಾ ರಾ ಹೆಗಡೆ, ಹಾಡುಗಾರಿಕೆಯಲ್ಲಿ ನಂದಿನಿ ಬಸವರಾಜ್ ಸಾಗರ, ಮೃದಂಗದಲ್ಲಿ ನಾರಾಯಣ ಬಳ್ಳಕ್ಕುರಾಯ, ವಯೋಲಿನ್ ನಲ್ಲಿ ಕುಮಾರ್ ಪ್ರಣೀತ ಬಳ್ಳಕ್ಕುರಾಯ ಪಾಲ್ಗೊಂಡಿದ್ದರು. ವಿದ್ಯಾ ಹೆಗಡೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು ಕಾರ್ಯಕ್ರಮದ ವಿಶೇಷ “ರಾಮಕಥಾ” ನೃತ್ಯ ಪ್ರದರ್ಶನ ಗಮನ ಸೆಳೆಯಿತು.