ಅಂಕೋಲಾ: ತಾಲೂಕಿನ ಕೆ.ಎಲ್.ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ಆಶ್ರಯದಲ್ಲಿ ಮೂರನೇ ವರ್ಷದ ಶಿಕ್ಷಕರ ಬೃಹತ್ ಉದ್ಯೋಗಮೇಳವನ್ನು ಆಯೋಜಿಸಲಾಗಿದ್ದು, ಪದವೀಧರರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೆಎಲ್ಇ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಡಾ.ಡಿ.ಎಲ್.ಭಟ್ಕಳ ಕರೆನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರುದ್ಯೋಗ ಸಮಸ್ಯೆ ಹಾಗೂ ಪದವೀಧರ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರಹಾಕಲು ಈ ಉದ್ಯೋಗಮೇಳ ಮಹತ್ತರವಾದ ವೇದಿಕೆಯಾಗಲಿದೆ. ಉದ್ಯೋಗ ಮೇಳದಲ್ಲಿ ಖಾಸಗಿ ಅನುದಾನ ರಹಿತ ಶಾಲಾ ಕಾಲೇಜುಗಳು ಭಾಗವಹಿಸಲಿದ್ದು, ಉತ್ತರ ಕರ್ನಾಟಕದಿಂದ ಅತಿ ಹೆಚ್ಚಿನದಾಗಿ ವಿದ್ಯಾ ಸಂಸ್ಥೆಗಳು ಬರುತ್ತಿದೆ. ಈ ಉದ್ಯೋಗ ಮೇಳದಲ್ಲಿ ಎನ್ಟಿಸಿ, ಡಿ.ಇಡಿ, ಬಿ.ಇಡಿ, ಬಿಪಿಇಡಿ, ಎಂಇಡಿ, ಎಂಪಿಇಡಿ, ಎಂಎ, ಎಂಎಸ್ಸಿ, ಎಂಕಾಂ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರು ಆಗಿರುವ ಅಥವಾ 4ನೇ ಸೆಮಿಸ್ಟರ್ ಪರೀಕ್ಷೆ ಬರೆದಿರುವ ಎಲ್ಲಾ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಶಿಕ್ಷಕರ ಬೃಹತ್ ಉದ್ಯೋಗ ಮೇಳದಲ್ಲಿ ರಾಜ್ಯಾದ್ಯಂತ, ಸ್ಥಳೀಯ ಹಾಗೂ ಹೊರಗಿನ ಸುಮಾರು 60ಕ್ಕೂ ಹೆಚ್ಚಿನ ಶೈಕ್ಷಣಿಕ ಸಂಸ್ಥೆಗಳು ಹಾಗೂ ವಿವಿಧ ಬಾಗಗಳ 500 ಕ್ಕೂ ಅಧಿಕ ಅಭ್ಯರ್ಥಿಗಳು ಬಾಗವಹಿಸುವ ನಿರೀಕ್ಷೆ ಇದೆ ಎಂದರು.
ಕೆ.ಎಲ್.ಇ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿನಾಯಕ ಹೆಗಡೆ ಮಾತನಾಡಿ, ಕಳೆದ ವರ್ಷ ನಡೆದ ಉದ್ಯೋಗ ಮೇಳದಲ್ಲಿ 49 ಶೈಕ್ಷಣಿಕ ಸಂಸ್ಥೆಗಳು ಹಾಗೂ 401 ಅಭ್ಯರ್ಥಿಗಳು ಭಾಗವಹಿಸಿದ್ದು, ಅದರಲ್ಲಿ ಅನೇಕ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶ ದೊರೆತಿದೆ. ಈ ವರ್ಷ ಸಹ ಸುಮಾರು 500ಕ್ಕೂ ಅಧಿಕ ಉದ್ಯೋಗ ಅವಕಾಶಗಳಿದ್ದು, ಅದನ್ನು ಸದುಪಯೋಗಪಡಿಸುವ ಉದ್ದೇಶ ಹೊಂದಲಾಗಿದೆ. ಅದೇ ದಿನ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ.
ಶಿಕ್ಷಕರ ಬೃಹತ್ ಉದ್ಯೋಗ ಮೇಳವನ್ನು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಸಚಿವರಾದ ಬಿ.ಸಿ.ನಾಗೇಶ, ಅಂಕೋಲಾ- ಕಾರವಾರ ಕ್ಷೇತ್ರದ ಶಾಸಕಿ ರೂಪಾಲಿ ಎಸ್.ನಾಯ್ಕ, ಪಶ್ಚಿಮ ಪದವೀಧರ ಮತಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಕೆಎಲ್ಇ ಸಂಸ್ಥೆಯ ನಿರ್ದೇಶಕ ಜಯಾನಂದ ಮುನವಳ್ಳಿ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಎಲ್ಇ ಸಮೂಹ ಸಂಸ್ಥೆಗಳ ಸದಸ್ಯೆ ಡಾ.ಮೀನಲ್ ನಾರ್ವೇಕರ, ಪ್ರಾಯೋಗಿಕ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ನಾಗರಾಜ ಸರೂರು, ಕಿಂಡರ ಗಾರ್ಟನ್ ಶಾಲೆಯ ಮುಖ್ಯಾಧ್ಯಾಪಕಿ ವಸಂತಿ ಎಲ್.ಬೋರಕರ್, ಪಿಟಿಟಿಐ ಮಹಾವಿದ್ಯಾಲಯದ ಪ್ರಾಚಾರ್ಯೆ ಸರೋಜಿನಿ ಹಾರವಾಡೇಕರ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ಡಾ.ಸ್ಮಿತಾ ಫಾತರಪೇಕರ, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯೆ ನಾಗಮ್ಮ ಮಮದಾಪುರ, ಕೌಟುಂಬಿಕ ಸಲಹಾ ಕೇಂದ್ರದ ಮುಖ್ಯಸ್ಥ ತಿಮ್ಮಣ್ಣ ಭಟ್ಟ ಇದ್ದರು.
ಉದ್ಯೋಗ ಮೇಳದ ಕುರಿತು ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯ ಡಾ.ವಿನಾಯಕ ಜಿ.ಹೆಗಡೆ (ಮೊ.ಸಂ: 94800 48963), ಉಪನ್ಯಾಸಕರಾದ ಮಂಜುನಾಥ ಇಟಗಿ (ಮೊ.ಸಂ: 99008 58026), ಪೂರ್ವಿ ಹಳ್ಗೇಕರ (ಮೊ.ಸಂ: 81056 60565) ಅವರ ದೂರವಾಣಿಗೆ ಸಂಪರ್ಕಿಸಬಹುದಾಗಿದೆ.
ಏಪ್ರಿಲ್ 22 ರಂದು ನಡೆಯುವ ಶಿಕ್ಷಕರ ಬೃಹತ್ ಉದ್ಯೋಗಮೇಳವು ಪದವೀಧರ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರವಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ. ಆಯ್ಕೆಯಾದ ನಂತರ ಸಂಸ್ಥೆಯ ಬಗ್ಗೆ ತಿಳಿದುಕೊಂಡು ಪಾಲಕ- ಪೆÇೀಷಕರೊಂದಿಗೆ ಸಮಾಲೋಚನೆ ನಡೆಸಿ ಕರ್ತವ್ಯಕ್ಕೆ ಹಾಜಾರಾಗಿ. – ಡಾ.ವಿನಾಯಕ ಹೆಗಡೆ, ಕೆ.ಎಲ್.ಇ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ